ವಾಲ್ಮೀಕಿ ಅವರು ಬರೆದ ರಾಮಾಯಣ ಇಡೀ ಮನುಕುಲಕ್ಕೆ ನೀಡಿದ ಅದ್ಭುತ ಕೊಡುಗೆ: ಸಚಿವ ಶಿವರಾಜ ತಂಗಡಗಿ
ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮ
ಕೊಪ್ಪಳ : ಮಹರ್ಷಿ ವಾಲ್ಮೀಕಿರವರು ಬರೆದ ರಾಮಾಯಣ ಮಹಾ ಗ್ರಂಥವು ಇಡೀ ಮನುಕುಲಕ್ಕೆ ನೀಡಿದ ಅದ್ಭುತ ಮಹಾಕಾವ್ಯವಾಗಿದೆ ಎಂದು ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ಎಸ್.ತಂಗಡಗಿ ಹೇಳಿದರು.
ಅವರು ಮಂಗಳವಾರ ಕೊಪ್ಪಳ ನಗರದ ಸಾಹಿತ್ಯ ಭವನದಲ್ಲಿ ಆಯೋಜಿಸಲಾಗಿದ್ದ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಇಂದಿನ ಯುವ ಪೀಳಿಗೆಗೆ ಮಹಾನ್ ಯುಗಪುರುಷರು ಸಮಾಜಕ್ಕೆ ನೀಡಿದ ಕೊಡುಗೆ ಮತ್ತು ಮಹಾಪುರುಷರ ಇತಿಹಾಸದ ಬಗ್ಗೆ ತಿಳಿಸುವುದಕ್ಕಾಗಿ ಸರ್ಕಾರದಿಂದ ಮಹರ್ಷಿ ವಾಲ್ಮೀಕಿ ರವರಂತವರ ಮಹನೀಯರ ಜಯಂತಿಯನ್ನು ಸರ್ಕಾರಿ ಕಾರ್ಯಕ್ರಮವನ್ನಾಗಿ ಆಚರಿಸಲಾಗುತ್ತದೆ. ಸಮಾಜದ ಎಲ್ಲಾ ಬಂಧುಗಳ ಒಂದು ಕಡೆ ಸೇರಬೇಕು. ಇತಿಹಾಸದ ಮಹಾ ಪುರುಷರನ್ನ ನೆನಪು ಮಾಡಿಕೊಳ್ಳಬೇಕು ಮತ್ತು ಅವರು ಮಾಡಿದ ಕಾರ್ಯಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎನ್ನುವ ದೃಷ್ಟಿ ಕೋನವನ್ನು ಇಟ್ಟುಕೊಂಡು ಮಹಾಪುರುಷರ ಜಯಂತಿಯನ್ನು ಆಚರಿಸಲಾಗುತ್ತದೆ. ಇಂತಹ ಮಹನೀಯರು ಕೇವಲ ಒಂದು ಸಮುದಾಯಕ್ಕೆ ಸೀಮಿತವಾಗಬಾರದು ಎಂದರು.
ಏಕಲವ್ಯ ವಸತಿ ಶಾಲೆ ಚಾಮರಾಜನಗರದಲ್ಲಿ ಮಾತ್ರ ಇದೆ, ಹಾಗಾಗಿ ಕರ್ನಾಟಕದಲ್ಲಿ ಅತೀ ಹೆಚ್ಚು ವಾಲ್ಮೀಕಿ ಜನಾಂಗದರು ಇರುವ ನಮ್ಮ ಕೊಪ್ಪಳ ಜಿಲ್ಲೆಗೂ ಕೂಡ, ಏಕಲವ್ಯ ವಸತಿ ಶಾಲೆಯನ್ನು ಮಂಜೂರು ಮಾಡುವಂತೆ ಮುಖ್ಯ ಮಂತ್ರಿಗಳಿಗೆ ಪತ್ರ ಬರೆದಿದ್ದೆನೆ. ಪರಿಶಿಷ್ಟ ಪಂಗಡ ಕಲ್ಯಾಣ ಇಲಾಖೆ ನಮ್ಮ ಜಿಲ್ಲೆಗೆ ಆಗಬೇಕಾಗಿದ್ದು, ಅದಕ್ಕೂ ಕೂಡಾ ನಾನು ಪ್ರಸ್ತಾವನೆ ನೀಡಿದ್ದೇನೆ. ಇದಕ್ಕೆ ಮುಖ್ಯ ಮಂತ್ರಿಗಳು ಇನ್ನು ಎರಡೂ-ಮೂರು ಜಿಲ್ಲೆಗಳಲ್ಲಿ ಪರಿಶಿಷ್ಟ ಪಂಗಡ ಕಲ್ಯಾಣ ಇಲಾಖೆಯನ್ನು ಮಾಡುವುದಿದೆ. ಅದರಲ್ಲಿ ಕೊಪ್ಪಳ ಜಿಲ್ಲೆಯ ಕೂಡ ಇದೆ ಅನ್ನುವಂತ ಮಾತನ್ನು ಹೇಳಿದ್ದಾರೆ ಎಂದರು.
