Kalaburagi | ಸಂಗೀತ ಮನಸ್ಸಿಗೆ ನೆಮ್ಮದಿ ನೀಡುವ ಶಕ್ತಿ : ಡಾ. ಸದಾನಂದ ಪೆರ್ಲ
ಎಂಟು ಸಂಗೀತ ಸಾಧಕರಿಗೆ ಸಿದ್ದರಾಮ ಜಂಬಲದಿನ್ನಿ ಪುರಸ್ಕಾರ ಪ್ರದಾನ
ಕಲಬುರಗಿ: ಸಂಗೀತ ಇರುವೆಡೆ ನೆಮ್ಮದಿ ಇರುತ್ತದೆ. ಸಾಹಿತ್ಯ ಮತ್ತು ಸಂಗೀತವು ಸಮಾಜಕ್ಕೆ ಅಮೂಲ್ಯ ಕೊಡುಗೆಗಳಾಗಿದ್ದು, ಅವು ಮಾನವನ ಬದುಕನ್ನು ಸಮೃದ್ಧಗೊಳಿಸುತ್ತವೆ ಮತ್ತು ಶಾಂತಿ - ನೆಮ್ಮದಿಯನ್ನು ನೀಡುತ್ತದೆ ಎಂದು ಅಕ್ಕಶವಾಣಿಯ ನಿವೃತ್ತ ಕಾರ್ಯಕ್ರಮ ಮುಖ್ಯಸ್ಥರಾದ ಡಾ.ಸದಾನಂದ ಪೆರ್ಲ ಹೇಳಿದರು.
ನಗರದ ಕಲಾಮಂಡಳದಲ್ಲಿ ಜೂ. 15ರಂದು ಸೋಮವಾರ ಪ್ರತಿಭಾ ಸಾಹಿತ್ಯ ಮತ್ತು ಸಾಂಸ್ಕೃತಿಕ ಕಲಾಸಂಸ್ಥೆ, ನಂದೂರ (ಕೆ) ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬೆಂಗಳೂರು ಇವರ ಸಹಯೋಗದಲ್ಲಿ ಆಯೋಜಿಸಿದ್ದ ಸಂಗೀತ ಸೌರಭ’ ಕಾರ್ಯಕ್ರಮದಲ್ಲಿ ಉದ್ಘಾಟಿಸಿ ಮಾತನಾಡಿದರು.
ಸಂಗೀತಗಾರರು ಕೀಳರಿಮೆಯಿಂದ ಹೊರಬಂದು, ಪ್ರಶಸ್ತಿ ಹಾಗೂ ಗೌರವಗಳ ಹಿಂದೆ ಬೀಳದೆ ಸಂಗೀತವನ್ನು ತಪಸ್ಸಿನಂತೆ ಸ್ವೀಕರಿಸಿ ಗುರುಗಳ ಮಾರ್ಗದರ್ಶನದಲ್ಲಿ ಸಂಗೀತ ಕಲಿಯಬೇಕು. ಮೊಬೈಲ್ನಂತಹ ಆಧುನಿಕ ಸಾಧನಗಳ ಅವಲಂಬನೆ ಕಡಿಮೆ ಮಾಡಿ ಸಂಗೀತದ ಸಾಧನೆಗೆ ಹೆಚ್ಚು ಒತ್ತು ನೀಡಬೇಕು ಎಂದು ಹೇಳಿದರು.
ಸಂಗೀತಕ್ಕೆ ಜಾತಿ, ಮತ, ಪಂಥ ಹಾಗೂ ಧರ್ಮಗಳ ಬೇಧವಿಲ್ಲ. ವಚನಗಳಿಗೆ ಸಂಗೀತ ಸಂಯೋಜನೆ ಮಾಡುವ ಮೂಲಕ ಸಂಗೀತ ಕ್ಷೇತ್ರಕ್ಕೆ ಸಿದ್ದರಾಮ ಜಂಬಲದಿನ್ನಿ ಅವರ ಕೊಡುಗೆ ಅಪಾರವಾಗಿದೆ ಎಂದು ಶ್ಲಾಘಿಸಿದರು.
ಪೂಜ್ಯ ಪ್ರಭುಶ್ರೀ ತಾಯಿ ಸಾನಿಧ್ಯ ವಹಿಸಿ ಮಾತನಾಡಿ, ಗರ್ಭಿಣಿಯರು ಸಂಗೀತ ಆಲಿಸಿದರೆ ಮಗುವಿನ ದೈಹಿಕ ಹಾಗೂ ಮಾನಸಿಕ ಬೆಳವಣಿಗೆಗೆ ಸಹಕಾರಿಯಾಗುತ್ತದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ವೀರಯ್ಯ ಸ್ವಾಮಿ ಬೀದಿಮನಿ, ಸಿದ್ದಾರಾಮ ಪಾಟೀಲ, ಶಿವರುದ್ರ ಕರಿಕಲ್ಲ್, ಸಂಜೀವ ಕುಮಾರ ಹುಲಸೂರ, ಸಿದ್ದರಾಮರೆಡ್ಡಿ, ಡಾ.ಆನಂದ ಪಾಟೀಲ ಸಿದ್ದಾಮಣಿ ವೇದಿಕೆ ಮೇಲೆ ಉಪಸ್ಥಿತರಿದ್ದರು. ಸಂಸ್ಥೆ ಕಾರ್ಯದರ್ಶಿ ನಾಗೇಂದ್ರ ಕಲ್ಲಾ ಪ್ರಾಸ್ತಾವಿಕವಾಗಿ ಮಾತನಾಡಿದರು.
ಅಣ್ಣಾರಾಯ ಶೆಳ್ಳಗಿ, ಮತ್ತಿಮಡು,ಅನೀಲ ಮಠಪತಿ, ಬಸವರಾಜ ಸ್ಥಾವರಮಠ,ಆನಂದ ನಂದಿಕೋಳಮಠ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು. ಮೌನೇಶ್ ಪಂಚಾಳ್ ತಬಲಾ ಸಾತ್ ನೀಡಿದರು.
ಡಾ. ವೀರಶೆಟ್ಟಿ ಗಾರಂಪಳ್ಳಿ, ಡಾ.ಬಸವರಾಜ ಭಾಗಾ, ಸಿ.ಎಸ್.ಮಾಲಿ ಪಾಟೀಲ, ಉಪಸ್ಥಿತರಿದ್ದರು, ಶರಣಗೌಡ ಪಾಟೀಲ ಪಾಳಾ ನಿರೂಪಿಸಿದರು, ಸತೀಶ ಪಾಟೀಲ ವಂದಿಸಿದರು.