ಕಲಬುರಗಿ : ತಮ್ಮ ಅಸಹಾಯಕತೆಯನ್ನು ವಿರೋಧ ಪಕ್ಷಗಳ ಮೇಲೆ ಹೊರಿಸುವುದು ಹಾಗೂ ಪ್ರತಿಯೊಂದು ವಿಚಾರಕ್ಕೂ ಕೇಂದ್ರ ಸರ್ಕಾರವನ್ನು ಹೊಣೆ ಮಾಡುವುದು ಆಡಳಿತ ಪಕ್ಷದ ಶಾಸಕರ ಚಾಳಿಯಾಗಿದೆ ಎಂದು ಮಾಜಿ ಶಾಸಕ ಸುಭಾಷ್ ಆರ್. ಗುತ್ತೇದಾರ ಅವರು ಶಾಸಕ ಬಿ.ಆರ್. ಪಾಟೀಲ ವಿರುದ್ಧ ವಾಗ್ದಾಳಿ ನಡೆಸಿದರು.

ಬೆಳೆ ವಿಮೆ ಹಾಗೂ ಬರ ಘೋಷಣೆ ಕುರಿತು ಜನರನ್ನು ದಾರಿ ತಪ್ಪಿಸುವ ರೀತಿಯಲ್ಲಿ ಹೇಳಿಕೆ ನೀಡಲಾಗುತ್ತಿದೆ ಎಂದು ಆರೋಪಿಸಿದ ಅವರು, “ಬರ ಘೋಷಣೆ ಕೇಂದ್ರ ಸರ್ಕಾರದ ಮಾನದಂಡಗಳ ಪ್ರಕಾರವೇ ಆಗಿದೆ ಎಂದು ಹೇಳುವವರು, ಒಂದೇ ವಾರದಲ್ಲಿ ಆ ಮಾನದಂಡಗಳು ಹೇಗೆ ಬದಲಾದವು ಎಂಬುದನ್ನು ಜನರಿಗೆ ಸ್ಪಷ್ಟಪಡಿಸಬೇಕು” ಎಂದು ಪ್ರಶ್ನಿಸಿದರು.

ಕೇಂದ್ರದ ಮಾನದಂಡಗಳೇ ಅಂತಿಮವಾಗಿದ್ದರೆ, ಇಷ್ಟು ಕಡಿಮೆ ಅವಧಿಯಲ್ಲಿ ಬದಲಾವಣೆ ಹೇಗೆ ಸಾಧ್ಯವಾಯಿತು ಎಂಬುದಕ್ಕೂ ಉತ್ತರ ನೀಡಬೇಕು ಎಂದು ಒತ್ತಾಯಿಸಿದರು.

ತಾವು ಶಾಸಕರಾಗಿದ್ದ ಅವಧಿಯಲ್ಲಿ ತಮ್ಮ ದ್ರಾಕ್ಷಿ ಬೆಳೆಗೆ ಬೆಳೆ ವಿಮೆ ದೊರೆತಂತೆ, ಬಿ.ಆರ್. ಪಾಟೀಲ ಅವರ ಕುಟುಂಬದವರಾದ ಕಲ್ಯಾಣರಾವ ಪಾಟೀಲ ಅವರ ದ್ರಾಕ್ಷಿ ಬೆಳೆಯೂ ವಿಮೆ ಪಡೆದಿತ್ತು ಎಂದು ಗುತ್ತೇದಾರ ಹೇಳಿದರು.

ರೈತರ ವಿಚಾರದಲ್ಲಿ ರಾಜಕೀಯ ಮಾಡದೆ, ವಾಸ್ತವಾಂಶಗಳನ್ನು ಜನರ ಮುಂದೆ ಇಡಬೇಕು ಎಂದು ಅವರು ಸಲಹೆ ನೀಡಿದರು.

ಆಳಂದ ಪಟ್ಟಣ ಅಗಲೀಕರಣ ಕಾಮಗಾರಿಗೆ ತಮ್ಮ ಅವಧಿಯಲ್ಲೇ 11 ಕೋಟಿ ರೂ. ಮಂಜೂರು ಮಾಡಲಾಗಿತ್ತು ಎಂದು ತಿಳಿಸಿದ ಅವರು, ಬಸ್ ನಿಲ್ದಾಣ ನಿರ್ಮಾಣ ಕಾಮಗಾರಿಯೂ ತಮ್ಮ ಶಾಸಕತ್ವದ ಅವಧಿಯಲ್ಲೇ ಮಂಜೂರಾಗಿತ್ತು ಎಂದರು.

ನಗರದ ಸಮೀಪ ಹೊಸ ಬಸ್ ನಿಲ್ದಾಣ ನಿರ್ಮಿಸುವ ಯೋಜನೆ ರೂಪಿಸಲಾಗಿದ್ದರೂ, ಚುನಾವಣೆ ನೀತಿ ಸಂಹಿತೆ ಜಾರಿಯಾದ ಕಾರಣ ಕಾಮಗಾರಿ ಮುಂದುವರಿಸಲು ಸಾಧ್ಯವಾಗಲಿಲ್ಲ ಎಂದು ಸ್ಪಷ್ಟಪಡಿಸಿದರು.

ತಮ್ಮ ಅವಧಿಯಲ್ಲಿ ಕೈಗೊಂಡ ಅಭಿವೃದ್ಧಿ ಕಾರ್ಯಗಳ ಬಗ್ಗೆ ದಾಖಲೆಗಳೊಂದಿಗೆ ಸಾರ್ವಜನಿಕ ಚರ್ಚೆಗೆ ತಾವು ಸಿದ್ಧವಿದ್ದು, ಜನರ ಮುಂದೆ ಸತ್ಯಾಸತ್ಯತೆ ಬಯಲಾಗಲಿ ಎಂದು ಗುತ್ತೇದಾರ ಸವಾಲು ಹಾಕಿದರು.

ಬರ ಘೋಷಣೆ ವಿಚಾರದಲ್ಲಿ ಆಡಳಿತ ಪಕ್ಷದವರು ದ್ವಂದ್ವ ನಿಲುವು ಹೊಂದಿದ್ದಾರೆ. ಒಂದು ಕಡೆ ಕೇಂದ್ರದ ಮಾನದಂಡಗಳನ್ನು ಮುಂದಿಟ್ಟುಕೊಂಡು ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಿದ್ದಾರೆ; ಮತ್ತೊಂದೆಡೆ ಜನರ ಒತ್ತಡ ಹೆಚ್ಚಾದಾಗ ಕೇಂದ್ರ ಸರ್ಕಾರದತ್ತ ಬೆರಳು ತೋರಿಸುತ್ತಿದ್ದಾರೆ. ಈ ದ್ವಂದ್ವ ನಿಲುವನ್ನು ಜನತೆ ಗಮನಿಸುತ್ತಿದ್ದಾರೆ ಎಂದು ಸುಭಾಷ್ ಆರ್. ಗುತ್ತೇದಾರ ಟೀಕಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor