×
Ad

ಕೊಪ್ಪಳ | ಊಟದಲ್ಲಿ ಜಿರಳೆ ಪತ್ತೆ ಆರೋಪ: ಹಾಸ್ಟೆಲ್ ವಿದ್ಯಾರ್ಥಿಗಳಿಂದ ಪ್ರತಿಭಟನೆ

Update: 2026-03-09 23:44 IST

ಕೊಪ್ಪಳ: ರಾತ್ರಿಯ ಊಟದಲ್ಲಿ ಜಿರಳೆ ಪತ್ತೆಯಾಗಿದೆ ಎಂದು ಆರೋಪಿಸಿ ಎಸ್‌ಸಿ–3 ಹಾಸ್ಟಲ್ ವಿದ್ಯಾರ್ಥಿಗಳು ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿದ ಘಟನೆ ನಡೆದಿದೆ.

ಈ ವೇಳೆ ಎಸ್‌ಸಿ–3 ಹಾಸ್ಟಲ್‌ನಲ್ಲಿನ ಅವ್ಯವಸ್ಥೆ ಹಾಗೂ ವಾರ್ಡನ್ ಮತ್ತು ಸಿಬ್ಬಂದಿಗಳ ಬೇಜವಾಬ್ದಾರಿ ವರ್ತನೆ ಕುರಿತು ವಿದ್ಯಾರ್ಥಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ವಿದ್ಯಾರ್ಥಿಗಳಿಗೆ ಬಾಳೆಹಣ್ಣು ನೀಡದಿರುವುದು, ಕೊಳೆತ ತರಕಾರಿಯಿಂದ ಅಡುಗೆ ತಯಾರಿಸುವುದು, ಸರಿಯಾಗಿ ಬೇಯದ ಊಟ ಬಡಿಸುವುದು ಸೇರಿದಂತೆ ಹಲವು ಸಮಸ್ಯೆಗಳು ಇರುವುದಾಗಿ ಅವರು ಆರೋಪಿಸಿದರು. ಈ ಸಮಸ್ಯೆಗಳನ್ನು ತಕ್ಷಣ ಪರಿಹರಿಸಬೇಕು ಎಂದು ಆಗ್ರಹಿಸಿ ಪ್ರತಿಭಟನೆ ನಡೆಸಿದರು.

ಯಾರಾದರೂ ಸಮಸ್ಯೆಗಳ ಬಗ್ಗೆ ಮಾತನಾಡಿದರೆ “ನಿಮ್ಮ ಫೈಲ್ ತೆಗೆದುಕೊಂಡು ಬನ್ನಿ, ಹಾಸ್ಟಲ್‌ನಿಂದ ಅಮಾನತು ಮಾಡುತ್ತೇನೆ” ಎಂದು ಬೆದರಿಕೆ ಹಾಕಲಾಗುತ್ತಿದೆ ಎಂದು ವಿದ್ಯಾರ್ಥಿಗಳು ದೂರಿದರು.

ಸ್ಥಳಕ್ಕೆ ಭೇಟಿ ನೀಡಿದ ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕರು ಮಾತನಾಡಿ, ವಾರ್ಡನ್‌ಗಳ ಕೊರತೆ ಇರುವುದರಿಂದ ಸಮಸ್ಯೆಗಳು ಉಂಟಾಗಿವೆ. ಸಾಧ್ಯವಾದಷ್ಟು ಉತ್ತಮ ಅಡುಗೆ ವ್ಯವಸ್ಥೆ ಮಾಡಲು ಪ್ರಯತ್ನಿಸುತ್ತೇವೆ. ಸಾಧ್ಯವಾಗದಿದ್ದರೆ ನಿಮಗೆ ದೊರೆಯಬೇಕಾದ ಹಣವನ್ನು ನೀಡುತ್ತೇವೆ ಎಂದು ಹೇಳಿದರು.

ಇದಕ್ಕೆ ವಿರೋಧ ವ್ಯಕ್ತಪಡಿಸಿದ ವಿದ್ಯಾರ್ಥಿಗಳು ವಾರ್ಡನ್ ಬಸವರಾಜ ಅವರನ್ನು ವರ್ಗಾವಣೆ ಮಾಡಬೇಕು ಹಾಗೂ ಹಾಸ್ಟಲ್‌ನಲ್ಲಿ ಮೂಲ ಸೌಕರ್ಯಗಳನ್ನು ಒದಗಿಸಬೇಕು ಎಂದು ಆಗ್ರಹಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಉಪ ನಿರ್ದೇಶಕರು “ತಮಗೆ ಬೇಕಾದ್ದು ಮಾಡಿಕೊಳ್ಳಿ” ಎಂದು ಹೇಳಿದರೆಂದು ಆರೋಪಿಸಿದ ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿ ಧರಣಿಗೆ ಮುಂದಾದರು.

ವಿದ್ಯಾರ್ಥಿಗಳ ಆಕ್ರೋಶ ಹೆಚ್ಚುತ್ತಿದ್ದಂತೆ ಉಪ ನಿರ್ದೇಶಕ ಅಜ್ಜಪ್ಪ ಸೋಲಗಾಡ ಅವರು ಸ್ಥಳದಿಂದ ತೆರಳಿದರು. ಆದರೂ ವಿದ್ಯಾರ್ಥಿಗಳು ಧರಣಿಯನ್ನು ಮುಂದುವರಿಸಿದರು.

ಎಸಿ ಮಹೇಶ್ ಮಾಲಗಿತ್ತಿ ಅವರು ಪ್ರತಿಭಟನಾ ಸ್ಥಳಕ್ಕೆ ಬಂದು ಬೆಳ್ಳಿಗೆ ನಿಮ್ಮ ಸಮಸ್ಯೆ ಬಗೆ ಹರಿಸಲಾಗುವುದು ಎಂದು ಭರವಸೆ ನೀಡಿದ ನಂತರ ವಿದ್ಯಾರ್ಥಿಗಳು ಪ್ರತಿಭಟನೆಯನ್ನು ಕೈ ಬಿಟ್ಟರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News