×
Ad

ಅಹಿಂದ ಹೆಸರಿನಲ್ಲಿ ಅಧಿಕಾರ ಪಡೆದು ಹಿಂದುಳಿದ ವರ್ಗಗಳಿಗೆ ಅನ್ಯಾಯ: ಪೂರ್ಣಾನಂದ ಪುರಿ ಸ್ವಾಮೀಜಿ

Update: 2026-06-27 20:24 IST

ಕಲಬುರಗಿ: ಅಹಿಂದ ಹೆಸರಿನಲ್ಲಿ ಅಧಿಕಾರಕ್ಕೆ ಬಂದವರು ಹಿಂದುಳಿದ ವರ್ಗಗಳ ಅಭಿವೃದ್ಧಿಗೆ ಅಗತ್ಯವಾದ ಕ್ರಮಗಳನ್ನು ಕೈಗೊಳ್ಳದೆ, ಅದೇ ಸಮುದಾಯಗಳಿಗೆ ಅನ್ಯಾಯ ಎಸಗಿದ್ದಾರೆ ಎಂದು ಗಾಣಿಗರ ಜಗದ್ಗುರು ಶ್ರೀ ಪೂರ್ಣಾನಂದ ಪುರಿ ಮಹಾಸ್ವಾಮೀಜಿ ಆರೋಪಿಸಿದರು.

ನಗರದ ಶರಣ ಬಸವೇಶ್ವರ ದೇವಸ್ಥಾನದ ಎದುರಿನ ಯಾತ್ರಾ ನಿವಾಸದಲ್ಲಿ ಆಯೋಜಿಸಿದ್ದ 'ಅತಿ ಹಿಂದುಳಿದ ಮಠಾಧೀಶರ ಮಹಾಸಭೆ'ಯ ಎರಡು ದಿನಗಳ ರಾಜ್ಯಮಟ್ಟದ ಚಿಂತನ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

1947ರಿಂದ 1972ರವರೆಗೆ ಹಿಂದುಳಿದ ವರ್ಗಗಳನ್ನು ಉದ್ದೇಶಪೂರ್ವಕವಾಗಿ ರಾಜಕೀಯ ಹಾಗೂ ಸಾಮಾಜಿಕವಾಗಿ ಅಧಿಕಾರದಿಂದ ದೂರವಿಡಲಾಗಿತ್ತು. ಇಂತಹ ಸಂದರ್ಭದಲ್ಲಿ ದಿವಂಗತ ಡಿ. ದೇವರಾಜ ಅರಸು ಅವರು ಹಿಂದುಳಿದ ವರ್ಗಗಳ ಆಶಾಕಿರಣವಾಗಿ ಹೊರಹೊಮ್ಮಿ, ಸಾಮಾಜಿಕ ನ್ಯಾಯದ ಪರವಾಗಿ ಮಹತ್ವದ ಕೆಲಸಗಳನ್ನು ಮಾಡಿದರು. ಅವರ ಆಡಳಿತಾವಧಿಯೇ ಹಿಂದುಳಿದ ವರ್ಗಗಳ ಸುವರ್ಣಯುಗವಾಗಿತ್ತು. ಅವರ ಪರಿಶ್ರಮದ ಫಲವಾಗಿ 1972ರಿಂದ ಮುಂದಿನ 21 ವರ್ಷಗಳಲ್ಲಿ ಹಿಂದುಳಿದ ವರ್ಗದ ಐವರು ಮುಖ್ಯಮಂತ್ರಿಗಳಾಗಲು ಸಾಧ್ಯವಾಯಿತು ಎಂದು ಅವರು ಸ್ಮರಿಸಿದರು.

