Kanakagiri | ಬಸವರೆಡ್ಡಿ ಮಾದಿನಾಳ ಕುಟುಂಬಕ್ಕೆ ನ್ಯಾಯ ಒದಗಿಸಲು ಆಗ್ರಹ
2.50 ಕೋಟಿ ರೂ. ಪರಿಹಾರ ನೀಡಲು ಒತ್ತಾಯ
ಕನಕಗಿರಿ: ನಿವೇಶನ ವಿವಾದದ ಹಿನ್ನೆಲೆಯಲ್ಲಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಬಸವರೆಡ್ಡಿ ಮಾದಿನಾಳ ಅವರ ಕುಟುಂಬಕ್ಕೆ ಸರ್ಕಾರ ನ್ಯಾಯ ಒದಗಿಸಬೇಕು ಎಂದು ಅಖಿಲ ಕರ್ನಾಟಕ ರೆಡ್ಡಿ ಮಹಾಸಭಾದ ರಾಜ್ಯ ಘಟಕದ ಅಧ್ಯಕ್ಷ ಸುಭಾಸಚಂದ್ರ ದಾನರೆಡ್ಡಿ ಆಗ್ರಹಿಸಿದರು.
ಈ ಕುರಿತು ಬುಧವಾರ ಇಲ್ಲಿನ ತಹಶೀಲ್ದಾರ್ ಕಚೇರಿಯ ಶಿರಸ್ತೇದಾರ ಅನಿತಾ ಇಂಡಿ ಹಾಗೂ ಶರಣಪ್ಪ ಅವರಿಗೆ ಮನವಿ ಸಲ್ಲಿಸಿ ಮಾತನಾಡಿದ ಅವರು, ಬಸವರೆಡ್ಡಿ ಅವರ ಆತ್ಮಹತ್ಯೆಗೆ ಕಾರಣರಾದ ಎಲ್ಲ ಆರೋಪಿಗಳನ್ನು ಕೂಡಲೇ ಬಂಧಿಸಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಮೃತರ ಕುಟುಂಬಕ್ಕೆ 2.50 ಕೋಟಿ ರೂ. ಪರಿಹಾರ ನೀಡಬೇಕು. ಮೃತರ ಮಕ್ಕಳಿಗೆ ಸರ್ಕಾರದಿಂದ ಉಚಿತ ಶಿಕ್ಷಣ ಒದಗಿಸಬೇಕು. ಮೃತರಿಗೆ ಸಂಬಂಧಿಸಿದ ನಿವೇಶನಗಳಿಗೆ ಹದ್ದುಬಸ್ತು ಮಾಡಿಕೊಡಬೇಕು. ಕುಟುಂಬದ ಒಬ್ಬ ಸದಸ್ಯರಿಗೆ ಸರ್ಕಾರಿ ನೌಕರಿ ನೀಡಬೇಕು ಎಂದು ಆಗ್ರಹಿಸಿದರು.
ಬಸವರಾಜ ರೆಡ್ಡಿ ಹಾಗೂ ಅವರ ಕುಟುಂಬಕ್ಕೆ ಜೀವ ಬೆದರಿಕೆ ಮತ್ತು ಕಿರುಕುಳ ನೀಡಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಪ್ರಕರಣಕ್ಕೆ ಸಂಬಂಧಿಸಿದ ಪೊಲೀಸ್ ಹಾಗೂ ಪಟ್ಟಣ ಪಂಚಾಯಿತಿ ಅಧಿಕಾರಿಗಳ ವಿರುದ್ಧವೂ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಬೇಡಿಕೆಗಳನ್ನು ಶೀಘ್ರ ಈಡೇರಿಸದಿದ್ದರೆ ಮುಂದಿನ ದಿನಗಳಲ್ಲಿ ರಾಜ್ಯದಾದ್ಯಂತ ಹೋರಾಟ ನಡೆಸಲಾಗುವುದು ಎಂದು ಸುಭಾಸಚಂದ್ರ ದಾನರೆಡ್ಡಿ ಎಚ್ಚರಿಕೆ ನೀಡಿದರು.
ಮಹಾಸಭಾದ ಗೌರವಾಧ್ಯಕ್ಷ ಬಸವರೆಡ್ಡಿ ಗೂರೂಜಿ, ಪ್ರಮುಖರಾದ ಪುರುಷೋತ್ತಮ್ಮ ರೆಡ್ಡಿ ಮಾದಿನಾಳ, ಜಯಪ್ರಕಾಶ ರೆಡ್ಡಿ ಮಾದಿನಾಳ, ನಾಗನಗೌಡ ಪಾಟೀಲ, ಅಯ್ಯನಗೌಡ, ಯಂಕಾರೆಡ್ಡಿ ಕೆರಿ, ನಾಗರಾಜ ಬೇರ್ಗಿ, ತಿರುಮಲರೆಡ್ಡಿ, ದೊಡ್ಡಬಸವ ಸಾನಬಾಳ, ಗಣೇಶರೆಡ್ಡಿ ಕೆರಿ, ವೀರನಗೌಡ, ಇತರರು ಇದ್ದರು. ಇದೇ ಸಮಯದಲ್ಲಿ ಮೃತನ ಮನೆಗೆ ಭೇಟಿ ನೀಡಿ ಕುಟುಂಬಕ್ಕೆ ಸ್ವಾತ್ವಂನ ಹೇಳಿದರು.