×
Ad

Kalaburagi | ಸಾಮಾಜಿಕ ಸತ್ಯ ಎತ್ತಿ ಹಿಡಿದವರು ಕನಕದಾಸರು : ವಿಜಯಕುಮಾರ ಪಾಟೀಲ್

ಕನಕ ದರ್ಶನ ಕಾರ್ಯಕ್ರಮ

Update: 2026-07-09 18:58 IST

ಕಲಬುರಗಿ: ಜಗತ್ತಿನ ಪ್ರತಿಯೊಬ್ಬ ಮನುಷ್ಯನ ಆತ್ಮ ಒಂದೇ ಎಂಬ ಪರಮ ಸತ್ಯವನ್ನು ಸಾರಿದ ಕನಕದಾಸರು, ಹುಟ್ಟಿನಿಂದ ಯಾರೂ ಶ್ರೇಷ್ಠರಲ್ಲ, ನಡತೆಯಿಂದ ಮಾತ್ರ ಶ್ರೇಷ್ಠರಾಗುತ್ತಾರೆ ಎಂಬ ಸಾಮಾಜಿಕ ಸಂದೇಶವನ್ನು ಜಗತ್ತಿಗೆ ನೀಡಿದ ಮಹಾನ್ ಸಂತ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ವಿಜಯಕುಮಾರ ಪಾಟೀಲ್ ತೇಗಲತಿಪ್ಪಿ ಹೇಳಿದರು.

ನಗರದ ಕನ್ನಡ ರತ್ನ ಡಿ ಕರಿಯರ್ ಅಕಾಡೆಮಿಯಲ್ಲಿ ಕಾಗಿನೆಲೆ ಅಭಿವೃದ್ಧಿ ಪ್ರಾಧಿಕಾರ ಹಾಗೂ ಕಲಾನಿಕೇತನ ಟ್ರಸ್ಟ್ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ ‘ಕನಕ ದರ್ಶನ’ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು, ಕನಕದಾಸರ ಜೀವನ ಮೌಲ್ಯಗಳು ಹಾಗೂ ತತ್ವ-ಸಿದ್ಧಾಂತಗಳನ್ನು ವಿದ್ಯಾರ್ಥಿಗಳು ಅಧ್ಯಯನ ಮಾಡಿದರೆ ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳಲು ಸಾಧ್ಯ ಎಂದು ತಿಳಿಸಿದರು.

ವಿಜಯಪುರದ ಆಂಗ್ಲ ಮಾಧ್ಯಮ ಉಪನ್ಯಾಸಕ ಬಿ.ಎಸ್. ಪೂಜಾರಿ ಉಪನ್ಯಾಸ ನೀಡಿ, ಕನಕದಾಸರು ಸಮಾಜದಲ್ಲಿದ್ದ ಜಾತಿ ಹಾಗೂ ಜನ್ಮ ಆಧಾರಿತ ತಾರತಮ್ಯವನ್ನು ಕಟುವಾಗಿ ಖಂಡಿಸಿದ್ದರು. ಆತ್ಮಾವಲೋಕನ, ಅಂತರಂಗ ಶುದ್ಧಿ ಹಾಗೂ ಸತ್ಯಾನ್ವೇಷಣೆಯ ಸಂದೇಶಗಳು ಅವರ ಸಾಹಿತ್ಯದಲ್ಲಿ ಸ್ಪಷ್ಟವಾಗಿ ಕಾಣುತ್ತವೆ ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕನ್ನಡ ರತ್ನ ಡಿ ಕರಿಯರ್ ಅಕಾಡೆಮಿ ನಿರ್ದೇಶಕ ಡಾಕಪ್ಪ ಎಂ. ಮಾತನಾಡಿ, ತಮ್ಮ ಸಾಹಿತ್ಯದ ಮೂಲಕ ಸಮಾಜದ ಅಂಕುಡೊಂಕುಗಳನ್ನು ತಿದ್ದಿ ಸತ್ಯದ ಮಾರ್ಗವನ್ನು ತೋರಿದ ತತ್ವಜ್ಞಾನಿ ಕನಕದಾಸರ ಆದರ್ಶಗಳು ಇಂದಿನ ಪೀಳಿಗೆಗೆ ಸ್ಪೂರ್ತಿದಾಯಕವಾಗಿವೆ ಎಂದು ಹೇಳಿದರು.

ಸಮಾರಂಭದ ವೇದಿಕೆಯ ಮೇಲೆ ಶ್ರೀನಾಥ್ ಕಣ್ಣಿ,ಅತಿಥಿಗಳು ಹಾಗೂ ಮಾಜಿ ಸೈನಿಕರಾದ ಸಂತೋಷ್ ರಾಥೋಡ್,ಮಲ್ಲಿಕಾರ್ಜುನ್ ಪೂಜಾರಿ,ಸಾಹಿತಿ ಸಂತೋಷ ನಗನೂರ, ಸಾಹಿತಿ ಮತ್ತು ಪತ್ರಕರ್ತ ಬಸವರಾಜ ಶಿಣ್ಣೂರ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News