Koppala | ಗ್ಯಾಸ್ ಕಟರ್ ಬಳಸಿ ಎಟಿಎಂ ದರೋಡೆಗೆ ಯತ್ನ; ಬಳಿಕ ಆಗಿದ್ದೇನು?
ಕೊಪ್ಪಳ : ಗ್ಯಾಸ್ ಕಟರ್ ಬಳಸಿ ಎಟಿಎಂ ದರೋಡೆಗೆ ಯತ್ನ ನಡೆಸಿದ ಘಟನೆ ಕೊಪ್ಪಳ ನಗರದ ಹೊಸಪೇಟೆ ರಸ್ತೆ ಎಸ್ಬಿಐ ಎಟಿಎಂನಲ್ಲಿ ನಡೆದಿದೆ.
ಬೆಳ್ಳಿಗೆ ಸುಮಾರು 3 ಗಂಟೆಯ ಹೊತ್ತಿಗೆ ಎಟಿಎಂ ಒಳಗೆ ಪ್ರವೇಶಿಸಿದ ದುಷ್ಕರ್ಮಿಗಳು ಮೊದಲು ಎಲ್ಲಾ ಸಿಸಿಟಿವಿಗಳಿಗೆ ಕಪ್ಪು ಸ್ಪ್ರೇ ಹೊಡೆದು ಕಾಣದಂತೆ ಮಾಡಿದ್ದಾರೆ. ನಂತರ ಗ್ಯಾಸ್ ಕಟರ್ ಯಂತ್ರದ ಸಹಾಯದಿಂದ ಎಟಿಎಂ ಯಂತ್ರದ ಮೊದಲ ಕಬ್ಬಿಣದ ಬಾಗಿಲನ್ನು ಕತ್ತರಿಸಲು ಮುಂದಾಗಿದ್ದಾರೆ.
ಗ್ಯಾಸ್ ಕಟರ್ನ ಶಾಖಕ್ಕೆ ಎಟಿಎಂ ಯಂತ್ರಕ್ಕೆ ದಿಢೀರನೆ ಬೆಂಕಿ ಹತ್ತಿಕೊಂದಿದೆ. ಇದನ್ನು ಕಂಡು ಗಾಬರಿಯಾದ ದುಷ್ಕರ್ಮಿಗಳು, ಅಲ್ಲಿಂದ ಪರಾರಿಯಾಗಿದ್ದಾರೆ.
ಎಟಿಎಂ ಯಂತ್ರಕ್ಕೆ ಬೆಂಕಿ ಹತ್ತಿಕೊಂಡಿದ್ದು ಇದರಿಂದ ದಟ್ಟ ಹೊಗೆ ಆವರಿಸಿಕೊಂಡಿದೆ. ಇದನ್ನು ಕಂಡ ಕಟ್ಟಡದ ಮಾಲೀಕರು ತಕ್ಷಣವೇ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದು, ತಕ್ಷಣ ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ಸಿಬ್ಬಂದಿ ಬೆಂಕಿಯನ್ನು ನಂದಿಸಿದ್ದಾರೆ.
ಘಟನಾ ಸ್ಥಳಕ್ಕೆ ಕೊಪ್ಪಳ ನಗರ ಪೊಲೀಸ್ ಠಾಣೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದು, ತನಿಖೆ ನಡೆಸುತ್ತಿದ್ದಾರೆ.