ಕೊಪ್ಪಳ ನಗರದಲ್ಲಿ ಮಹರ್ಷಿ ವಾಲ್ಮೀಕಿ ಮೂರ್ತಿ ಅವಶ್ಯಕತೆ ಇದ್ದು, ನಗರದಲ್ಲಿ ಸಂಚರಿಸುವಾಗ ಇಂತಹ ಪುಣ್ಯಾತ್ಮರ ದರ್ಶನ ಆಗಬೇಕು. ಅದಕ್ಕಾಗಿ ನಾನು ಈಗಾಗಲೆ ಶಾಸಕರಿಗೆ ಮತ್ತು ನಗರ ಸಭೆ ಅಧ್ಯಕ್ಷರಿಗೆ ಹೇಳಿದ್ದೇನೆ. ಮೂರ್ತಿ ಸ್ಥಾಪನೆಗಾಗಿ ಎರಡು ಸ್ಥಳಗಳನ್ನು ಗುರುತಿಸಲಾಗಿದೆ ಒಂದು ನಗರ ಸಭೆಯ ಸ್ಥಳ ಇನ್ನೊಂದು ಎಲ್.ಐ.ಸಿ ಆಫಿಸ್ ಹತ್ತಿರದ ಸ್ಥಳಗಳನ್ನು ತೋರಿಸಿದ್ದಾರೆ. ಇದರಲ್ಲಿ ಯಾವುದಾದರೂ ಜಾಗವನ್ನು ನಿಗದಿ ಮಾಡಿ, ಮಹರ್ಷಿ ವಾಲ್ಮೀಕಿ ಅವರ ಮೂರ್ತಿ ಪ್ರತಿಷ್ಠಾಪನೆ ಮಾಡಿ, ಮುಂದಿನ ಜಯಂತಿಯನ್ನು ಮೂರ್ತಿ ಸಮೇತ ಆಚರಣೆ ಮಾಡುವಂತ ಕಾರ್ಯವನ್ನು ಮಾಡೋಣ. ಕನಕಗಿರಿ ಮತ್ತು ಕಾರಟಗಿ ತಾಲ್ಲೂಕುಗಳಲ್ಲಿ ವಾಲ್ಮೀಕಿ ಭವನ ನಿರ್ಮಾಣ ಮಾಡುವುದಕ್ಕಾಗಿ ಎರಡು ತಾಲ್ಲೂಕುಗಳಿಗೆ ತಲಾ 2ಕೋಟಿ ರೂ. ನೀಡಿದ್ದೇನೆ ಎಂದು ಹೇಳಿದರು.
ಕರ್ನಾಟಕ ವಿಧಾನ ಪರಿಷತ್ ಸದಸ್ಯರಾದ ಹೇಮಲತ ನಾಯಕ ಅವರು ಮಾತನಾಡಿ, ಮಹರ್ಷಿ ವಾಲ್ಮೀಕಿ ಅವರು ರಚಿಸಿದ ರಾಮಾಯಣದಿಂದ ನಾವು ಸಾಕಷ್ಟು ಪ್ರತಿ-ಭ್ರಾತೃತ್ವವನ್ನು ಅರಿತುಕೊಳ್ಳಲು ಸಾಧ್ಯವಾಗುತ್ತದೆ. ಅಂತಹ ಮಹತ್ವದ ಗ್ರಂಥವನ್ನು ನೀಡಿದ ಕೀರ್ತಿ ನಮ್ಮ ವಾಲ್ಮೀಕಿ ಸಮಾಜಕ್ಕೆ ಸಲ್ಲುತ್ತದೆ ಎಂದು ಹೇಳಿದರು.
ನಗರಸಭೆಯ ಅಧ್ಯಕ್ಷರಾದ ಅಮ್ಜದ ಪಟೇಲ್ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಡಾ.ಗವಿಸಿದ್ದಪ್ಪ ಮುತ್ತಾಳ ಅವರು ವಿಶೇಷ ಉಪನ್ಯಾಸ ನೀಡಿ, ಮಹರ್ಷಿ ವಾಲ್ಮೀಕಿ ಅವರು ರಚಿಸಿರುವ ರಾಮಾಯಣದಲ್ಲಿನ ತತ್ವಗಳನ್ನು ನಾವು ನಮ್ಮ ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ಸರ್ಕಾರ ಈ ಜಯಂತಿ ಆಚರಣೆ ಮಾಡುತ್ತಿರುವುದಕ್ಕೆ ಒಂದು ಸಾರ್ಥಕತೆ ಸಿಗುತ್ತದೆ ಎಂದರು.
ಜಯಂತಿ ಕಾರ್ಯಕ್ರಮದಲ್ಲಿ ಎಸೆಸೆಲ್ಸಿ, ಪಿಯುಸಿ ಪದವಿ ಹಾಗೂ ಕ್ರೀಡೆ ಸೇರಿದಂತೆ ಮುಂತಾದ ಕಾರ್ಯಗಳಲ್ಲಿ ಸಾಧನೆ ಮಾಡಿದ ಪರಿಶಿಷ್ಟ ಪಂಗಡ ಸಮಾಜದ ಮಕ್ಕಳಿಗೆ ಸನ್ಮಾನ ಮಾಡಲಾಯಿತು ಹಾಗೂ ಪ್ರತಿ ವರ್ಷ ಕೊಪ್ಪಳ ಶಾಸಕ ಕೆ.ರಾಘವೇಂದ್ರ ಹಿಟ್ನಾಳ್ ಅವರು ಪರಿಶಿಷ್ಟ ಪಂಗಡದವರ ಸಮಾಜಿಕ ಕಾರ್ಯವನ್ನು ಗುರುತಿಸಿ 50 ಸಾವಿರ ರೂ. ನಗದು ಮತ್ತು ಗೌರವ ಸನ್ಮಾನಕ್ಕೆ ಸರಸ್ವತಿ ನಾಯಕ ಅವರು ಪಡೆದಿರುತ್ತಾರೆ.
ಕಾರ್ಯಕ್ರಮದಲ್ಲಿ ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷರಾದ ರಡ್ಡಿ ಶ್ರೀನಿವಾಸ, ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷ ಮಂಜುನಾಥ ಗೊಂಡಬಾಳ, ಕೊಪ್ಪಳ ಜಿಲ್ಲಾಧಿಕಾರಿ ಡಾ.ಸುರೇಶ ಬಿ. ಇಟ್ನಾಳ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವರ್ಣಿತ್ ನೇಗಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ರಾಮ್ ಎಲ್. ಅರಸಿದ್ಧಿ, ಅಪರ ಜಿಲ್ಲಾಧಿಕಾರಿ ಸಿದ್ರಾಮೇಶ್ವರ, ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಅಜ್ಜಪ್ಪ ಸೋಗಲದ, ಕೊಪ್ಪಳ ತಹಶಿಲ್ದಾರ ಕೊಪ್ಪಳ ತಹಶಿಲ್ದಾರ ವೀಠ್ಠಲ್ ಚೌಗಲಾ, ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ದುಂಡಪ್ಪ ತುರಾದಿ ಹಾಗೂ ವಾಲ್ಮೀಕಿ ಸಮಾಜದ ಜಿಲ್ಲಾ ಅಧ್ಯಕ್ಷ ಕೆ.ಎನ್.ಪಾಟೀಲ, ದರ್ಮದರ್ಶಿ ರಾಮಣ್ಣ ಕಲ್ಲನವರ, ರಾಜ್ಯ ಸಂಘಟನಾ ಕಾರ್ಯದರ್ಶಿ ಸುರೇಶ ಡೊಣ್ಣಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶರಣಪ್ಪ ನಾಯಕ, ಹನುಮಂತಪ್ಪ ನಾಯಕ ಸೇರಿದಂತೆ ಸಮಾಜದ ಇತರೆ ಮುಖಂಡರು ಜಿಲ್ಲಾ ಮಟ್ಟದ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.