×
Ad

ಕಲಬುರಗಿ: ಧಾರಾಕಾರ ಮಳೆಗೆ ದಂಡೋತಿ ಗ್ರಾಮದ ಕಾಗಿಣಾ ನದಿ ಸೇತುವೆ ಮುಳುಗಡೆ

Update: 2025-09-22 13:57 IST

ಕಲಬುರಗಿ: ಕಳೆದ ಕೆಲವು ದಿನಗಳಿಂದ ಧಾರಾಕಾರ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ಚಿತ್ತಾಪುರ ತಾಲೂಕಿನ ಕಾಗಿಣಾ ನದಿ ತುಂಬಿ ಹರಿಯುತ್ತಿದ್ದು, ದಂಡೋತಿ ಗ್ರಾಮದ ಕಾಗಿಣಾ ಸೇತುವೆ ಸಂಪೂರ್ಣ ಮುಳುಗಡೆಯಾಗಿದೆ. ಇದರಿಂದ ವಾಹನ ಸಂಚಾರ ಸ್ಥಗಿತಗೊಂಡಿರುವ ಘಟನೆ ನಡೆದಿದೆ.

ರವಿವಾರ ರಾತ್ರಿ  ನದಿಯಲ್ಲಿ ಪ್ರವಾಹ ವೇಗವಾಗಿ ಏರುಗತಿಯಲ್ಲಿ ಹೆಚ್ಚಾಗಿ ಸೇತುವೆ ಸಮನಾಗಿ ನೀರು ಹರಿಯುತ್ತಿತ್ತು. ಸೋಮವಾರ ಬೆಳಗ್ಗೆ ಸೇತುವೆಯ ಮೇಲಿಂದ ನೀರು ಹರಿಯುತ್ತಿದೆ. ಕಾಗಿಣಾ ನದಿ ಮೇಲ್ಬಾಗದ ಸೇಡಂ, ಚಿಂಚೋಳಿ, ಕಾಳಗಿ ತಾಲೂಕುಗಳಲ್ಲಿ ಹಾಗೂ ಬೆಣ್ಣೆತೋರಾ ಜಲಾಶಯದಿಂದ ನೀರು ಬಿಟ್ಟಿದ್ದರಿಂದ ನದಿಯಲ್ಲಿ ಪ್ರವಾಹ ಉಕ್ಕಿ ಹರಿಯುತ್ತಿದೆ.

ಸೇತುವೆ ಮಾರ್ಗವಾಗಿ ನಿತ್ಯವೂ ಕಲಬುರಗಿಗೆ ಸಂಚರಿಸುತ್ತಿದ್ದ ಕಲ್ಯಾಣ ಕರ್ನಾಟಕ ಸಾರಿಗೆ ಬಸ್ ಸಂಚಾರವನ್ನು ರಾವೂರ್, ಶಹಾಬಾದ ಮಾರ್ಗಕ್ಕೆ ಬದಲಿಸಲಾಗಿದೆ. ಸರ್ಕಾರಿ ನೌಕರರು, ಸಾರ್ವಜನಿಕರು, ಶಾಲಾ ಕಾಲೇಜಿಗೆ ತೆರಳುವ ವಿದ್ಯಾರ್ಥಿಗಳು, ಪ್ರಯಾಣಿಕರು ಚಿತ್ತಾಪುರಕ್ಕೆ ಬರಲು ಮತ್ತು ಕಲಬುರಗಿಗೆ ಹೋಗಲು ಶಹಾಬಾದ್ ಮಾರ್ಗದ ಸಂಚಾರ ಅವಲಂಬಿಸಿದ್ದಾರೆ.

ಚಿತ್ತಾಪುರ ತಾಲೂಕಿನ ಮುಡಬೂಳ, ಕದ್ದರಗಿ, ಶಂಕರವಾಡಿ ಸಮೀಪ ಕಾಗಿಣಾ ನದಿಗೆ ಕಟ್ಟಿರುವ ಬಾಂದಾರು ಸೇತುವೆಗಳು ಪ್ರವಾಹದಲ್ಲಿ ಮುಳುಗಡೆಯಾಗಿವೆ. ಕದ್ದರಗಿ ಸಮೀಪದ ಸೇತುವೆ ಮುಳುಗಡೆಯಾಗಿದ್ದರಿಂದ ಈ ಮಾರ್ಗದ ಚಿತ್ತಾಪುರ- ಶಹಾಬಾದ್ ತಾಲೂಕುಗಳು ಸಂಪರ್ಕಕಡಿದುಕೊಂಡಿವೆ. ಇವಣಿ ಸಮೀಪದ ಹಳ್ಳಕ್ಕೆ ಪ್ರವಾಹ ಉಕ್ಕಿ ಬಂದು ಹಳ್ಳಕ್ಕೆ ಕಟ್ಟಿರುವ ಸೇತುವೆ ಮುಳುಗಡೆಯಾಗಿ ಸಂಚಾರ ಬಂದ್ ಆಗಿದೆ.

