Kalaburagi | ಜೂ.25ರಂದು ಸೂಕ್ಷ್ಮಜೀವಶಾಸ್ತ್ರ ವಿಭಾಗದ ಸುವರ್ಣ ಮಹೋತ್ಸವ, ರಾಷ್ಟ್ರೀಯ ಸಮ್ಮೇಳನ
ಕಲಬುರಗಿ: ಗುಲ್ಬರ್ಗಾ ವಿಶ್ವವಿದ್ಯಾಲಯದ ಸೂಕ್ಷ್ಮಜೀವಶಾಸ್ತ್ರ ಅಧ್ಯಯನ ವಿಭಾಗ ಹಾಗೂ ಹಳೆಯ ವಿದ್ಯಾರ್ಥಿಗಳ ಸಂಘದ ಸಂಯುಕ್ತ ಆಶ್ರಯದಲ್ಲಿ ವಿಭಾಗದ ಸುವರ್ಣ ಮಹೋತ್ಸವದ ಅಂಗವಾಗಿ “ಸೂಕ್ಷ್ಮಜೀವಿಗಳ ವ್ಯಾಪ್ತಿ: ಉತ್ತಮ ನಾಳೆಗಾಗಿ ತಂತ್ರಜ್ಞಾನ” ವಿಷಯಾಧಾರಿತ ಎರಡು ದಿನಗಳ ರಾಷ್ಟ್ರೀಯ ಸಮ್ಮೇಳನವನ್ನು ಜೂನ್ 25 ಮತ್ತು 26 ರಂದು ಆಯೋಜಿಸಲಾಗಿದೆ.
ಜೂನ್ 25ರಂದು ಬೆಳಿಗ್ಗೆ 10 ಗಂಟೆಗೆ ವಿಶ್ವವಿದ್ಯಾಲಯದ ಪ್ಯಾಶ್ಚರ್ ಸಭಾಂಗಣದಲ್ಲಿ ಉದ್ಘಾಟನಾ ಸಮಾರಂಭ ನಡೆಯಲಿದೆ. ಗುಲ್ಬರ್ಗಾ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಶಶಿಕಾಂತ್ ಎಸ್. ಉಡಿಕೇರಿ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದು, ಆಂಧ್ರಪ್ರದೇಶ ವಿಧಾನಸಭಾ ಸದಸ್ಯರು ಹಾಗೂ ಸೂಕ್ಷ್ಮಜೀವಶಾಸ್ತ್ರ ವಿಭಾಗದ ಹಳೆಯ ವಿದ್ಯಾರ್ಥಿ ಗದ್ದೆ ರಾಮಮೋಹನ್ ಸಮ್ಮೇಳನವನ್ನು ಉದ್ಘಾಟಿಸಲಿದ್ದಾರೆ.
ವಿಶ್ರಾಂತ ಕುಲಪತಿ ಡಾ. ದಯಾನಂದ ಅಗಸರ, ಧಾರವಾಡ ಕೃಷಿ ವಿಜ್ಞಾನ ವಿಶ್ವವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕ ಡಾ. ವಿಜಯಕುಮಾರ ಸಾವಳಗಿ, ಕುಲಸಚಿವ ಡಾ. ರಮೇಶ್ ಲಂಡನಕರ್, ಮೌಲ್ಯಮಾಪನ ಕುಲಸಚಿವ ಡಾ. ನಿಂಗಣ್ಣ ಕಣ್ಣೂರು, ಹಣಕಾಸು ಅಧಿಕಾರಿ ಜಯಾಂಬಿಕಾ, ಸಿಂಡಿಕೇಟ್ ಸದಸ್ಯ ಡಾ. ಪೀರಜಾದೆ ಫಹೀಮುದ್ದೀನ್ ಹಾಗೂ ವಿಭಾಗದ ಕಾರ್ಯದರ್ಶಿ ಡಾ. ಚಂದ್ರಕಾಂತ್ ಕೆಳಮನಿ ಗೌರವ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ವಿಭಾಗದ ಸಂಯೋಜಕಿ ಡಾ. ಎಂ.ಬಿ. ಸುಲೋಚನಾ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ಹಳೆಯ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಡಾ. ಕೆ. ಲಿಂಗಪ್ಪ ತಿಳಿಸಿದ್ದಾರೆ.
