ಪತ್ರಕರ್ತನ ಮೇಲೆ ಹಲ್ಲೆ ಆರೋಪ: ಕಠಿಣ ಕ್ರಮಕ್ಕೆ ಕೊಪ್ಪಳ ಮೀಡಿಯಾ ಕ್ಲಬ್ ಆಗ್ರಹ
ಕೊಪ್ಪಳ: ಉಡುಪಿ ಜಿಲ್ಲೆಯ ಕುಂದಾಪುರದಲ್ಲಿ ‘ಕನ್ನಡಪ್ರಭ’ ಪತ್ರಿಕೆಯ ತಾಲೂಕು ವರದಿಗಾರ ಶ್ರೀಕಾಂತ್ ಹೆಮ್ಮಾಡಿ ಅವರ ಮೇಲೆ ಹಲ್ಲೆ ನಡೆಸಿದ ಆರೋಪದ ಹಿನ್ನೆಲೆಯಲ್ಲಿ, ಆರೋಪಿತರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಕೊಪ್ಪಳ ಮೀಡಿಯಾ ಕ್ಲಬ್ ಆಗ್ರಹಿಸಿದೆ.
ಈ ಕುರಿತು ಕೊಪ್ಪಳ ಮೀಡಿಯಾ ಕ್ಲಬ್ನಲ್ಲಿ ಸಭೆ ನಡೆಸಿ ಖಂಡನಾ ನಿರ್ಣಯ ಕೈಗೊಳ್ಳಲಾಯಿತು. ಬಳಿಕ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.
ಕುಂದಾಪುರ ತಾಲೂಕು ಆಸ್ಪತ್ರೆಯಲ್ಲಿನ ಭ್ರಷ್ಟಾಚಾರಕ್ಕೆ ಸಂಬಂಧಿಸಿದಂತೆ ಶಾಸಕರ ಹೇಳಿಕೆಯನ್ನು ಆಧರಿಸಿ ಶ್ರೀಕಾಂತ್ ಹೆಮ್ಮಾಡಿ ಅವರು ವರದಿ ಪ್ರಕಟಿಸಿದ್ದರು. ಈ ವರದಿಯನ್ನು ವಿರೋಧಿಸಿ ಸೆ.21ರಂದು ಕುಂದಾಪುರ ತಾಲೂಕು ಆಸ್ಪತ್ರೆಯ ಸರ್ಜನ್ ಡಾ. ಮಹೇಂದ್ರ ಶೆಟ್ಟಿ ಅವರು ಹೋಟೆಲ್ನಲ್ಲಿ ಕುಟುಂಬ ಸಮೇತರಾಗಿದ್ದ ಸಂದರ್ಭದಲ್ಲಿ ಶ್ರೀಕಾಂತ್ ಹೆಮ್ಮಾಡಿ ಅವರ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಹೀಗಾಗಿ ಆರೋಪಿತ ವೈದ್ಯರ ವಿರುದ್ಧ ತಕ್ಷಣ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ಪತ್ರಕರ್ತರು ಸಾರ್ವಜನಿಕ ಹಿತಾಸಕ್ತಿ ಹಾಗೂ ಲಭ್ಯವಿರುವ ಮಾಹಿತಿಯ ಆಧಾರದ ಮೇಲೆ ನಿಷ್ಪಕ್ಷಪಾತವಾಗಿ ವರದಿ ಮಾಡುತ್ತಾರೆ. ಪತ್ರಕರ್ತರ ಮೇಲೆ ಹಲ್ಲೆ ನಡೆಸುವುದು ಮಾಧ್ಯಮ ಸ್ವಾತಂತ್ರ್ಯವನ್ನು ಹತ್ತಿಕ್ಕುವ ಪ್ರಯತ್ನವಾಗಿದ್ದು, ಇಂತಹ ಘಟನೆಗಳು ಪತ್ರಕರ್ತರಲ್ಲಿ ಆತಂಕ ಮೂಡಿಸುತ್ತವೆ ಎಂದು ಮೀಡಿಯಾ ಕ್ಲಬ್ ಕಳವಳ ವ್ಯಕ್ತಪಡಿಸಿದೆ.
ಪತ್ರಕರ್ತರ ಮೇಲೆ ಹಲ್ಲೆ ನಡೆಸಿದ ಆರೋಪ ಎದುರಿಸುತ್ತಿರುವ ಡಾ. ಮಹೇಂದ್ರ ಶೆಟ್ಟಿ ವಿರುದ್ಧ ಸೂಕ್ತ ಶಿಸ್ತು ಕ್ರಮ ಕೈಗೊಳ್ಳಬೇಕು. ರಾಜ್ಯದಲ್ಲಿ ಪತ್ರಕರ್ತರ ಮೇಲೆ ಪದೇಪದೇ ನಡೆಯುತ್ತಿರುವ ಹಲ್ಲೆಗಳಿಗೆ ಕಡಿವಾಣ ಹಾಕಲು ಪತ್ರಕರ್ತರ ಹಿತರಕ್ಷಣೆ ಹಾಗೂ ಅವರ ಮೇಲೆ ಹಲ್ಲೆ ನಡೆಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಸಮಗ್ರ ಕಾಯ್ದೆಯನ್ನು ಶೀಘ್ರ ಜಾರಿಗೆ ತರಬೇಕು ಎಂದು ಮುಖ್ಯಮಂತ್ರಿಗಳಿಗೆ ಸಲ್ಲಿಸಿರುವ ಮನವಿಯಲ್ಲಿ ಆಗ್ರಹಿಸಲಾಗಿದೆ.
ಅಧ್ಯಕ್ಷ ದೇವು ನಾಗನೂರ, ಉಪಾಧ್ಯಕ್ಷ ಮುಕ್ಕಣ್ಣ ಕತ್ತಿ, ಪ್ರಧಾನ ಕಾರ್ಯದರ್ಶಿ ದತ್ತು ಕಮ್ಮಾರ, ಗೌರವಾಧ್ಯಕ್ಷ ಬಸವರಾಜ ಕರಗಲ್, ರವೀಂದ್ರ ರಡ್ಡಿ, ದೊಡ್ಡೇಶ್ ಎಲಿಗಾರ,ವೀರಯ್ಯ ಹಿರೇಮಠ, ಶ್ರೀಕಾಂತ ಅಕ್ಕಿ ,ಮಹೇಶ್ ಗೌಡ ಬಾನಾಪುರ, ಶರಣಬಸವ ಹುಲಿ ಹೈದರ , ವಿನಾಯಕ, ಮಲ್ಲು ಪರುತಿ ಮೊದಲಾದವರು ಇದ್ದಾರು.