ಬಿಎಸ್ಸಿ ಸಂಬಂಧಿತ ಕೃಷಿ ಕೋರ್ಸ್ ಗೆ ವಿಫುಲ ಅವಕಾಶ: ಸಂತೋಷಕುಮಾರ್ ಪಾಟೀಲ್
ಕಲಬುರಗಿ: ಬಿಎಸ್ಸಿ ಕೃಷಿ ಸಂಬಂಧಿತ ಕೋರ್ಸ್ ಗಳಿಗೆ ಭವಿಷ್ಯದಲ್ಲಿ ಉತ್ತಮ ಅವಕಾಶಗಳಿದ್ದು, ವಿದ್ಯಾರ್ಥಿಗಳು ಈ ಕೋರ್ಸ್ ನತ್ತ ಆಸಕ್ತಿ ವಹಿಸುವುದು ಅಗತ್ಯವಾಗಿದೆ ಎಂದು ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ನೂತನ ಅಧ್ಯಕ್ಷ ಸಂತೋಷಕುಮಾರ್ ಪಾಟೀಲ್ ಹೇಳಿದರು.
ನಗರದ ಡಾ. ಬುಜುರ್ಕೆ ಅಕಾಡೆಮಿಯಲ್ಲಿ ಒಂದು ತಿಂಗಳ ಕಾಲ ತರಬೇತಿ ಪಡೆದು ಬಿಎಸ್ಸಿ ಕೃಷಿ ಸಂಬಂಧಿತ ಕೋರ್ಸ್ ಗಳಲ್ಲಿ ರಾಜ್ಯ ಮಟ್ಟದಲ್ಲಿಉತ್ತಮ ರ್ಯಾಂಕ್ ಪಡೆದು ಸಾಧನೆ ತೋರಿದ ವಿದ್ಯಾರ್ಥಿಗಳಿಗೆ ಸನ್ಮಾನ ನೇರವೇರಿಸಿ ಅವರು ಮಾತನಾಡುತ್ತಿದ್ದರು.
ಬಿಎಸ್ಸಿ ಕೃಷಿ ಪದವಿ ಮಾಡಿದ ಅಭ್ಯರ್ಥಿಗಳು ವಿವಿಧ ಸ್ಪರ್ಧಾತ್ಮಕ ಪರೀಕ್ಷೆ ಅದರಲ್ಲೂ ಕೇಂದ್ರ ಲೋಕಸೇವಾ ಆಯೋಗದ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡುತ್ತಿದ್ದು ಎಐಎಸ್, ಐಪಿಎಸ್ ಹಾಗೂ ಐಎಫ್ ಎಸ್ ನಂತಹ ಉನ್ನತ ಮಟ್ಟದ ಅಧಿಕಾರಿಗಳಾಗಿದ್ದಾರೆ. ಮುಂದಿನ ದಿನಗಳಲ್ಲಿ ಕೃಷಿ ಕ್ಷೇತ್ರವೇ ಹೆಚ್ಚಿನ ಪ್ರಾಮುಖ್ಯತೆ ಪಡೆಯಲಿದೆ. ಹೀಗಾಗಿ ವಿದ್ಯಾರ್ಥಿಗಳು ಆಸಕ್ತಿಯಿಂದ ಪದವಿ ಪಡೆದರೆ ಸಾಧನೆ ನಿಶ್ಚಿತ. ಬುಜುರ್ಕೆ ಅಕಾಡೆಮಿ ರೈತರ ಮಕ್ಕಳಿಗೆ ಕೃಷಿ ಸಂಬಂಧಿತ ಕೋರ್ಸ್ ಗಳಿಗೆ ತರಬೇತಿ ನೀಡುತ್ತಾ ಅವರ ಭವಿಷ್ಯ ರೂಪಿಸುತ್ತಿದೆ ಎಂದು ಪಾಟೀಲ್ ಹೇಳಿದರು.
ಅಕಾಡೆಮಿಯ ನಿರ್ದೇಶಕ ಡಾ. ಶಿವರಾಜ ಜಿ. ಬುಜುರ್ಕೆ ಮಾತನಾಡಿ, ತಮ್ಮಲ್ಲಿ ತರಬೇತಿ ಪಡೆದ ವಿದ್ಯಾರ್ಥಿಗಳು ಪ್ರಮುಖವಾಗಿ ಅಗ್ರಿಕಲ್ಚರ್, ವೆಟರ್ನರಿ ವಿಭಾಗದಲ್ಲಿ ಪ್ರವೇಶ ಪಡೆಯುವ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಅತ್ಯುತ್ತಮ ರ್ಯಾಂಕ್ ಪಡೆದಿರುವುದು ಸಂತಸ ತಂದಿದೆ ಎಂದರು.
ಹಿರಿಯ ಪತ್ರಕರ್ತ ಹಣಮಂತರಾವ್ ಭೈರಾಮಡಗಿ ಹಾಗೂ ಸಂಗಣ್ಣ ಸತ್ಯಂಪೇಟೆ ಮಾತನಾಡಿ ವಿದ್ಯಾರ್ಥಿಗಳು ಪರಿಶ್ರಮ ಪಟ್ಟು ಅಭ್ಯಾಸ ಮಾಡಿದರೆ ಉತ್ತಮ ಫಲಿತಾಂಶ ಪಡೆದುಕೊಳ್ಳಬಹುದು ಎಂದರು.
ಡಾ. ಬುಜುರ್ಕೆ ಅಕಾಡೆಮಿಯ ಕಾರ್ಯದರ್ಶಿ ನಿರ್ಮಲಾ ಶಿವರಾಜ ಬುಜುರ್ಕೆ, ಪ್ರಮುಖರಾದ ಸಿ.ಬಿ. ಹಿರೇಮಠ, ಅನಂತಚೈತನ್ಯ ಬಜುರ್ಕೆ, ಸುಷ್ಮಾ ಬುಜುರ್ಕೆ, ಸಂಗಣ್ಣ ಸತ್ಯಂಪೇಟೆ, ಮಲ್ಲಿಕಾರ್ಜುನ ಬಿರಾದಾರ ಸೇರಿದಂತೆ ಹಲವರು ಈ ವೇಳೆ ಉಪಸ್ಥಿತರಿದ್ದರು.