×
Ad

ಜೂ.10 ರಿಂದ ಕಲಬುರಗಿ-ಬೆಂಗಳೂರು ವಿಮಾನಯಾನ ಸೇವೆ ಪುನರಾರಂಭ

Update: 2026-06-10 14:44 IST

ಕಲಬುರಗಿ: ಕಲಬುರಗಿ-ಬೆಂಗಳೂರು ನಡುವೆ ಸ್ಟಾರ್ ಏರ್ ಸಂಸ್ಥೆಯಿಂದ ವಿಮಾನಯಾನ ಸೇವೆ ಜೂ.10 ಬುಧವಾರದಿಂದ ಪುನರಾರಂಭವಾಗಿದ್ದು, ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯು ಆರ್ಥಿಕ ನೆರವು ನೀಡುವ ಮೂಲಕ ವಿಮಾನಯಾನ ಸೇವೆ ಮತ್ತೆ ಆರಂಭಕ್ಕೆ ಕಾರಣವಾಗಿದೆ.

ಬುಧವಾರ ಕಲಬುರಗಿ ವಿಮಾನ ನಿಲ್ದಾಣದಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಕರ್ನಾಟಕ ರೇಷ್ಮೆ ಉದ್ಯಮ ನಿಯಮಿತದ ಅಧ್ಯಕ್ಷರು ಹಾಗೂ ಕಲಬುರಗಿ ಉತ್ತರ ಶಾಸಕಿ ಕನೀಝ್ ಫಾತಿಮಾ ಮತ್ತು ಅಫಜಲಪುರ ಶಾಸಕ ಎಂ.ವೈ. ಪಾಟೀಲ ಅವರು ಸಾಂಕೇತಿಕವಾಗಿ ಸ್ಟಾರ್ ಏರ್ ವಿಮಾನ ಸಂಚಾರಕ್ಕೆ ಇಲ್ಲಿ ಕೇಕ್ ಕತ್ತರಿಸಿ, ಮೊದಲ ದಿನದ ಟ್ರಿಪ್‌ನಲ್ಲಿ ಪ್ರಯಾಣ ಮಾಡಲಿರುವ ಕೆ.ಕೆ.ಸಿ.ಸಿ.ಐ ಅಧ್ಯಕ್ಷ ಶರಣಬಸಪ್ಪ ಪಪ್ಪಾ ಅವರ ಕುಟುಂಬದ ಸದಸ್ಯರಿಗೆ ಪ್ರಯಾಣದ ಟಿಕೆಟ್ ವಿತರಿಸುವ ಮೂಲಕ ವಿಮಾನ ಸೇವೆಗೆ ಚಾಲನೆ ನೀಡಿದರು.

ಬೆಂಗಳೂರಿನಿಂದ 117 ಸಂಖ್ಯೆಯ 76 ಆಸನವುಳ್ಳ ಸ್ಟಾರ್ ಏರ್ ವಿಮಾನವು ಸುಮಾರು 74 ಜನ ಪ್ರಯಾಣಿಕರನ್ನು ಹೊತ್ತು ಬೆಳಿಗ್ಗೆ 6.30ಕ್ಕೆ ಅಲ್ಲಿಂದ ಹೊರಟು 7.40ಕ್ಕೆ ಕಲಬುರಗಿ ವಿಮಾನ ನಿಲ್ದಾಣಕ್ಕೆ ಬಂದಿಳಿತು. ಅದೇ ರೀತಿ ಕಲಬುರಗಿಯಿಂದ 117 ಸಂಖ್ಯೆಯ ಸ್ಟಾರ್ ಏರ್ ವಿಮಾನವು ಬೆಳಿಗ್ಗೆ 8.10 ಗಂಟೆಗೆ 50 ಜನರನ್ನು ಹೊತ್ತುಕೊಂಡು ಬೆಂಗಳೂರಿಗೆ ಹಾರಿತು. 

