Kalaburagi | ವಿದ್ಯಾರ್ಥಿ ರತ್ನ, ಸಾಧಕ ರತ್ನ ಪ್ರಶಸ್ತಿ ಪ್ರದಾನ
ಕಲಬುರಗಿ : ಹೈದರಾಬಾದ್ ಕರ್ನಾಟಕ ಯುವ ಕಲಾವಿದರ ಸಂಘ ಹಾಗೂ ಸಾಂಸ್ಕೃತಿಕ ನೃತ್ಯ ಸಂಘಗಳ ವತಿಯಿಂದ ನಗರದ ಡಾ.ಎಸ್.ಎಂ.ಪಂಡಿತ ರಂಗಮಂದಿರದಲ್ಲಿ 11ನೇ ವರ್ಷದ ವಾರ್ಷಿಕೋತ್ಸವವನ್ನು ಅದ್ದೂರಿಯಾಗಿ ಆಚರಿಸಲಾಯಿತು.
ಕಾರ್ಯಕ್ರಮದ ಅಂಗವಾಗಿ ಸಾಂಸ್ಕೃತಿಕ ನೃತ್ಯ, ಸಂಗೀತ ಪ್ರದರ್ಶನಗಳು, ವಿದ್ಯಾರ್ಥಿ ರತ್ನ ಹಾಗೂ ಸಾಧಕ ರತ್ನ ಪ್ರಶಸ್ತಿ ಪ್ರಧಾನ ಸಮಾರಂಭಗಳು ಗಮನಸೆಳೆದವು.
ಕಾರ್ಯಕ್ರಮವನ್ನು ಗಣ್ಯರು ಉದ್ಘಾಟಿಸಿ ಮಾತನಾಡಿ, ಯುವ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ಸಂಘ ಹಲವು ವರ್ಷಗಳಿಂದ ಸಾಂಸ್ಕೃತಿಕ ಹಾಗೂ ಸಾಮಾಜಿಕ ಚಟುವಟಿಕೆಗಳನ್ನು ಯಶಸ್ವಿಯಾಗಿ ನಡೆಸುತ್ತಿದೆ ಎಂದು ಪ್ರಶಂಸಿಸಿದರು.
ಈ ಸಂದರ್ಭದಲ್ಲಿ ಡಾ.ಸುರೇಶ ಶರ್ಮಾ, ಡಾ. ಅಮರೇಶ್ವರಿ ಬಾಬುರಾವ ಚಿಂಚನಸೂರ, ನೀಲಕಂಠರಾವ ಮೂಲಗೆ, ನಟಿ ಕಾವ್ಯ, ಸಂಘದ ಸಂಸ್ಥಾಪಕ ಅಧ್ಯಕ್ಷ ಗುರು ಬಂಡಿ, ಉದ್ಯಮಿ ಅಭಿಷೇಕ ಬಾಲಾಜಿ, ಡಾ. ಸಿದ್ದು ಪಾಟೀಲ್, ಡಾ. ಸಂಪತ ಹಿರೇಮಠ, ಶ್ಯಾಮ್ ಕಂದೇವಾಲ, ಡಾ. ಸುನೀಲ್ ರಾರೋಡ, ಶೃತಿ ಹತ್ತಿ, ನಾಗೇಶ ಪಾಟೀಲ್ ಅಷ್ಟೂರ, ಸುರೇಂದ್ರ ನರೋಣಾಕರ್, ವಿಜಯಕುಮಾರ ಎಸ್. ಕಟ್ಟಿಮನಿ, ಜಯಶ್ರೀ ಬಿರದಾರ, ಎಂ.ಎ. ಸಿದ್ದಿಕಿ, ಸುಪ್ರಿಯಾ ಎ., ಅಲ್ಲಮಪ್ರಭು ಮಠಪತಿ ಹಾಗೂ ಭೀಮರಾವ್ ಎಸ್. ಹಳ್ಳಿ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.
ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ವಿವಿಧ ಕಲಾ ತಂಡಗಳು ನೃತ್ಯ ಹಾಗೂ ಸಂಗೀತ ಪ್ರದರ್ಶನ ನೀಡಿ ಪ್ರೇಕ್ಷಕರ ಮನರಂಜನೆ ಮಾಡಿದರು. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಗಣ್ಯರಿಗೆ “ಸಾಧಕ ರತ್ನ” ಪ್ರಶಸ್ತಿ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳಿಗೆ “ವಿದ್ಯಾರ್ಥಿ ರತ್ನ” ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.
ಸಂಘದ ಪದಾಧಿಕಾರಿಗಳು, ಕಲಾವಿದರು, ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.