ಕಲಬುರಗಿ | ಪೊಲೀಸರೊಂದಿಗೆ ವಾಗ್ವಾದ: ಸೇಡಂನಲ್ಲಿ ಆರೆಸ್ಸೆಸ್ ಗಣವೇಷಧಾರಿಗಳ ಬಂಧನ
ಕಲಬುರಗಿ : ಆರೆಸ್ಸೆಸ್ ಪಥ ಸಂಚಲನಕ್ಕೆ ಕೊನೆಯ ಹಂತದಲ್ಲಿ ಅನುಮತಿ ನಿರಾಕರಣೆ ಮಾಡಿದ್ದರಿಂದ ಪೊಲೀಸರೊಂದಿಗೆ ಗಣವೇಷಧಾರಿಗಳ ವಾಗ್ವಾದ ನಡೆಸಿದ್ದು, ವಾಗ್ವಾದ ತೀವ್ರಗೊಳ್ಳುತ್ತಿದ್ದಂತೆಯೇ ಆರೆಸ್ಸೆಸ್ ಗಣವೇಷಧಾರಿಗಳನ್ನು ಬಂಧಿಸಿರುವ ಘಟನೆ ರವಿವಾರ ಸಂಜೆ ನಡೆದಿದೆ.
ಸೇಡಂ ಪಟ್ಟಣದಲ್ಲಿ ಸಂಜೆ 4 ಗಂಟೆಗೆ ಪಥ ಸಂಚಲನ ನಿಗದಿ ಮಾಡಲಾಗಿತ್ತು. ಆದರೆ ಸೇಡಂ ಪುರಸಭೆಯು 3 ಗಂಟೆಯ ಬಳಿಕ ಪಥ ಸಂಚಲನಕ್ಕೆ ಅನುಮತಿ ನಿರಾಕರಿಸಿದೆ.
ಪಥ ಸಂಚಲನಕ್ಕೆ ಎಲ್ಲಾ ರೀತಿಯಲ್ಲಿ ಸಿದ್ಧತೆ ಮಾಡಿಕೊಳ್ಳಲಾಗಿದೆ. ಆದರೆ, ಸಿದ್ಧತೆ ಬಳಿಕ ಕಾರ್ಯಕ್ರಮವನ್ನು ನಿರಾಕರಣೆ ಮಾಡಿದರೆ ಹೇಗೆ? ಎಂದು ಮಾಜಿ ಶಾಸಕ ರಾಜಕುಮಾರ್ ಪಾಟೀಲ್ ತೇಲ್ಕೂರ ಪ್ರಶ್ನಿಸಿದ್ದಾರೆ.
ಇದೇ ವೇಳೆಯಲ್ಲಿ ಮಧ್ಯಪ್ರವೇಶಿಸಿದ ಆರೆಸ್ಸೆಸ್ ಗಣವೇಷಧಾರಿಗಳು ಹಾಗೂ ಪೊಲೀಸರ ನಡುವೆ ವಾಗ್ವಾದ ನಡೆದಿದೆ. ಈ ಸಂದರ್ಭದಲ್ಲಿ ಪೊಲೀಸರು, ಗಣವೇಷಧಾರಿಗಳನ್ನು ವಶಕ್ಕೆ ಪಡೆದಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಬಿಜೆಪಿ ಮಾಜಿ ಶಾಸಕ ರಾಜಕುಮಾರ್ ಪಾಟೀಲ್ ತೇಲ್ಕೂರ, ರಾಜಶೇಖರ ನಿಲಂಗಿ, ಶಿವಕುಮಾರ್ ಜಿಕೆ ಪಾಟೀಲ್ ತೆಲ್ಕೂರ, ಶಿವಕುಮಾರ್ ಬೋಳಖೇಟ್ಟಿ, ಕಾಶಿನಾಥ್ ನಿಡಗುಂದಾ ಸೇರಿದಂತೆ ಹಲವರನ್ನು ವಶಕ್ಕೆ ಪಡೆದುಕೊಂಡರು.