×
Ad

Aland | ವರದಕ್ಷಿಣೆ ಪದ್ಧತಿಗೆ ಸಂಪೂರ್ಣ ಕಡಿವಾಣ ಹಾಕಬೇಕು : ರಾಜು ಜೆ. ಚವ್ಹಾಣ

Update: 2026-06-23 17:20 IST

ಆಳಂದ : ಲಂಬಾಣಿ ಸಮುದಾಯವು ವರದಕ್ಷಿಣೆ ಪದ್ಧತಿಗೆ ಸಂಪೂರ್ಣ ಕಡಿವಾಣ ಹಾಕಿ, ಸರಳ ವಿವಾಹ, ಶಿಕ್ಷಣ ಹಾಗೂ ಸಾಮಾಜಿಕ-ಆರ್ಥಿಕ ಸಬಲೀಕರಣದತ್ತ ಹೆಜ್ಜೆ ಇಡಬೇಕು ಎಂದು ರಾಜು ಜೆ. ಚವ್ಹಾಣ ಕರೆ ನೀಡಿದರು.

ತಾಲೂಕಿನ ಸೀಡ್ಸ್‌ಫಾರಂ ತಾಂಡಾ, ನೆಹರುನಗರ ತಾಂಡಾ, ಹೆಬಳ್ಳಿ ತಾಂಡಾ, ಪಿ.ಎನ್. ತಾಂಡಾ ಹಾಗೂ ಮೋರಿಸಾಬ್ ತಾಂಡಾಗಳಲ್ಲಿ ಆಯೋಜಿಸಿದ್ದ ಜಾಗೃತಿ ಅಭಿಯಾನದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಬಂಜಾರಾ ಕ್ರಾಂತಿದಳ ಹಾಗೂ ಸೇವಾಲಾಲ್ ಜಯಂತಿ ಸಮಿತಿಯ ಸಂಯುಕ್ತ ಆಶ್ರಯದಲ್ಲಿ ತಾಲೂಕಿನ 52 ತಾಂಡಾಗಳಲ್ಲಿ ವರದಕ್ಷಿಣೆ ನಿರ್ಮೂಲನೆ, ಶಿಕ್ಷಣದ ಮಹತ್ವ ಮತ್ತು ಸರ್ಕಾರಿ ಸೌಲಭ್ಯಗಳ ಕುರಿತು ಜಾಗೃತಿ ಮೂಡಿಸುವ ಅಭಿಯಾನ ಆರಂಭಿಸಲಾಗಿದೆ ಎಂದು ತಿಳಿಸಿದರು.

“ಸುಮಾರು ಮೂರು ದಶಕಗಳ ಹಿಂದೆ ಬಂಜಾರಾ ಸಮುದಾಯದಲ್ಲಿ ಮದುವೆಯ ಸಂದರ್ಭದಲ್ಲಿ ವರನ ಕಡೆಯವರು ವಧುವಿನ ಕುಟುಂಬಕ್ಕೆ ಎತ್ತುಗಳನ್ನು ನೀಡುವ ಪದ್ಧತಿ ಇತ್ತು. ಆದರೆ ಈಗ ಮದುವೆಗಾಗಿ 10ರಿಂದ 15 ಲಕ್ಷ ರೂ. ವರೆಗೆ ಖರ್ಚು ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಇದರಿಂದ ಬಡ ಹಾಗೂ ಮಧ್ಯಮ ವರ್ಗದ ಕುಟುಂಬಗಳು ತೀವ್ರ ಆರ್ಥಿಕ ಸಂಕಷ್ಟ ಅನುಭವಿಸುತ್ತಿವೆ. ಈ ಅನಿಷ್ಟ ಪದ್ಧತಿಯನ್ನು ನಿರ್ಮೂಲನೆಗೊಳಿಸಲು ಸಮಾಜದ ಎಲ್ಲರೂ ಕೈಜೋಡಿಸಬೇಕು” ಎಂದು ಮನವಿ ಮಾಡಿದರು.

