×
Ad

ಬಸವ ತತ್ವ ವಿರೋಧಿಗಳ ವಿರುದ್ಧ ಜೂ.28ರಂದು ಬಸವಕಲ್ಯಾಣದಲ್ಲಿ ಪ್ರತಿಭಟನಾ ಸಭೆ

Update: 2026-06-26 20:23 IST

ಕಲಬುರಗಿ: ಬಸವ ತತ್ವಗಳ ವಿರುದ್ಧ ನಡೆಯುತ್ತಿರುವ ಅಪಪ್ರಚಾರ ಹಾಗೂ ಸೋಗಲಾಡಿಗಳ ನಿಜಸ್ವರೂಪವನ್ನು ಜನರ ಮುಂದಿಡುವ ಉದ್ದೇಶದಿಂದ ಜೂನ್ 28ರಂದು ಬೆಳಿಗ್ಗೆ 10 ಗಂಟೆಗೆ ಬಸವಕಲ್ಯಾಣದಲ್ಲಿ ಪ್ರತಿಭಟನಾ ಸಭೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಬಸವ ಧರ್ಮ ಸಂರಕ್ಷಣ ಹೋರಾಟ ಸಮಿತಿಯ ಮುಖಂಡರಾದ ಆರ್.ಜಿ. ಶೆಟಗಾರ ಹಾಗೂ ಚಿಂತಕಿ ಡಾ. ಮೀನಾಕ್ಷಿ ಬಾಳಿ ತಿಳಿಸಿದರು.

ನಗರದ ಪತ್ರಿಕಾ ಭವನದಲ್ಲಿ ಶುಕ್ರವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶರಣ ತತ್ವ ಮತ್ತು ಸನಾತನ ತತ್ವಗಳ ನಡುವಿನ ತಾತ್ವಿಕ ಸಂಘರ್ಷವು ಬಸವಣ್ಣನವರ ಕಾಲದಿಂದಲೇ ಆರಂಭವಾಗಿದ್ದು, ಇಂದಿಗೂ ಮುಂದುವರಿದಿದೆ. ಯಾವುದೇ ಕಾರಣಕ್ಕೂ ಬಸವ ತತ್ವಗಳನ್ನು ತಿರುಚಲು ಅವಕಾಶ ನೀಡುವುದಿಲ್ಲ. ಪ್ರಾಣ ತ್ಯಾಗ ಮಾಡಬೇಕಾದರೂ ಶರಣ ತತ್ವಗಳ ರಕ್ಷಣೆಗಾಗಿ ಹೋರಾಟ ಮುಂದುವರಿಸಲಾಗುವುದು ಎಂದು ಹೇಳಿದರು.

ಬಸವಾದಿ ಶರಣರು ಪ್ರತಿಪಾದಿಸಿದ ಸಮಾನತೆ, ಮಾನವೀಯತೆ ಹಾಗೂ ‘ದೇಹವೇ ದೇವಾಲಯ’ ಎಂಬ ತತ್ವಗಳು ಇಂದು ವಿಶ್ವದಾದ್ಯಂತ ವ್ಯಾಪಕವಾಗಿ ಹರಡುತ್ತಿದ್ದು, ಅವುಗಳತ್ತ ಜನರು ಹೆಚ್ಚಿನ ಆಸಕ್ತಿ ತೋರುತ್ತಿದ್ದಾರೆ. ಇದೇ ಕಾರಣದಿಂದ ಕೆಲವು ಸನಾತನವಾದಿ ಶಕ್ತಿಗಳಲ್ಲಿ ಆತಂಕ ಉಂಟಾಗಿದೆ ಎಂದು ಆರೋಪಿಸಿದರು.

ಮೌಢ್ಯ, ಕಂದಾಚಾರ, ಜ್ಯೋತಿಷ್ಯ ಸೇರಿದಂತೆ ವಿವಿಧ ಆಚರಣೆಗಳ ಮೂಲಕ ಸಮಾಜದಲ್ಲಿ ಅಸಮಾನತೆಯನ್ನು ಉಳಿಸಿಕೊಂಡು ಬಂದಿರುವವರ ಸ್ವಾರ್ಥಕ್ಕೆ ಬಸವ ತತ್ವಗಳು ಅಡ್ಡಿಯಾಗುತ್ತವೆ. ಜಾತಿ, ವರ್ಣ ಹಾಗೂ ಲಿಂಗಭೇದ ರಹಿತ ಸಮಾಜ ನಿರ್ಮಾಣಕ್ಕಾಗಿ ಶರಣರು ಪ್ರತಿಪಾದಿಸಿದ ಮೌಲ್ಯಗಳು ಸಂಪೂರ್ಣವಾಗಿ ಜಾರಿಯಾದರೆ ಶೋಷಣೆಯ ವ್ಯವಸ್ಥೆಗೆ ಅಂತ್ಯವಾಗಲಿದೆ ಎಂದು ಅಭಿಪ್ರಾಯಪಟ್ಟರು.

ಭಾರತದ ಸಂವಿಧಾನದಿಂದ ಶಿಕ್ಷಣ ವ್ಯಾಪಕಗೊಂಡ ಪರಿಣಾಮ ಇಂದು ಸಾವಿರಾರು ಜನರು ವಚನ ಸಾಹಿತ್ಯವನ್ನು ಅಧ್ಯಯನ ಮಾಡಿ ಬಸವ ತತ್ವಗಳನ್ನು ಅರ್ಥೈಸಿಕೊಂಡು ಅನುಸರಿಸುತ್ತಿದ್ದಾರೆ. ಆದ್ದರಿಂದ ಶರಣ ತತ್ವಗಳನ್ನು ಹತ್ತಿಕ್ಕುವ ಯಾವುದೇ ಪ್ರಯತ್ನ ಯಶಸ್ವಿಯಾಗುವುದಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಜೂನ್ 28ರಂದು ಬಸವಕಲ್ಯಾಣದಲ್ಲಿ ನಡೆಯಲಿರುವ ಪ್ರತಿಭಟನಾ ಸಭೆಯಲ್ಲಿ ಬಸವ ತತ್ವವನ್ನು ನಂಬುವ ಸಂಘಟನೆಗಳು, ಚಿಂತಕರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಹೋರಾಟವನ್ನು ಯಶಸ್ವಿಗೊಳಿಸಬೇಕೆಂದು ಅವರು ಮನವಿ ಮಾಡಿದರು.

ಸುದ್ದಿಗೋಷ್ಠಿಯಲ್ಲಿ ಪ್ರೊ. ಆರ್.ಕೆ. ಹುಡಗಿ, ಅಶೋಕ ಘೂಳಿ, ರವೀಂದ್ರ ಶಾಬಾದಿ ಸೇರಿದಂತೆ ಸಮಿತಿಯ ಪ್ರಮುಖರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News