×
Ad

Kalaburagi | ವಚನ ಸಾಹಿತ್ಯಕ್ಕೆ ಮರುಜೀವ ನೀಡಿದ ಮಹಾನ್ ಸಾಧಕ ಫ.ಗು.ಹಳಕಟ್ಟಿ: ಅಭಿನವ ರಾಮಲಿಂಗ ಪಟ್ಟದೇವರು

Update: 2026-07-02 20:07 IST

ಕಲಬುರಗಿ: ಶರಣರ ಅಪಾರ ಜ್ಞಾನಭಂಡಾರವನ್ನು ಸಂಗ್ರಹಿಸಿ, ಸಂಪಾದಿಸಿ ಹಾಗೂ ಮುದ್ರಣದ ಮೂಲಕ ವಿಶ್ವಕ್ಕೆ ಪರಿಚಯಿಸಿದ ಮಹಾನ್ ಸಾಧಕರಾದ ಡಾ. ಫ.ಗು. ಹಳಕಟ್ಟಿಯವರನ್ನು ಖ್ಯಾತ ಸಾಹಿತಿ ಬಿ.ಎಂ. ಶ್ರೀಕಂಠಯ್ಯ ಅವರು “ವಚನ ಪಿತಾಮಹ” ಎಂದು ಕರೆದಿರುವುದು ಅವರ ಅಪೂರ್ವ ಸೇವೆಗೆ ಸಂದ ಗೌರವವಾಗಿದೆ ಎಂದು ಅಕ್ಕಲಕೋಟೆಯ ಶ್ರೀ ಅಭಿನವ ರಾಮಲಿಂಗ ಪಟ್ಟದೇವರು ಹೇಳಿದರು.

ನಗರದ ಎಸ್.ಎಂ. ಪಂಡಿತ ರಂಗಮಂದಿರದಲ್ಲಿ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಮಹಾನಗರ ಪಾಲಿಕೆ ಹಾಗೂ ಜಿಲ್ಲಾ ಪಂಚಾಯತ್ ಸಂಯುಕ್ತ ಆಶ್ರಯದಲ್ಲಿ ಗುರುವಾರ ನಡೆದ ಡಾ. ಫ.ಗು. ಹಳಕಟ್ಟಿ ಜಯಂತಿ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿ ಅವರು ಮಾತನಾಡಿದರು.

ಧಾರವಾಡದಲ್ಲಿ ಜನಿಸಿದ ಹಳಕಟ್ಟಿಯವರು ವಿಜಯಪುರದಲ್ಲಿ ವಕೀಲ ವೃತ್ತಿ ನಡೆಸುತ್ತಿದ್ದ ವೇಳೆ ಅಲ್ಲಮಪ್ರಭುಗಳ ತಾಡೋಲೆಗಳನ್ನು ಕಂಡದ್ದು ಅವರ ಬದುಕಿನ ದಿಕ್ಕನ್ನೇ ಬದಲಿಸಿತು. ಪೂಜಾ ವಸ್ತುವಾಗಿ ಉಳಿದಿದ್ದ ವಚನಗಳನ್ನು ಸಂಗ್ರಹಿಸಿ, ಪರಿಷ್ಕರಿಸಿ, ಮುದ್ರಿಸುವ ಮೂಲಕ ಬಸವಣ್ಣ ಹಾಗೂ ಶರಣರ ಚಿಂತನೆಗಳನ್ನು ಜನಮಾನಸಕ್ಕೆ ತಲುಪಿಸುವ ಮಹತ್ವದ ಕಾರ್ಯವನ್ನು ಕೈಗೊಂಡರು ಎಂದು ವಿವರಿಸಿದರು.

ಮಂಗಳೂರಿನ ಮುದ್ರಣಾಲಯವು ವಚನಗಳ ಮುದ್ರಣಕ್ಕೆ ನಿರಾಕರಿಸಿದರೂ ಹಿಂಜರಿಯದೆ 1923ರಿಂದ 1953ರವರೆಗೆ ‘ವಚನಶಾಸ್ತ್ರ ಸಾರ’, ‘ಮಹಾದೇವಿಯಕ್ಕಗಳ ಗ್ರಂಥ’ ಸೇರಿದಂತೆ ಹಲವು ಕೃತಿಗಳನ್ನು ಪ್ರಕಟಿಸಿದರು. ಬಳಿಕ ವಿಜಯಪುರದಲ್ಲಿ ‘ಹಿತಚಿಂತಕ’ ಮುದ್ರಣಾಲಯ ಸ್ಥಾಪಿಸಿ ವಚನ ಸಾಹಿತ್ಯದ ಪ್ರಸಾರಕ್ಕೆ ತಮ್ಮ ಜೀವನವನ್ನೇ ಸಮರ್ಪಿಸಿಕೊಂಡರು ಎಂದು ತಿಳಿಸಿದರು.