ಇನ್ನು ಮುಂದೆ ಬಂಜಾರಾ ಸಮುದಾಯದ ತಾಂಡಾಗಳಲ್ಲಿ ವರದಕ್ಷಿಣೆ ಪಡೆಯುವುದು ಅಥವಾ ನೀಡುವುದನ್ನು ಸಂಪೂರ್ಣ ನಿಷೇಧಿಸಲು ಸಮುದಾಯದ ಹಿರಿಯರು ಹಾಗೂ ಮುಖಂಡರು ಐತಿಹಾಸಿಕ ನಿರ್ಧಾರ ಕೈಗೊಂಡಿದ್ದಾರೆ ಎಂದು ತಿಳಿಸಿದರು.

ಪಟ್ಟಣದ ಬಂಜಾರಾ ಭವನದಲ್ಲಿ ಅಖಿಲ ಇಂಡಿಯಾ ಬಂಜಾರಾ ಸೇವಾ ಸಂಘ ಆಶ್ರಯದಲ್ಲಿ ನಡೆದ ಸಭೆಯಲ್ಲಿ ಈ ನಿರ್ಧಾರಕ್ಕೆ ಸರ್ವಾನುಮತದ ಬೆಂಬಲ ವ್ಯಕ್ತವಾಯಿತು.

ಸಂಘದ ತಾಲೂಕು ಅಧ್ಯಕ್ಷ ವೆಂಕಟೇಶ ರಾಠೋಡ್ ಮಾತನಾಡಿ, ವಿವಾಹ ಕಾರ್ಯಕ್ರಮಗಳಲ್ಲಿ ವರದಕ್ಷಿಣೆ ರೂಪದಲ್ಲಿ ಹಣ, ವಾಹನ ಅಥವಾ ದುಬಾರಿ ಉಡುಗೊರೆಗಳನ್ನು ನೀಡುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ. ನಿಯಮ ಉಲ್ಲಂಘಿಸುವವರಿಗೆ 1 ಲಕ್ಷ ರೂ. ದಂಡ ವಿಧಿಸಲಾಗುವುದು ಎಂದು ಘೋಷಿಸಿದರು.

ಇದಲ್ಲದೆ, ವರದಕ್ಷಿಣೆ ವ್ಯವಹಾರದ ಕುರಿತು ಮಾಹಿತಿ ನೀಡುವವರಿಗೆ 15 ಸಾವಿರ ರೂ. ಬಹುಮಾನ ನೀಡಲಾಗುವುದು ಎಂದು ತಿಳಿಸಿದರು.

ಮದುವೆ ಸಮಾರಂಭಗಳಲ್ಲಿ ಡಿಜೆ, ಧ್ವನಿವರ್ಧಕಗಳ ಅತಿಯಾದ ಬಳಕೆ ಹಾಗೂ ಮದ್ಯಪಾನವನ್ನು ನಿಷೇಧಿಸಲು ತೀರ್ಮಾನಿಸಲಾಗಿದ್ದು, ಸಮುದಾಯದ ಸಾಂಪ್ರದಾಯಿಕ ಆಚರಣೆಗಳಿಗೆ ಹೆಚ್ಚಿನ ಆದ್ಯತೆ ನೀಡಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು.

ಸಭೆಯಲ್ಲಿ ಬಂಜಾರಾ ಕ್ರಾಂತಿದಳದ ರಾಜ್ಯ ಉಪಾಧ್ಯಕ್ಷ ಗೋವಿಂದರಾಜ್, ಜಿಲ್ಲಾಧ್ಯಕ್ಷ ಅಮರೇಶ ರಾಠೋಡ್, ಲಂಬಾಣಿ ತರುಣ ಸಂಘದ ಅಧ್ಯಕ್ಷ ಶಿವಾಜಿ ರಾಠೋಡ್, ಸಮಾಜದ ಮುಖಂಡ ಠಾಕೂರ್‌ಸಿಂಗ್ ರಾಠೋಡ್, ಲಂಬಾಣಿ ವಸತಿ ನಿಲಯದ ಅಧ್ಯಕ್ಷ ಗಂಗಾರಾಮ ಪವಾರ, ಶಿವಾಜಿ ರಾಠೋಡ್ ಹೋದಲೂರು ಸೇರಿದಂತೆ ಹಲವಾರು ಮುಖಂಡರು ಹಾಗೂ ಸಮಾಜದ ಬಾಂಧವರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News