Kalaburagi | ಡಾ.ಚಂದ್ರಕಲಾ ಬಿದರಿ, ಎಂ.ಎನ್.ಸುಗಂಧಿಗೆ ಕಸಾಪದಿಂದ ಶ್ರದ್ಧಾಂಜಲಿ
ಕಲಬುರಗಿ: ಕನ್ನಡ ಸಾಹಿತ್ಯ ಲೋಕಕ್ಕೆ ಅಪೂರ್ವ ಕೊಡುಗೆ ನೀಡಿದ ಹಿರಿಯ ಲೇಖಕಿ ಡಾ. ಚಂದ್ರಕಲಾ ಬಿದರಿ ಅವರು ಉತ್ತಮ ವಾಗ್ಮಿ, ವೈಚಾರಿಕ ಚಿಂತಕಿ ಹಾಗೂ ಸಾಹಿತ್ಯದ ಆರಾಧಕರಾಗಿದ್ದರು ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಹೇಳಿದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಕರ್ನಾಟಕ ಸಾಹಿತ್ಯ ಅಕಾಡೆಮಿ ಸದಸ್ಯೆಯಾಗಿದ್ದ ದಿವಂಗತ ಡಾ. ಚಂದ್ರಕಲಾ ಬಿದರಿ ಹಾಗೂ ಹಿರಿಯ ಜನಪದ ಕವಿ ಎಂ.ಎನ್. ಸುಗಂಧಿ ಅವರ ಸ್ಮರಣಾರ್ಥ ಆಯೋಜಿಸಿದ್ದ ಶ್ರದ್ಧಾಂಜಲಿ ಸಮಾರಂಭದಲ್ಲಿ ಮಾತನಾಡಿದ ಅವರು, ಡಾ. ಚಂದ್ರಕಲಾ ಬಿದರಿ ಅವರು ತಮ್ಮ ಬದುಕಿನುದ್ದಕ್ಕೂ ಸಾಹಿತ್ಯವನ್ನು ರಕ್ಷಿಸಿ, ಪೋಷಿಸಿ, ಪರಿಪಾಲಿಸುವ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದರು. ಗಡಿನಾಡು ಭಾಗದಲ್ಲಿ ಸಾಹಿತ್ಯ ಹಾಗೂ ಸಾಂಸ್ಕೃತಿಕ ಕ್ಷೇತ್ರಕ್ಕೆ ಗಮನಾರ್ಹ ಸೇವೆ ಸಲ್ಲಿಸಿದ ಅವರು, ಮಹಾತ್ಮರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಬದುಕಿದ್ದರು ಎಂದು ಹೇಳಿದರು.
ಹಿರಿಯ ಜನಪದ ಕವಿ ದಿವಂಗತ ಎಂ.ಎನ್. ಸುಗಂಧಿ ಅವರು ಜನಪದ ಕಲೆಯನ್ನು ತಮ್ಮ ಉಸಿರಾಗಿಸಿಕೊಂಡಿದ್ದ ಅಪರೂಪದ ಕಲಾವಿದರಾಗಿದ್ದರು. ಜನಪದ ಕಲೆಯ ಜೀವಂತಿಕೆ ಮತ್ತು ಪರಂಪರೆಯನ್ನು ಉಳಿಸಿ ಬೆಳೆಸುವಲ್ಲಿ ಮಹತ್ವದ ಪಾತ್ರ ವಹಿಸಿದ್ದ ಅವರು, ತಮ್ಮ ಸುಶ್ರಾವ್ಯ ಕಂಠದ ಮೂಲಕ ಜನಪದ ಹಾಡುಗಳ ಸೊಗಡನ್ನು ಜನಮನಗಳಿಗೆ ತಲುಪಿಸಿದ್ದರು ಎಂದು ತಿಳಿಸಿದರು.
ಶಿಕ್ಷಕ ವೃತ್ತಿಯೊಂದಿಗೆ ಸಾಹಿತ್ಯ ಮತ್ತು ಜನಪದ ಕ್ಷೇತ್ರವನ್ನು ಶ್ರೀಮಂತಗೊಳಿಸಿದ ಎಂ.ಎನ್. ಸುಗಂಧಿ ಅವರ ಸೇವೆ ಸದಾ ಸ್ಮರಣೀಯವಾಗಿರುತ್ತದೆ ಎಂದು ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಹೇಳಿದರು.
ಸಂಶೋಧಕ ಸಾಹಿತಿ ಮುಡುಬಿ ಗುಂಡೇರಾವ, ಹಿರಿಯ ಸಾಹಿತಿ ನರಸಿಂಗರಾವ ಹೇಮನೂರ, ಕೇಂದ್ರ ಕಸಾಪ ಪ್ರತಿನಿಧಿ ಸೈಯ್ಯದ್ ನಜಿರುದ್ದಿನ್ ಮುತ್ತವಲ್ಲಿ, ಜಿಲ್ಲಾ ಕಸಾಪ ಕಾರ್ಯದರ್ಶಿಗಳಾದ ಶಿವರಾಜ ಅಂಡಗಿ, ಧರ್ಮಣ್ಣ ಎಚ್ ಧನ್ನಿ, ಸೇಡಂ ಕಸಾಪ ಕಾರ್ಯದರ್ಶಿ ಪ್ರಕಾಶ ಗೊಣಗಿ ಮಾತನಾಡಿದರು. ಪ್ರಮುಖರಾದ ಸಿದ್ಧಲಿಂಗ ಬಾಳಿ, ರಾಜೇಂದ್ರ ಮಾಡಬೂಳ, ಸೋಮಶೇಖರಯ್ಯ ಹೊಸಮಠ, ಬಸಯ್ಯಾ ಸ್ವಾಮಿ, ಮಲ್ಲಿನಾಥ ಸಂಗಶೆಟ್ಟಿ, ದಿನೇಶ ಮದಕರಿ, ರಮೇಶ ಬಡಿಗೇರ, ಪ್ರೊ. ಬಿ. ಎ. ಪಾಟೀಲ, ಮಲ್ಲಿಕಾರ್ಜುನ ಇಬ್ರಾಹಿಂಪೂರ, ವಿಉನೋದಕುಮಾರ ಜೆ.ಎಸ್., ನಾಗರಾಜ ಪಾಟೀಲ, ರೇಣುಕಾ ಎನ್., ಜಯಶ್ರೀ ಜಮಾದಾರ, ಭುವನೇಶ್ವರಿ ಹಳ್ಳಿಖೇಡ, ಸುಜಾತಾ, ಸಿದ್ಧಪ್ಪ ಸಂಕುನ್ ಮೇಳಕುಂದಾ, ಈರಣ್ಣ, ರೇವಣಸಿದ್ದಪ್ಪ ಜೀವಣಗಿ, ಡಾ. ಮಲ್ಲಿನಾಥ ತಳವಾರ ಮನೋಹರ ಮರಗುತ್ತಿ, ಶಿವಾನಂದ ಮಠಪತಿ, ಅಮೃತಪ್ಪ ಅಣೂರ, ಗಣೇಶ ಚಿನ್ನಾಕಾರ ಸೇರಿದಂತೆ ಅನೇಕರು ಭಾಗವಹಿಸಿದ್ದರು.