ಚಿತ್ತಾಪುರ: ಕಾಳಗಿ ತಾಲೂಕಿನ ಹಿರಿಯ ಸಿವಿಲ್ ವಿಭಾಗದ ಪ್ರಕರಣಗಳ ನ್ಯಾಯವ್ಯಾಪ್ತಿಗೆ ಸಂಬಂಧಿಸಿದಂತೆ ಸರ್ಕಾರ ಹೊರಡಿಸಿರುವ ಅಧಿಸೂಚನೆಯನ್ನು ಮರುಪರಿಶೀಲಿಸಿ, ಚಿತ್ತಾಪುರದ ಮೂಲ ಹಿರಿಯ ಸಿವಿಲ್ ನ್ಯಾಯವ್ಯಾಪ್ತಿಯನ್ನು ಪುನಃ ಸ್ಥಾಪಿಸಬೇಕು ಎಂದು ಆಗ್ರಹಿಸಿ ಚಿತ್ತಾಪುರ ವಕೀಲರ ಸಂಘದ ವತಿಯಿಂದ ಮನವಿ ಸಲ್ಲಿಸಲಾಯಿತು.

ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಇಲಾಖೆಯ ಮುಖ್ಯ ಕಾರ್ಯದರ್ಶಿಗಳಿಗೆ ಬರೆದ ಮನವಿ ಪತ್ರವನ್ನು ಸಂಘದ ಪದಾಧಿಕಾರಿಗಳು ತಹಶೀಲ್ದಾರ್ ನಾಗಯ್ಯ ಹಿರೇಮಠ ಅವರಿಗೆ ಸಲ್ಲಿಸಿದರು.

ಕಾಳಗಿ ತಾಲೂಕಿನ ಹಿರಿಯ ಸಿವಿಲ್ ಪ್ರಕರಣಗಳ ನ್ಯಾಯವ್ಯಾಪ್ತಿಯಲ್ಲಿ ಮಾಡಿರುವ ಬದಲಾವಣೆ ಹಾಗೂ ಪರಿಷ್ಕರಣೆ ಚಿತ್ತಾಪುರದ ಕಕ್ಷಿದಾರರು ಮತ್ತು ವಕೀಲರಿಗೆ ಅಂಗೀಕಾರಾರ್ಹವಾಗಿಲ್ಲ. ಈ ಅಧಿಸೂಚನೆಯ ವಿರುದ್ಧ ಸಂಘವು ಈಗಾಗಲೇ ಆಕ್ಷೇಪಣೆ ಸಲ್ಲಿಸಿದೆ ಎಂದು ಪದಾಧಿಕಾರಿಗಳು ತಿಳಿಸಿದರು.

ದೀರ್ಘಕಾಲದಿಂದ ಚಿತ್ತಾಪುರ ಹಿರಿಯ ಸಿವಿಲ್ ನ್ಯಾಯಾಲಯದ ಮೂಲ ನ್ಯಾಯವ್ಯಾಪ್ತಿ ಜಾರಿಯಲ್ಲಿದ್ದು, ಕಕ್ಷಿದಾರರು ಅದೇ ವ್ಯವಸ್ಥೆಗೆ ಹೊಂದಿಕೊಂಡಿದ್ದಾರೆ. ಇದೀಗ ಮಾಡಿರುವ ಬದಲಾವಣೆಯಿಂದ ಕಕ್ಷಿದಾರರು ಮತ್ತು ವಕೀಲರಿಗೆ ತೀವ್ರ ಅನಾನುಕೂಲ ಉಂಟಾಗಿದ್ದು, ಅಸ್ತಿತ್ವದಲ್ಲಿರುವ ನ್ಯಾಯಾಂಗ ವ್ಯವಸ್ಥೆಯ ಮೇಲೂ ಪರಿಣಾಮ ಬೀರಿದೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ.

ಕಾಳಗಿ ನ್ಯಾಯಾಲಯವನ್ನು ರದ್ದುಪಡಿಸುವ ಅಥವಾ ಮುಚ್ಚುವಂತೆ ತಾವು ಒತ್ತಾಯಿಸುತ್ತಿಲ್ಲ. ಬದಲಾಗಿ ಚಿತ್ತಾಪುರದ ಮೂಲ ನ್ಯಾಯವ್ಯಾಪ್ತಿಯನ್ನು ಪುನಃ ಸ್ಥಾಪಿಸಬೇಕು. ಕಾಳಗಿ ಹಿರಿಯ ಸಿವಿಲ್ ನ್ಯಾಯವ್ಯಾಪ್ತಿಗೆ ಸಂಬಂಧಿಸಿದ ಹಿಂದಿನ ಅಧಿಸೂಚನೆಯನ್ನು ಮರುಪರಿಶೀಲಿಸಿ, ವಕೀಲರ ಸಂಘ ಸಲ್ಲಿಸಿರುವ ಆಕ್ಷೇಪಣೆಯನ್ನು ಪರಿಗಣಿಸಬೇಕು. ಕಾಳಗಿಗೆ ಸಂಬಂಧಿಸಿದ ಹಿರಿಯ ಸಿವಿಲ್ ಪ್ರಕರಣಗಳನ್ನು ಕಲಬುರಗಿ ನ್ಯಾಯಾಲಯದಿಂದ ಹಿಂಪಡೆಯಬೇಕು ಎಂದು ಮನವಿ ಮಾಡಿದರು.

ನ್ಯಾಯಸಮ್ಮತ ಬೇಡಿಕೆಗಳನ್ನು ಸಮಂಜಸ ಅವಧಿಯಲ್ಲಿ ಪರಿಗಣಿಸಿ ಕ್ರಮ ಕೈಗೊಳ್ಳದಿದ್ದರೆ, ಚಿತ್ತಾಪುರ ವಕೀಲರ ಸಂಘವು ಕಾನೂನುಬದ್ಧ ಹಾಗೂ ಪ್ರಜಾಸತ್ತಾತ್ಮಕ ರೀತಿಯಲ್ಲಿ ನ್ಯಾಯಾಲಯದ ಕಾರ್ಯದಿಂದ ದೂರವಿರುವುದು, ಮುಷ್ಕರ ಸೇರಿದಂತೆ ಮುಂದಿನ ಹೋರಾಟದ ಕ್ರಮಗಳನ್ನು ಕೈಗೊಳ್ಳುವುದು ಅನಿವಾರ್ಯವಾಗಲಿದೆ ಎಂದು ಎಚ್ಚರಿಸಿದರು.

ಈ ಸಂದರ್ಭದಲ್ಲಿ ವಕೀಲರ ಸಂಘದ ಅಧ್ಯಕ್ಷ ಎಸ್‌.ಬಿ.ಕರದಳ್ಳಿ, ಪ್ರಧಾನ ಕಾರ್ಯದರ್ಶಿ ಬಿ.ಎಲ್.ವಾಡಿ, ನ್ಯಾಯವಾದಿಗಳಾದ ಶರಣಗೌಡ ಪಾಟೀಲ, ಎಸ್.ಎಂ.ಹೋಳಿ, ಬಿ.ಬಿ.ದೊಡ್ಡಮನಿ, ಎಸ್.ಪಿ.ಸಾತನೂರಕರ್, ಎ.ಟಿ.ರಾಠೋಡ, ಎಲ್.ಎ.ಪಾಟೀಲ್, ಎಸ್.ಇ.ಅನ್ವರಕರ್, ಅಶ್ವಥ್ ರಾಠೋಡ ಸೇರಿದಂತೆ ಇತರರು ಇದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor