×
Ad

Koppal | ಸಂವಿಧಾನಿಕ ಮೌಲ್ಯ ಅಳವಡಿಸಿಕೊಂಡು ಸಮಾಜ ಪರಿವರ್ತನೆಗೆ ಯುವಜನರು ಮುಂದಾಗಲಿ: ನ್ಯಾ.ದರಗದ

‘ನಾವು ಮತ್ತು ಸಮಾಜ’ ಯುವಜನರ ಸಾಮರ್ಥ್ಯ ಅಭಿವೃದ್ಧಿ ಕಾರ್ಯಾಗಾರಕ್ಕೆ ಚಾಲನೆ

Update: 2026-07-10 22:13 IST

ಕೊಪ್ಪಳ, ಜು.10: ಉತ್ತಮ ಸಮಾಜ ನಿರ್ಮಾಣದಲ್ಲಿ ಯುವಜನರ ಪಾತ್ರ ಅತ್ಯಂತ ಮಹತ್ವದ್ದಾಗಿದ್ದು, ಸಮಾನತೆ, ಭ್ರಾತೃತ್ವ ಹಾಗೂ ಸಂವಿಧಾನಿಕ ಮೌಲ್ಯಗಳನ್ನು ಅಳವಡಿಸಿಕೊಂಡು ಸಮಾಜ ಪರಿವರ್ತನೆಗೆ ಮುಂದಾಗಬೇಕು ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶ ಮಹಾಂತೇಶ ಎಸ್. ದರಗದ ಹೇಳಿದರು.

ನಗರದ ಕುಷ್ಟಗಿ ರಸ್ತೆಯ ಸಮೂಹ ಸಾಮರ್ಥ್ಯ ಕಟ್ಟಡದ ಸಭಾಂಗಣದಲ್ಲಿ ಇಂಡಿಯನ್ ಸೋಶಿಯಲ್ ಇನ್‌ಸ್ಟಿಟ್ಯೂಟ್ (ಐಎಸ್‌ಐ), ಸಮೂಹ ಸಾಮರ್ಥ್ಯ ಹಾಗೂ ಅಲ್ಫಾ ಫೌಂಡೇಶನ್, ವಿಕಾಸ ಸೇವಾ ಟ್ರಸ್ಟ್, ನೇರಳು ಸಂಸ್ಥೆ ಮತ್ತು ಸಂಭ್ರಮ ಸಂಸ್ಥೆಗಳ ಸಹಯೋಗದಲ್ಲಿ ಶುಕ್ರವಾರ ಆಯೋಜಿಸಿದ್ದ ಮೂರು ದಿನಗಳ ‘ನಾವು ಮತ್ತು ಸಮಾಜ’ ಯುವಜನರ ಸಾಮರ್ಥ್ಯ ಅಭಿವೃದ್ಧಿ ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಮನುಷ್ಯನು ಸಂಘಜೀವಿಯಾಗಿದ್ದು ಸಮಾಜದೊಂದಿಗೆ ಸಾಮರಸ್ಯದಿಂದ ಬದುಕಬೇಕು. ಆದರೆ ಇತ್ತೀಚಿನ ದಿನಗಳಲ್ಲಿ ಹಣ, ಆಸ್ತಿ ಮತ್ತು ಅಧಿಕಾರದ ವ್ಯಾಮೋಹದಿಂದ ಸ್ವಾರ್ಥ ಜೀವನ ಹೆಚ್ಚಾಗುತ್ತಿದ್ದು, ಸಮಾನತೆ ಹಾಗೂ ಭ್ರಾತೃತ್ವದ ಮೌಲ್ಯಗಳು ಕ್ಷೀಣಿಸುತ್ತಿವೆ. ಆಸ್ತಿ, ಹಣ ಮತ್ತು ಸ್ಥಾನಮಾನಕ್ಕಿಂತ ಪ್ರೀತಿ, ವಿಶ್ವಾಸ ಹಾಗೂ ಮಾನವೀಯ ಸಂಬಂಧಗಳಿಗೆ ಹೆಚ್ಚಿನ ಮಹತ್ವ ನೀಡಬೇಕು ಎಂದು ಹೇಳಿದರು.