ಪ್ರವಾಸೋದ್ಯಮ, ಹೂಡಿಕೆಗೆ ಸಹಕಾರಿ:

ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬೆಂಗಳೂರು-ಕಲಬುರಗಿ ನಡುವಿನ ಮೊದಲ ಸ್ಟಾರ್ ಏರ್ ಹಾರಾಟಕ್ಕೆ ಕೇಕ್ ಕತ್ತರಿಸುವ ಮೂಲಕ ಚಾಲನೆ ನೀಡಿದ ಕೆ.ಕೆ.ಆರ್.ಡಿ.ಬಿ. ಮಂಡಳಿ ಅಧ್ಯಕ್ಷ ಡಾ. ಅಜಯ್ ಸಿಂಗ್ ಅವರು ಮಾತನಾಡಿ, ಪ್ರಾದೇಶಿಕ ಪ್ರವಾಸೋದ್ಯಮ, ಆರ್ಥಿಕ ವಹಿವಾಟು, ಹೂಡಿಕೆಗೆ ವಿಮಾನ ಸೇವೆ ಪೂರಕವಾಗಿ ಸಹಕಾರಿಯಾಗಲಿದೆ ಎಂದರು.

ಕಳೆದ ಹಲವಾರು ತಿಂಗಳಿನಿಂದ ಕಲಬುರಗಿ, ಬೀದರ್‌ಗೆ ಬೆಂಗಳೂರಿನಿಂದ ವಿಮಾನ ಸೇವೆ ಸ್ಥಗಿತಗೊಂಡಿತ್ತು. ಕಳೆದ ಮಾರ್ಚ್ ಮಾಹೆಯಲ್ಲಿ ಕಲ್ಯಾಣ ಕರ್ನಾಟಕ ಭಾಗದ ಸಚಿವರೆಲ್ಲರು ಸಭೆ ನಡೆಸಿ ಮತ್ತೆ ಬೆಂಗಳೂರು-ಕಲಬುರಗಿ, ಬೆಂಗಳೂರು-ಬೀದರ್ ನಡುವೆ ವಿಮಾನ ಸೇವೆ ಪ್ರಾರಂಭಿಸಲು ನಿರ್ಧರಿಸಿದ್ದರಿಂದ ಇದಕ್ಕೆ ಅಂದಾಜು ಮೊತ್ತ ತಲಾ 28.44 ಕೋಟಿ ರೂ. ತಗುಲಬಹುದೆಂದು ಅಂದಾಜಿಸಿತ್ತು. ಇದರಲ್ಲಿ ಮಂಡಳಿಯು ಶೇ.80ರಷ್ಟು ಅಂದರೆ ತಲಾ 22.76 ಕೋಟಿ ರೂ. ನೆರವು ನೀಡಿದ್ದು, ಉಳಿದ ಶೇ.20ರಷ್ಟು ಮೊತ್ತವನ್ನು ಮೂಲಸೌಕರ್ಯ ಅಭಿವೃದ್ಧಿ ಇಲಾಖೆ ಭರಿಸಲಿದೆ ಎಂದಿದ್ದಾರೆ.

ಪ್ರಯಾಣಿಕರಿಂದ ಉತ್ತಮ ಸ್ಪಂದನೆ:

ಸ್ಟಾರ್ ಏರ್ ಸಂಸ್ಥೆಯ ಏರ್ಪೋರ್ಟ್ ಹೆಡ್ ಸಿ.ಎ. ಬೋಪಣ್ಣ ಮಾತನಾಡಿ, ಕಲಬುರಗಿ-ಬೆಂಗಳೂರು ನಡುವೆ ವಿಮಾನಯಾನ ಸೇವೆಗೆ ಪ್ರಯಾಣಿಕರಿಂದ ಉತ್ತಮ ಸ್ಪಂದನೆ ಸಿಕ್ಕಿದೆ. ಮೊದಲ ದಿನವೇ ಬೆಂಗಳೂರಿನಿಂದ ಶೇ.90ರಷ್ಟು ಮತ್ತು ಕಲಬುರಗಿಯಿಂದ ಶೇ.65ರಷ್ಟು ಟಿಕೆಟ್ ಬುಕ್ ಆಗಿವೆ. ಪ್ರತಿ ಗಂಟೆಗೆ 850 ಕಿ.ಮೀ. ಕ್ರಮಿಸುವ 76 ಮತ್ತು 88 ಆಸನ ಸಾಮರ್ಥ್ಯದ ಪ್ರಯಾಣಿಕ ಸ್ನೇಹಿ ವಿಮಾನಗಳು ಇಲ್ಲಿ ಸಂಚಾರ ಮಾಡಲಿವೆ. ಪ್ರಸ್ತುತ ನಮ್ಮ ಸಂಸ್ಥೆಯಲ್ಲಿ 9 ವಿಮಾನಗಳಿದ್ದು, ಮುಂದಿನ ಜುಲೈ, ಆಗಸ್ಟ್ ನಲ್ಲಿ ಇನ್ನೆರಡು ವಿಮಾನಗಳು ಬರಲಿವೆ. ಕಲಬುರಗಿ-ಮುಂಬೈ ನಡುವೆ ವಿಮಾನ ಸೇವೆಗೆ ಬೇಡಿಕೆ ಇದ್ದು, ಪ್ರಸ್ತುತ ಮಧ್ಯಪ್ರಾಚ್ಯದಲ್ಲಿ ಯುದ್ಧದ ಕಾರಣ ತೈಲ ಬೆಲೆ ಹೆಚ್ಚಳವಾಗಿದ್ದು, ಪರಿಸ್ಥಿತಿ ನಿಯಂತ್ರಣಕ್ಕೆ ಬಂದಲ್ಲಿ ಮುಂದೆ ಸೇವೆ ಆರಂಭಕ್ಕೆ ಯೋಚನೆ ಮಾಡಲಾಗುವುದು ಎಂದರು.

