Kalaburagi | ಆ.1ರಂದು ಕನ್ನಡ ಭವನದಲ್ಲಿ ಅಣ್ಣಾ ಭಾವು ಸಾಠೆ ಜಯಂತಿ ಆಚರಣೆ: ಬಸಣ್ಣ ಸಿಂಗೆ

Update: 2026-07-29 17:44 IST

ಕಲಬುರಗಿ: ಸಾಹಿತ್ಯ ಸಾಮ್ರಾಟ ಅಣ್ಣಾಭಾವು ಸಾಠೆ ಅವರ 106ನೇ ಜಯಂತ್ಯೋತ್ಸವವನ್ನು ಇದೇ ಶನಿವಾರ (ಆಗಸ್ಟ್ 1) ನಗರದ ಕನ್ನಡ ಭವನದಲ್ಲಿ ಆಚರಿಸಲಾಗುವುದು ಎಂದು ಅಣ್ಣಾಭಾವು ಮೆಮೋರಿಯಲ್ ಟ್ರಸ್ಟ್ ಸದಸ್ಯ ಬಸಣ್ಣ ಸಿಂಗೆ ತಿಳಿಸಿದ್ದಾರೆ.

ನಗರದ ಪತ್ರಿಕಾ ಭವನದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾರ್ಯಕ್ರಮವನ್ನು ಕಲಬುರಗಿ ದಕ್ಷಿಣ ಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ್ ಉದ್ಘಾಟಿಸಲಿದ್ದು, ನಿವೃತ್ತ ಮುಖ್ಯ ಇಂಜಿನಿಯರ್ ಬಿ.ಬಿ. ರಾಮಪುರೆ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯ ತಿಪ್ಪಣ್ಣಪ್ಪ ಕಮಕನೂರ್, ನಿವೃತ್ತ ನ್ಯಾಯಾಧೀಶ ಜಿ.ಕೆ. ಗೋಖಲೆ, ಮಹಾಪೌರ ವರ್ಷಾ ರಾಜೀವ ಜಾನೆ, ಪಾಲಿಕೆ ಮಾಜಿ ಸದಸ್ಯ ನಾಗರಾಜ್ ಗುಂಡಗುರ್ತಿ, ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಸದಸ್ಯ ಶಾಮ್ ನಾಟಿಕಾರ್ ಹಾಗೂ ಚಿಂತಕ ಆರ್.ಕೆ. ಹುಡಗಿ ಭಾಗವಹಿಸಲಿದ್ದಾರೆ. ಉಪನ್ಯಾಸಕ ಅರುಣ್ ಜೋಳದಕೊಡ್ಲಗಿ ಮುಖ್ಯ ಭಾಷಣ ಮಾಡಲಿದ್ದು, ಬಸಣ್ಣ ಸಿಂಗೆ ಮುಖ್ಯ ಅತಿಥಿಯಾಗಿ ಉಪಸ್ಥಿತರಿರುವರು ಎಂದು ಹೇಳಿದರು.

ಅಣ್ಣಾಭಾವು ಸಾಠೆ ಕೇವಲ ಒಂದೂವರೆ ದಿನ ಮಾತ್ರ ಶಾಲಾ ಶಿಕ್ಷಣ ಪಡೆದಿದ್ದರೂ, ತಮ್ಮ ಸಾಹಿತ್ಯ ಪ್ರತಿಭೆಯಿಂದ ವಿಶ್ವಪ್ರಸಿದ್ಧ ಸಾಹಿತಿಯಾಗಿ ಗುರುತಿಸಿಕೊಂಡಿರುವುದು ವಿಶಿಷ್ಟ ಸಾಧನೆಯಾಗಿದೆ ಎಂದು ಬಸಣ್ಣ ಸಿಂಗೆ ಹೇಳಿದರು.

ಸ್ವಾತಂತ್ರ್ಯಾನಂತರ ಮುಂಬೈನ ಆಜಾದ್ ಮೈದಾನದಲ್ಲಿ ಲಕ್ಷಾಂತರ ಕಾರ್ಮಿಕರನ್ನು ಉದ್ದೇಶಿಸಿ ಅವರು ಮಾಡಿದ ಭಾಷಣ ದೇಶಾದ್ಯಂತ ಚರ್ಚೆಗೆ ಗ್ರಾಸವಾಗಿತ್ತು. ಬಳಿಕ ಅವರ ಕೃತಿಗಳು ರಾಜ್ಯದ ಪಠ್ಯಪುಸ್ತಕಗಳಲ್ಲಿ ಸೇರ್ಪಡೆಯಾದ ನಂತರವೇ ಅವರ ಸಾಹಿತ್ಯ ಮತ್ತು ಚಿಂತನೆಗಳ ಕುರಿತು ಹೆಚ್ಚಿನ ಜನರಿಗೆ ಅರಿವು ಮೂಡಿತು ಎಂದು ಅವರು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ (ಅಠವಲೆ) ದಕ್ಷಿಣ ಭಾರತದ ಪ್ರಧಾನ ಕಾರ್ಯದರ್ಶಿಗಳಾದ ಎ.ಬಿ ಹೊಸಮನಿ, ದಲಿತ ವಿದ್ಯಾರ್ಥಿ ಪರಿಷತ್ತಿನ ರಾಜ್ಯ ಸಂಚಾಲಕರಾದ ಬಾಲಾಜಿ ಕಾಂಬಳೆ, ಹೋರಾಟಗಾರರಾದ ಸಾಜಿದ್ ಅಹ್ಮದ್ ಇದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News