ಗಾನಸಿರಿ ರಾಜ್ಯ ಪ್ರಶಸ್ತಿಗೆ ಮಡೆಪ್ಪ ಕೆ.ಝಳಕಿ ಆಯ್ಕೆ
Update: 2026-06-27 18:23 IST
ಅಫಜಲಪುರ: ವಿಜಯಪುರ ಜಿಲ್ಲೆಯ ನಂದರಗಿ ಗ್ರಾಮದ ಸಂಗೀತ ಕ್ಷೇತ್ರದ ಸಾಧಕರಾದ ಮಡೆಪ್ಪ ಕೆ. ಝಳಕಿ ಅವರು ಪ್ರತಿಷ್ಠಿತ "ಗಾನಸಿರಿ ರಾಜ್ಯ ಪ್ರಶಸ್ತಿ"ಗೆ ಆಯ್ಕೆಯಾಗಿದ್ದಾರೆ.
ಕರ್ನಾಟಕ ರಾಜ್ಯ ನಾಟಕ ಬರಹಗಾರರ (ಕವಿಗಳ) ಸಂಘ, ಬೆಂಗಳೂರು, ವಿಜಯಪುರ ಜಿಲ್ಲಾ ಘಟಕ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ವಿಜಯಪುರ ಇವರ ಸಂಯುಕ್ತ ಆಶ್ರಯದಲ್ಲಿ ಈ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುತ್ತಿದೆ.
ಜೂನ್ 28ರಂದು ಬಸವನ ಬಾಗೇವಾಡಿಯ ಶ್ರೀ ಯಲ್ಲಾಲಿಂಗೇಶ್ವರ ಮಠದಲ್ಲಿ ನಡೆಯಲಿರುವ ಗಾನಯೋಗಿ ಡಾ. ಪಂಚಾಕ್ಷರಿ ಪುಟ್ಟರಾಜ ಗವಾಯಿಗಳ ಪುಣ್ಯಸ್ಮರಣೋತ್ಸವ, ಸ್ಮರಣ ಸಂಚಿಕೆ ಬಿಡುಗಡೆ ಹಾಗೂ ರಾಜ್ಯಮಟ್ಟದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಡೆಪ್ಪ ಕೆ. ಝಳಕಿ ಅವರಿಗೆ ಪ್ರಶಸ್ತಿ ಪ್ರದಾನ ನಡೆಯಲಿದೆ.
ಸಂಗೀತ ಕ್ಷೇತ್ರದಲ್ಲಿ ಅವರು ಸಲ್ಲಿಸಿರುವ ನಿರಂತರ ಸೇವೆ, ಕಲಾ ಪ್ರತಿಭೆ ಹಾಗೂ ಸಮಾಜಮುಖಿ ಕೊಡುಗೆಯನ್ನು ಪರಿಗಣಿಸಿ ಗಾನಸಿರಿ ರಾಜ್ಯ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಸಂಘವು ಪ್ರಕಟಣೆಯಲ್ಲಿ ತಿಳಿಸಿದೆ.