ಸುಮಾರು 17 ವರ್ಷಗಳ ಅವಿರತ ಪರಿಶ್ರಮದಿಂದ 200ಕ್ಕೂ ಹೆಚ್ಚು ಅಪರಿಚಿತ ವಚನಕಾರರನ್ನು ಗುರುತಿಸಿ, 22 ಸಾವಿರಕ್ಕೂ ಅಧಿಕ ವಚನಗಳನ್ನು ಸಂಗ್ರಹಿಸಿ ಕನ್ನಡ ಸಾಹಿತ್ಯ ಲೋಕಕ್ಕೆ ನೀಡಿದ ಕೀರ್ತಿ ಡಾ. ಫ.ಗು. ಹಳಕಟ್ಟಿಯವರಿಗೆ ಸಲ್ಲುತ್ತದೆ ಎಂದು ಪ್ರಶಂಸಿಸಿದರು.

ಹಿರಿಯ ಸಾಹಿತಿ ಅಪ್ಪಾರಾವ್ ಅಕ್ಕೋಣಿ ಮಾತನಾಡಿ, 12ನೇ ಶತಮಾನದ ಶರಣರ ವಚನ ಸಾಹಿತ್ಯಕ್ಕೆ ಮರುಜೀವ ತುಂಬಿದ ಮಹಾನ್ ಚೇತನ ಡಾ. ಫ.ಗು. ಹಳಕಟ್ಟಿಯವರು ಸಾಮಾಜಿಕ, ಶೈಕ್ಷಣಿಕ ಹಾಗೂ ರಾಜಕೀಯ ಕ್ಷೇತ್ರಗಳಲ್ಲಿಯೂ ಗಮನಾರ್ಹ ಸೇವೆ ಸಲ್ಲಿಸಿದ್ದಾರೆ ಎಂದು ಹೇಳಿದರು.

ಬಾಂಬೆ ವಿಧಾನ ಪರಿಷತ್ ಸದಸ್ಯರಾಗಿ ಹಾಗೂ ವಿಜಯಪುರ ನಗರಸಭೆಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದ ಹಳಕಟ್ಟಿಯವರ ಜನಪರ ಕಾರ್ಯವನ್ನು ಗುರುತಿಸಿ ಬ್ರಿಟಿಷ್ ಸರ್ಕಾರ “ರಾವ್ ಬಹದ್ದೂರ್” ಪ್ರಶಸ್ತಿಯನ್ನು ನೀಡಿ ಗೌರವಿಸಿತ್ತು. ಕನ್ನಡದ ಸಾಂಸ್ಕೃತಿಕ ಪರಂಪರೆಯನ್ನು ಸಂರಕ್ಷಿಸಿ ಬೆಳೆಸುವಲ್ಲಿ ಅವರ ಕೊಡುಗೆ ಅನನ್ಯವಾಗಿದೆ ಎಂದು ಹೇಳಿದರು.

ಕಾರ್ಯಕ್ರಮವನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಉಪನಿರ್ದೇಶಕಿ ಜಗದೀಶ್ವರಿ ನಾಶಿ ಸ್ವಾಗತಿಸಿದರು.

ವೇದಿಕೆಯಲ್ಲಿ ಜಿಲ್ಲಾಧಿಕಾರಿ ಕಚೇರಿಯ ಸಹಾಯಕ ಶಿವಪ್ರಭು ಹಿರೇಮಠ, ಸಮಾಜದ ಮುಖಂಡರಾದ ಶಿವರಾಜ ಅಂಡಗಿ, ಚೆನ್ನಮಲ್ಲಪ್ಪ, ಡಾ. ಬಸವರಾಜ ಚೆನ್ನ, ಸತೀಶ್ ಜಮಖಂಡಿ, ಚಂದ್ರಶೇಖರ, ಸೋಮಶೇಖರ ಬಿ. ಧತ್ತರ್ಗಿ, ಶ್ರವಣಕುಮಾರ, ಸಿದ್ದರೂಢ ಮುನ್ನಳ್ಳಿ, ಚಂದ್ರಕಾಂತ ಮುನ್ನಳ್ಳಿ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News