ಮಡಿಕೇರಿ: ಹಾರಂಗಿ ಹಿನ್ನೀರಿನಲ್ಲಿ ಈಜಲು ತೆರಳಿದ್ದ ಇಬ್ಬರು ವಿದ್ಯಾರ್ಥಿಗಳು ನೀರುಪಾಲು
Update: 2025-11-12 19:06 IST
ಮಡಿಕೇರಿ: ಹಾರಂಗಿ ಹಿನ್ನೀರಿನಲ್ಲಿ ಈಜಲು ತೆರಳಿದ್ದ ಇಬ್ಬರು ವಿದ್ಯಾರ್ಥಿಗಳು ನೀರುಪಾಲಾದ ಘಟನೆ ಕುಶಾಲನಗರ ಸಮೀಪದ ಹೇರೂರು ಗ್ರಾಮದಲ್ಲಿ ನಡೆದಿದೆ.
ಸುಂಟಿಕೊಪ್ಪ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಸುಂಟಿಕೊಪ್ಪ ಪೊಲೀಸರು, ಕುಶಾಲನಗರ ಅಗ್ನಿಶಾಮಕ ದಳದ ಸಿಬ್ಬಂದಿ ಶೋಧ ಕಾರ್ಯ ನಡೆಸಿದರು.
ಮಡಿಕೇರಿ ನಗರದ ಜೂನಿಯರ್ ಕಾಲೇಜ್ ನಲ್ಲಿ ಪ್ರಥಮ ಪಿಯುಸಿ ವ್ಯಾಸಂಗ ಮಾಡುತ್ತಿರುವ ಹೆಬ್ಬೆಟ್ಟಗೇರಿ ಗ್ರಾಮ ನಿವಾಸಿ ಪಾಂಡೀರ ಪೂವಯ್ಯ ಎಂಬವರ ಪುತ್ರ ಚಂಗಪ್ಪ(17) ಹಾಗೂ ಕಾಲೂರು ಗ್ರಾಮದ ನಿವಾಸಿ ಚನ್ನಪಂಡ ತಮ್ಮಯ್ಯ ಎಂಬವರ ಪುತ್ರ ತರುಣ್ ತಿಮ್ಮಯ್ಯ(17) ನೀರುಪಾಲಾದ ವಿದ್ಯಾರ್ಥಿಗಳು.
ಘಟನೆ ಕುರಿತು ಸುಂಟಿಕೊಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮಧ್ಯಾಹ್ನ 2 ಗಂಟೆಯ ವೇಳೆಗೆ ಈ ಅವಘಡ ಸಂಭವಿಸಿದ್ದು, ಸಂಜೆಯವರೆಗೆ ಶೋಧಕಾರ್ಯ ನಡೆಯಿತು. ರಕ್ಷಣಾ ತಂಡ ಬಾಲಕ ಚಂಗಪ್ಪನ ಮೃತದೇಹವನ್ನು ಹೊರ ತೆಗೆಯುವಲ್ಲಿ ಸಫಲವಾಗಿದೆ.