ಜಿಲ್ಲಾಧಿಕಾರಿ ಇಕ್ರಮ್ ಶರೀಫ್ ಮಾತನಾಡಿ, ರಾಜ್ಯ ಸರ್ಕಾರ ಮತ್ತು ಕೆ.ಕೆ.ಆರ್.ಡಿ.ಬಿ. ಮಂಡಳಿಯು ಹಲವಾರು ತಿಂಗಳಿನಿಂದ ಸ್ಥಗಿತಗೊಂಡಿದ್ದ ವಿಮಾನ ಸೇವೆ ಮರು ಆರಂಭಕ್ಕೆ ಕಾರಣವಾಗಿದೆ. ವಿಶೇಷವಾಗಿ ಮಂಡಳಿಯು ಆರ್ಥಿಕ ಸಹಾಯ ನೀಡಿದೆ. ವಾಯುಯಾನ ಸೇವೆ ಆರಂಭದಿಂದ ಮುಂದಿನ ದಿನಗಳಲ್ಲಿ ಪ್ರಾದೇಶಿಕ ಪ್ರವಾಸೋದ್ಯಮ, ಹೂಡಿಕೆಗೆ ಸಹಕಾರಿಯಾಗಲಿದೆ ಎಂದು ಅಭಿಪ್ರಾಯಪಟ್ಟರು.

ಕಾರ್ಯಕ್ರಮದಲ್ಲಿ ಕಲಬುರಗಿ ನಗರ ಪೊಲೀಸ್ ಆಯುಕ್ತ ಡಾ. ಎಸ್.ಡಿ. ಶರಣಪ್ಪ, ಜಿಲ್ಲಾ ಪೊಲೀಸ್ ಅಧೀಕ್ಷಕ ಅಡ್ಡೂರು ಶ್ರೀನಿವಾಸುಲು, ಕಲಬುರಗಿ ವಿಮಾನ ನಿಲ್ದಾಣದ ನಿರ್ದೇಶಕ ಕಿಶೋರ ಕಿಲ್ಲಂಪಲ್ಲಿ, ಕಲಬುರಗಿ ತಹಶೀಲ್ದಾರ ಆನಂದಶೀಲ, ಸ್ಟಾರ್ ಏರ್ ಸಂಸ್ಥೆಯ ದಕ್ಷಿಣ ಭಾರತದ ಸೇಲ್ಸ್ ಮ್ಯಾನೇಜರ್ ಅಹ್ಮದ್ ಸೊಹೇಲ್, ಏರ್‌ಪೋರ್ಟ್ ಎ.ಜಿ.ಎಂ. ಕಿರಣ ಎಸ್.ಟಿ., ಕೆ.ಕೆ.ಸಿ.ಸಿ.ಐ. ಗೌರವ ಕಾರ್ಯದರ್ಶಿ ಶಿವರಾಜ ಇಂಗಿನಶೆಟ್ಟಿ ಸೇರಿದಂತೆ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.

 

 

 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News