ಕಾಸರಗೋಡು ಆರ್ಟಿಒ ಕಚೇರಿಗೆ ವಿಜಿಲೆನ್ಸ್ ದಾಳಿ; ಹೂವಿನ ಕುಂಡದಲ್ಲಿ ನೋಟಿನ ಕಂತೆಗಳು ಪತ್ತೆ
ಕಾಸರಗೋಡು, ಜೂ.5: ಕಾಸರಗೋಡಿನ ಸಾರಿಗೆ ಪ್ರಾಧಿಕಾರ ಕಚೇರಿಗೆ ವಿಜಿಲೆನ್ಸ್ ಅಧಿಕಾರಿಗಳು ಮಿಂಚಿನ ದಾಳಿ ನಡೆಸಿದ್ದು, ಲಂಚ ಪಡೆದಿದ್ದ ಹಣದ ಕಂತೆಗಳು ಆರ್ಟಿಒ ಕಚೇರಿ ಮುಂಭಾಗದ ಹೂನಿನ ಕುಂಡಗಳ ಬುಡದಲ್ಲಿ ಬಚ್ಚಿಟ್ಟಿದ್ದ ಸ್ಥಿತಿಯಲ್ಲಿ ಪತ್ತೆಯಾಗಿವೆ.
ಕಾಸರಗೋಡು ಆರ್ಟಿಒ ಕಚೇರಿಯಲ್ಲಿ ಮಧ್ಯವರ್ತಿಗಳ ಮೂಲಕ ಲಂಚ ನೀಡದೆ ಯಾವುದೇ ಕೆಲಸ ಕಾರ್ಯಗಳು ನಡೆಯುತ್ತಿಲ್ಲ ಎಂಬ ಬಗ್ಗೆ ವಿಜಿಲೆನ್ಸ್ಗೆ ದೂರು ಲಭಿಸಿತ್ತು. ಈ ಹಿನ್ನೆಲೆಯಲ್ಲಿ ವಿಜಿಲೆನ್ಸ್ ಡಿವೈಎಸ್ಪಿ ಉಣ್ಣಿಕೃಷ್ಣನ್ ನೇತೃತ್ವದಲ್ಲಿ ದಾಳಿ ನಡೆಸಿದಾಗ ಆರ್ಟಿಒ ಕಚೇರಿ ಮುಂಭಾಗದ ಹೂ ಕುಂಡಗಳ ಬುಡದಲ್ಲಿ ಬಚ್ಚಿಟ್ಟಿದ್ದ 17,150 ರೂ. ಪತ್ತೆಯಾಗಿದೆ.
ಕಚೇರಿ ದಾಳಿ ಸಂದರ್ಭದಲ್ಲಿ ವಾಹನಕ್ಕೆ ಸಂಬಂಧಪಟ್ಟಂತೆ ನೀಡಬೇಕಾದ ಅರ್ಜಿಗಳು, ಏಜೆಂಟರ ಮೂಲಕ ನಗದು ಸಹಿತ ಸಲ್ಲಿಸಲ್ಪಟ್ಟ ಮನವಿಗಳು, ಅರ್ಹರಿಗೆ ಲಭಿಸಬೇಕಾದ ದಾಖಲೆ ಪತ್ರಗಳು ಮೊದಲಾದವುಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.
ಆರ್ಟಿಒ ಕಚೇರಿಯಲ್ಲಿ ಏಜೆಂಟರ ಮೂಲಕ ಮಾತ್ರ ಕೆಲಸ ನಡೆಯುತ್ತಿದ್ದು, ಇದರಿಂದ ಕಚೇರಿ ಅಧಿಕಾರಿಗಳು ಮತ್ತು ಏಜೆಂಟರು ನಾಗರಿಕರಿಂದ ಲಂಚ ವಸೂಲು ಮಾಡುತ್ತಿದ್ದಾರೆ ಎಂಬ ದೂರುಗಳು ಕೇಳಿಬರುತ್ತಿದ್ದವು. ಈ ಹಿನ್ನೆಲೆಯಲ್ಲಿ ಕಾಞಂಗಾಡ್ ಮತ್ತು ಕಾಸರಗೋಡಿನ ಆರ್ಟಿಒ ಕಚೇರಿಗಳಿಗೆ ಏಕಕಾಲಕ್ಕೆ ದಾಳಿ ನಡೆಸಲಾಗಿದೆ.
ಕಾಞಂಗಾಡ್ ಕಚೇರಿಯಿಂದ ವಾಹನ ಸಂಬಂಧಿ ದಾಖಲೆ ಪತ್ರಗಳು, ಅರ್ಜಿಗಳು ಹಾಗೂ ಇನ್ನಿತರ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ.