×
Ad

Kalaburagi | ಸರ್ಕಾರಿ ಅಭಿಯೋಜಕರಿಗೆ 5 ಸಾವಿರ ರೂ. ಲಂಚ ನೀಡಲು ಯತ್ನ : ತಂದೆ-ಮಗ ಲೋಕಾಯುಕ್ತ ಬಲೆಗೆ

Update: 2026-06-15 14:49 IST

ಕಲಬುರಗಿ: ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿರುವ ಎಸ್‌ಸಿ/ಎಸ್‌ಟಿ ಪ್ರಕರಣದಲ್ಲಿ ಆರೋಪಿತನಿಗೆ ಅನುಕೂಲವಾಗುವಂತೆ ಸಹಕರಿಸುವ ಉದ್ದೇಶದಿಂದ ಸರ್ಕಾರಿ ಅಭಿಯೋಜಕರಿಗೆ 5,000 ರೂ. ಲಂಚ ನೀಡಲು ಯತ್ನಿಸಿದ ತಂದೆ-ಮಗನನ್ನು ಕರ್ನಾಟಕ ಲೋಕಾಯುಕ್ತ ಪೊಲೀಸರು ವಶಕ್ಕೆ ಪಡೆದು ತನಿಖೆ ಕೈಗೊಂಡಿದ್ದಾರೆ.

ಕರ್ನಾಟಕ ಲೋಕಾಯುಕ್ತ ಕಲಬುರಗಿ ಪೊಲೀಸ್ ಅಧೀಕ್ಷಕ ಸಿದ್ದರಾಜು ಸಿ. ಅವರ ಮಾರ್ಗದರ್ಶನದಲ್ಲಿ ಈ ಕಾರ್ಯಾಚರಣೆ ನಡೆದಿದ್ದು, ಹಿರಿಯ ಕಾನೂನು ಅಧಿಕಾರಿ ಹಾಗೂ ಸರ್ಕಾರಿ ಅಭಿಯೋಜಕರಾದ ಪ್ರಾಣೇಶ ಸಿದ್ದಪ್ಪ ಭರತನೂರ ಅವರ ದೂರಿನ ಮೇರೆಗೆ ಕ್ರಮ ಜರುಗಿಸಲಾಗಿದೆ.

ಆಳಂದ ಪೊಲೀಸ್ ಠಾಣೆ ವ್ಯಾಪ್ತಿಯ ಎಸ್‌ಸಿ/ಎಸ್‌ಟಿ ಪ್ರಕರಣವೊಂದು ಕಲಬುರಗಿಯ 2ನೇ ಅಪರ ಜಿಲ್ಲಾ ಮತ್ತು ಸತ್ರ (ಎಸ್‌ಸಿ/ಎಸ್‌ಟಿ) ನ್ಯಾಯಾಲಯದಲ್ಲಿ ವಿಚಾರಣೆಯ ಹಂತದಲ್ಲಿದೆ. ಈ ಪ್ರಕರಣದಲ್ಲಿ ಆರೋಪಿತನಿಗೆ ಅನುಕೂಲವಾಗುವಂತೆ ಪ್ರಕರಣವನ್ನು ಸಾಗುಹಾಕಲು ಹಾಗೂ ಸಹಕಾರ ನೀಡುವಂತೆ ಒತ್ತಡ ಹೇರುವ ಉದ್ದೇಶದಿಂದ ಆರೋಪಿತನ ಪರವಾಗಿ ಆತನ ಅಣ್ಣ ಸಂಜೀವನ್ ದತ್ತಾಜಿ ಪಾಟೀಲ್ (80) ಹಾಗೂ ಪುತ್ರ ಸುರೇಶ ಸಂಜೀವನ್ ಪಾಟೀಲ್ (44) ಅವರು ಸರ್ಕಾರಿ ಅಭಿಯೋಜಕರಿಗೆ 5,000 ರೂ. ನಗದು ಹಣವನ್ನು ಕವರಿನಲ್ಲಿ ಇಟ್ಟು ನೀಡಲು ಯತ್ನಿಸಿದ್ದಾರೆ ಎಂದು ಲೋಕಾಯುಕ್ತ ಪೊಲೀಸರು ತಿಳಿಸಿದ್ದಾರೆ.

ದೂರಿನ ಆಧಾರದ ಮೇಲೆ ಕಾರ್ಯಾಚರಣೆ ನಡೆಸಿದ ಲೋಕಾಯುಕ್ತ ಅಧಿಕಾರಿಗಳು, ಲಂಚದ ಹಣ ನೀಡುವ ವೇಳೆ ಇಬ್ಬರನ್ನೂ ವಶಕ್ಕೆ ಪಡೆದು ತನಿಖೆ ಆರಂಭಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಅಗತ್ಯ ದಾಖಲೆಗಳು ಹಾಗೂ ಸಾಕ್ಷ್ಯಾಧಾರಗಳನ್ನು ಕಲೆ ಹಾಕಲಾಗುತ್ತಿದೆ.

ಕಾರ್ಯಾಚರಣೆಯ ನೇತೃತ್ವವನ್ನು ಲೋಕಾಯುಕ್ತ ಪೊಲೀಸ್ ಇನ್ಸ್‌ಪೆಕ್ಟರ್ ರಾಜಶೇಖರ ಬಡದೇಸಾರ ವಹಿಸಿಕೊಂಡಿದ್ದು, ಪೊಲೀಸ್ ಇನ್ಸ್‌ಪೆಕ್ಟರ್‌ಗಳಾದ ಅರುಣ್ ಕುಮಾರ್ ಮತ್ತು ರವಿ ಪವಾರ್ ಸೇರಿದಂತೆ ಸಿಬ್ಬಂದಿ ಭಾಗವಹಿಸಿದ್ದರು.

ಪ್ರಕರಣದ ತನಿಖೆ ಮುಂದುವರಿದಿದ್ದು, ತನಿಖೆ ಪೂರ್ಣಗೊಂಡ ಬಳಿಕ ಆರೋಪಿಗಳನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಿ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News