ಅಹಿಂದ ಪರಿಕಲ್ಪನೆಯಡಿ ಅಧಿಕಾರಕ್ಕೆ ಬಂದ ನಾಯಕತ್ವದ ಕುರಿತು ಅಸಮಾಧಾನ ವ್ಯಕ್ತಪಡಿಸಿದ ಅವರು, ದಿವಂಗತ ಡಿ. ದೇವರಾಜ ಅರಸು, ಎಸ್. ಬಂಗಾರಪ್ಪ, ಧರ್ಮಸಿಂಗ್, ವೀರಪ್ಪ ಮೊಯ್ಲಿ ಹಾಗೂ ಸಿದ್ದರಾಮಯ್ಯ ಅವರು ಹಿಂದುಳಿದ ವರ್ಗದ ಸಮುದಾಯಗಳಿಂದ ಮುಖ್ಯಮಂತ್ರಿಗಳಾಗಿದ್ದರು. ವಿಶೇಷವಾಗಿ ಸಿದ್ದರಾಮಯ್ಯ ಅವರು ರಾಜ್ಯದ ಮುಖ್ಯಮಂತ್ರಿಯಾಗಿ ದೀರ್ಘಾವಧಿ ಅಧಿಕಾರ ನಡೆಸಿದ್ದರೂ, ಹಿಂದುಳಿದ ವರ್ಗಗಳ ಆಯೋಗಗಳು ಹಾಗೂ ರಾಜ್ಯ ಸಾಹಿತ್ಯ ಅಕಾಡೆಮಿಗಳಿಗೆ ನಡೆದ ನೇಮಕಾತಿಗಳ ಕುರಿತು ಪ್ರಶ್ನೆಗಳು ಉಳಿದಿವೆ ಎಂದು ಹೇಳಿದರು.

ಅಹಿಂದ ಹೆಸರಿನಲ್ಲಿ ಅಧಿಕಾರ ಪಡೆದವರು ದಿವಂಗತ ದೇವರಾಜ ಅರಸು ಅವರ ಹೆಸರಿನಲ್ಲಿ ಒಂದು ಸಮುದಾಯ ಭವನ ಅಥವಾ ಪ್ರತಿಮೆ ಸ್ಥಾಪಿಸುವಂತಹ ಕಾರ್ಯವನ್ನೂ ಕೈಗೊಂಡಿಲ್ಲ. ಇದು ಹಿಂದುಳಿದ ವರ್ಗಗಳ ನಿರೀಕ್ಷೆಗೆ ತಕ್ಕಂತಿಲ್ಲ ಎಂದು ಅವರು ಟೀಕಿಸಿದರು.

ಚಿಂತನ ಶಿಬಿರದಲ್ಲಿ ಹಿಂದುಳಿದ ವರ್ಗಗಳ ಹಕ್ಕುಗಳ ರಕ್ಷಣೆ, ಸಾಮಾಜಿಕ ನ್ಯಾಯ ಹಾಗೂ ಸಂಘಟನೆ ಬಲವರ್ಧನೆ ಕುರಿತು ಹಲವು ಮಹತ್ವದ ನಿರ್ಣಯಗಳನ್ನು ಕೈಗೊಳ್ಳಲಾಗುವುದು ಎಂದು ಮಹಾಸಭೆಯ ರಾಷ್ಟ್ರೀಯ ಕಾರ್ಯದರ್ಶಿ ಶ್ರೀ ದೊಡ್ಡೇಂದ್ರ ಸ್ವಾಮೀಜಿ ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಹಾಸಭೆಯ ರಾಜ್ಯಾಧ್ಯಕ್ಷ ಡಾ. ಶ್ರೀ ಪ್ರಣವಾನಂದ ಸ್ವಾಮೀಜಿ ವಹಿಸಿದ್ದರು. ರಾಷ್ಟ್ರೀಯ ಅಧ್ಯಕ್ಷ ಶ್ರೀ ಬಸವನಾಗಿದೇವ ಶರಣರು ದಿವ್ಯ ಸಾನ್ನಿಧ್ಯ ವಹಿಸಿದ್ದರು.

ಚಿಂತನ ಶಿಬಿರದಲ್ಲಿ ವಿಶ್ವಕರ್ಮ ಸಮಾಜದ ಶ್ರೀ ದೊಡ್ಡೇಂದ್ರ ಸ್ವಾಮೀಜಿ, ಕುಂಬಾರ ಸಮುದಾಯದ ಬಸವಮೂರ್ತಿ ಸ್ವಾಮೀಜಿ, ಗುಂಡಯ್ಯ ಸ್ವಾಮೀಜಿ,  ಮಾದಿಗ ಸಮುದಾಯದ ಶಿವಮೂರ್ತಿ ಸ್ವಾಮೀಜಿ ಸೇರಿದಂತೆ ರಾಜ್ಯದ ವಿವಿಧ ಭಾಗಗಳ 25ಕ್ಕೂ ಹೆಚ್ಚು ಅತಿ ಹಿಂದುಳಿದ ಸಮುದಾಯಗಳ ಮಠಾಧೀಶರು ಹಾಗೂ ಸಮಾಜದ ಮುಖಂಡರು ಭಾಗವಹಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News