ಮರಗೋಳ ಕ್ರಾಸ್, ದಂಡೋತಿ ಗ್ರಾಮ, ಮುಡಬೂಳ ಕ್ರಾಸ್ ಹತ್ತಿರ ಸಿಪಿಐ ಚಂದ್ರಶೇಖರ ತಿಗಡಿ, ಪಿಎಸ್'ಐ ಶ್ರೀಶೈಲ್ ಅಂಬಾಟಿ ಹಾಗೂ ಸಿಬ್ಬಂದಿಗಳು ಕಾಗಿಣ ನದಿಯ ಹತ್ತಿರ ಹೋಗದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಸೂಕ್ತ ಪೊಲೀಸ್ ಬಂದೋಬಸ್ತ್ ಕಲ್ಪಿಸಿದ್ದಾರೆ.

ಬೆಳೆ ಸಂಪೂರ್ಣ ಹಾನಿ

ಧಾರಾಕಾರ ಮಳೆಯಿಂದ ತಾಲೂಕಿನ ವಿವಿಧೆಡೆ ನದಿ, ಹಳ್ಳ, ಕೊಳ್ಳಗಳು ತುಂಬಿ ಹರಿಯುತ್ತಿದ್ದು, ಚಿತ್ತಾಪುರ ತಾಲ್ಲೂಕಿನ ದಂಡೋತಿ, ಭಾಗೋಡಿ, ಮುಡಬೂಳ, ಮರಗೋಳ, ಕದ್ದರಗಿ, ಹೊಸ್ಸೂರ್, ಭಂಕಲಗಾ, ಅಳ್ಳೋಳ್ಳಿ ಸೇರಿದಂತೆ ಇನ್ನಿತರ ಗ್ರಾಮದ ಹೊಲಗಳಲ್ಲಿ ಮಳೆ ನೀರು ಹೊಲಗಳಿಗೆ ನುಗ್ಗಿ‌ ತೊಗರಿ ಬೆಳೆಗಳು ಹಾನಿಯಾಗಿವೆ.

ಮನೆಗಳಿಗೆ ನುಗ್ಗಿದ ಮಳೆ ನೀರು; 32 ಮನೆಗಳಿಗೆ ಹಾನಿ 

ಚಿತ್ತಾಪುರ ತಾಲೂಕಿನ ಗುoಡಗುರ್ತಿ ಗ್ರಾಮದ ಅನೇಕ ಮನೆಗಳಲ್ಲಿ ಮಳೆ ನೀರು ನುಗ್ಗಿದ್ದರಿಂದ ಮನೆಯಲ್ಲಿದ್ದ ದವಸ ಧಾನ್ಯಗಳು ಸಂಪೂರ್ಣ ಹಾನಿಯಾಗಿವೆ.

ಚಿತ್ತಾಪುರ ಪಟ್ಟಣ ಸೇರಿದಂತೆ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಗೆ ಜೂನ್'ಯಿಂದ ಇಲ್ಲಿಯವರೆಗೆ 32 ಮನೆಗಳ ಮೇಲ್ಚಾವಣಿ ಮತ್ತು ಗೋಡೆ ಕುಸಿತಗೊಂಡಿವೆ ಎಂದು ತಹಶೀಲ್ದಾರ್ ನಾಗಯ್ಯ ಹಿರೇಮಠ ಮಾಹಿತಿ ನೀಡಿದ್ದಾರೆ.

ಧಾರಾಕಾರ ಮಳೆ ಸುರಿಯುತ್ತಿರುವುದರಿಂದ ಮನೆಗಳು ಹಾನಿಗೊಳಾಗುತ್ತಿದ್ದು ಕಂದಾಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರೀಶಿಲನೆ ನಡೆಸಿದ್ದಾರೆ. ಸಾರ್ವಜನಿಕರು ಕೂಡ ಎಚ್ಚರಿಕೆಯಿಂದ ಇರುವಂತೆ ಸಲಹೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News