ಶಿಕ್ಷಣವು ಕೇವಲ ಅಕ್ಷರಜ್ಞಾನಕ್ಕೆ ಸೀಮಿತವಾಗದೆ, ವಿಜ್ಞಾನ, ಕಾನೂನು, ಸಂವಿಧಾನ ಹಾಗೂ ಸಾಮಾಜಿಕ ಮೌಲ್ಯಗಳನ್ನು ಅರ್ಥಮಾಡಿಕೊಳ್ಳುವ ಸಾಧನವಾಗಬೇಕು. ಡಾ. ಬಿ.ಆರ್. ಅಂಬೇಡ್ಕರ್ ಅವರ ‘ಶಿಕ್ಷಣ, ಸಂಘಟನೆ, ಹೋರಾಟ’ ಸಂದೇಶವನ್ನು ಅಳವಡಿಸಿಕೊಂಡು ಸಮಾಜವನ್ನು ಸನ್ಮಾರ್ಗದತ್ತ ಕೊಂಡೊಯ್ಯುವ ಜವಾಬ್ದಾರಿ ಯುವಜನರ ಮೇಲಿದೆ ಎಂದು ತಿಳಿಸಿದರು.

ಉತ್ತಮ ವಿಚಾರಗಳನ್ನು ಒಳಗೊಂಡ ಗ್ರಂಥಗಳನ್ನು ಓದುವ ಮೂಲಕ ಜ್ಞಾನವನ್ನು ವಿಸ್ತರಿಸಿಕೊಳ್ಳಬೇಕು. ನಿರಂತರ ಕಲಿಕೆ ಹಾಗೂ ಸಾಮಾಜಿಕ ಜಾಗೃತಿಯಿಂದ ಮಾತ್ರ ಉತ್ತಮ ಸಮಾಜ ನಿರ್ಮಾಣ ಸಾಧ್ಯ ಎಂದು ಹೇಳಿದರು.

ಮಕ್ಕಳ ಕಲ್ಯಾಣ ಸಮಿತಿಯ ಮಾಜಿ ಸದಸ್ಯೆ ಸರೋಜಾ ಬಾಕಳೆ ಮಾತನಾಡಿ, ಶಿಕ್ಷಣಕ್ಕೆ ಸಾಕಷ್ಟು ಅವಕಾಶಗಳಿದ್ದರೂ ಮಕ್ಕಳು ವಿವಿಧ ರೀತಿಯ ಶೋಷಣೆಗೆ ಒಳಗಾಗುತ್ತಿರುವುದು ಆತಂಕಕಾರಿ. ಮಕ್ಕಳ ಹಕ್ಕುಗಳು ಹಾಗೂ ಅವರಿಗೆ ಲಭ್ಯವಿರುವ ಕಾನೂನು ರಕ್ಷಣೆ ಕುರಿತು ಯುವಜನರು ಸಮಗ್ರ ಅರಿವು ಹೊಂದಬೇಕು ಎಂದು ಸಲಹೆ ನೀಡಿದರು.

ಕಾರ್ಯಾಗಾರದ ಮೊದಲ ದಿನದ ಅಧಿವೇಶನವನ್ನು ಸಂಪನ್ಮೂಲ ವ್ಯಕ್ತಿ ಧರ್ಮರಾಜ ಗೋನಾಳ ನಡೆಸಿಕೊಟ್ಟರು.

ಕಾರ್ಯಕ್ರಮದಲ್ಲಿ ಅಲ್ಫಾ ಫೌಂಡೇಶನ್ ಮುಖ್ಯಸ್ಥೆ ಸಲೀಮಾ ಜಾನ್, ವಿಕಾಸ ಸೇವಾ ಟ್ರಸ್ಟ್ ಅಧ್ಯಕ್ಷ ಸುಭಾನ್ ನೀರಲಗಿ , ಸಂಭ್ರಮ ಸಂಸ್ಥೆಯ ಶಂಕರ್ ಸುರಾಳ , ಐಎಸ್‌ಐ ಸಂಯೋಜಕ ವಸಂತ ಹಾಗೂ ವಿವಿಧ ಭಾಗಗಳ ಶಿಬಿರಾರ್ಥಿಗಳು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News