ರಾಷ್ಟ್ರೀಯ ಸಮ್ಮೇಳನದಲ್ಲಿ ಕೈಗಾರಿಕಾ, ಆಹಾರ, ಡೈರಿ, ವೈದ್ಯಕೀಯ, ರೋಗನಿರ್ಣಯ, ಕೃಷಿ ಮತ್ತು ಪರಿಸರ ಸೂಕ್ಷ್ಮಜೀವಶಾಸ್ತ್ರ, ಜೈವಿಕ ಪ್ರಕ್ರಿಯೆ ಎಂಜಿನಿಯರಿಂಗ್, ಜೀನೋಮಿಕ್ಸ್ ಹಾಗೂ ಜೈವಿಕ ತಂತ್ರಜ್ಞಾನ ಕ್ಷೇತ್ರಗಳಲ್ಲಿನ ಇತ್ತೀಚಿನ ಸಂಶೋಧನೆಗಳು ಮತ್ತು ನವೀನ ತಂತ್ರಜ್ಞಾನಗಳ ಕುರಿತು ಚರ್ಚೆಗಳು ನಡೆಯಲಿವೆ.
ದೇಶದ ವಿವಿಧ ವಿಶ್ವವಿದ್ಯಾಲಯಗಳು, ಸಂಶೋಧನಾ ಸಂಸ್ಥೆಗಳು ಹಾಗೂ ಕೈಗಾರಿಕಾ ಕ್ಷೇತ್ರಗಳ ವಿಜ್ಞಾನಿಗಳು ಮತ್ತು ತಜ್ಞರು ಉಪನ್ಯಾಸ ನೀಡಲಿದ್ದು, ಸಂಶೋಧನಾ ಪ್ರಬಂಧ ಮಂಡನೆ ಹಾಗೂ ಪೋಸ್ಟರ್ ಪ್ರದರ್ಶನವೂ ನಡೆಯಲಿದೆ. ಈ ಸಮ್ಮೇಳನವು ವಿದ್ಯಾರ್ಥಿಗಳು, ಸಂಶೋಧಕರು ಹಾಗೂ ಯುವ ವಿಜ್ಞಾನಿಗಳಿಗೆ ಕ್ಷೇತ್ರದ ಇತ್ತೀಚಿನ ಬೆಳವಣಿಗೆಗಳು ಮತ್ತು ಉದ್ಯೋಗಾವಕಾಶಗಳ ಕುರಿತು ಸಮಗ್ರ ಮಾಹಿತಿ ಒದಗಿಸಲಿದೆ.
1976ರಲ್ಲಿ ದಿವಂಗತ ಡಾ. ಶಿವ ಎಸ್. ರೋಡ್ಗಿ ಸ್ಥಾಪಿಸಿದ ಸೂಕ್ಷ್ಮಜೀವಶಾಸ್ತ್ರ ವಿಭಾಗವು 50 ವರ್ಷಗಳ ಯಶಸ್ವಿ ಪಯಣ ಪೂರ್ಣಗೊಳಿಸಿದೆ. ಇದುವರೆಗೆ ವಿಭಾಗವು 40ಕ್ಕೂ ಹೆಚ್ಚು ಎಂ.ಫಿಲ್., 129 ಪಿಎಚ್.ಡಿ. ಹಾಗೂ 1,500ಕ್ಕೂ ಹೆಚ್ಚು ಸ್ನಾತಕೋತ್ತರ ಪದವೀಧರರನ್ನು ಸಮಾಜಕ್ಕೆ ನೀಡಿದೆ.
ವಿಭಾಗದ ಹಳೆಯ ವಿದ್ಯಾರ್ಥಿಗಳು ದೇಶ-ವಿದೇಶಗಳ ಶಿಕ್ಷಣ, ಸಂಶೋಧನೆ, ಕೈಗಾರಿಕೆ, ಆರೋಗ್ಯ ಮತ್ತು ಸಾರ್ವಜನಿಕ ಸೇವಾ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಿದ್ದಾರೆ. ವಿಭಾಗವು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ನಿಯತಕಾಲಿಕೆಗಳಲ್ಲಿ 700ಕ್ಕೂ ಹೆಚ್ಚು ಸಂಶೋಧನಾ ಲೇಖನಗಳನ್ನು ಪ್ರಕಟಿಸಿದ್ದು, ಯುಜಿಸಿ, ಡಿಬಿಟಿ, ಡಿಎಸ್ಟಿ, ಡಿಆರ್ಡಿಒ, ಕೆಎಸ್ಟಿ ಸೇರಿದಂತೆ ವಿವಿಧ ಸಂಸ್ಥೆಗಳ ಸಹಯೋಗದಲ್ಲಿ ಹಲವು ಮಹತ್ವದ ಸಂಶೋಧನಾ ಯೋಜನೆಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ.
ಸುವರ್ಣ ಮಹೋತ್ಸವದ ಅಂಗವಾಗಿ ವಿಭಾಗದ ಅಭಿವೃದ್ಧಿಗೆ ಶ್ರಮಿಸಿದ ಹಾಲಿ ಮತ್ತು ನಿವೃತ್ತ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಯನ್ನು ಸನ್ಮಾನಿಸಲಾಗುವುದು ಎಂದು ಪ್ರಕಟಣೆ ತಿಳಿಸಿದೆ.