ಕನಕಗಿರಿ | ಪೋತಿ ವಿರಾಸತ್ ಪಹಣಿ ಸದುಪಯೋಗಕ್ಕೆ ತಹಶೀಲ್ದಾರ್ ವಿಶ್ವನಾಥ ಮುರುಡಿ ಸಲಹೆ
ಕನಕಗಿರಿ: ತಾಲ್ಲೂಕಿನಲ್ಲಿ ಇ ಪೋತಿ ಆಂದೋಲನ ನಡೆಸುವ ಮೂಲಕ ಪೋತಿ ವಿರಾಸತ್ ಅರ್ಜಿಗಳನ್ನು ಸ್ವೀಕರಿಸಿ ನಿಜವಾದ ವಾರಸುದಾರರ ಹೆಸರಿನಲ್ಲಿ ಪಹಣಿ ಮಾಡಿಸಲಾಗುವುದು ಎಂದು ತಹಶೀಲ್ದಾರ್ ವಿಶ್ವನಾಥ ಮುರುಡಿ ತಿಳಿಸಿದರು.
ತಹಶೀಲ್ದಾರ್ ಕಚೇರಿಯಲ್ಲಿ ಸೋಮವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ತಾಲ್ಲೂಕಿನಲ್ಲಿ ಪಹಣಿ ಹೊಂದಿದ ಒಟ್ಟು 3,000 ಜನರು ಮೃತಪಟ್ಟಿದ್ದಾರೆ, ವಾರಸುದಾರರು ತಮ್ಮ ಹೆಸರಿನಲ್ಲಿ ಮಾಡಿಸಿಕೊಳ್ಳಲು ಮುಂದೆ ಬರಬೇಕು. ಗ್ರಾಮ ಆಡಳಿತ ಅಧಿಕಾರಿಗಳು ಹಾಗೂ ಗ್ರಾಮ ಸಹಾಯಕರು ಗ್ರಾಮಗಳಿಗೆ ಭೇಟಿ ನೀಡಿ ಪೋತಿ ವಿರಾಸತ್ ಬಗ್ಗೆ ಪ್ರಚಾರ ನಡೆಸಿ ಜಾಗೃತಿ ಮೂಡಿಸಬೇಕೆಂದು ಹೇಳಿದರು.
ದಿನದಲ್ಲಿ ಮೂರು ಗಂಟೆಯ ಸಮಯವನ್ನು ಪೋತಿ ವಿರಾಸತ್ ಆಂದೋಲನದ ಕೆಲಸದ ಬಗ್ಗೆ ಮೀಸಲಿಡುವಂತೆ ಆಯಾ ಗ್ರಾಮ ಆಡಳಿತ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಕಂದಾಯ ನಿರೀಕ್ಷಕರು ಹಾಗೂ ಉಪ ತಹಶೀಲ್ದಾರ್ ಅವರು ಮೇಲ್ವಿಚಾರಣೆ ನಡೆಸಬೇಕೆಂದು ತಿಳಿಸಿದರು.
ಪ್ರತಿಯೊಬ್ಬ ಗ್ರಾಮ ಆಡಳಿತಾಧಿಕಾರಿಗಳು ತಿಂಗಳಿಗೆ ತಲಾ 100 ವಾರಸುದಾರರ ಹೆಸರಿನಲ್ಲಿ ಪಹಣಿ ಖಾತಾ ಬದಲಾಯಿಸುವ ಕೆಲಸ ಮಾಡಬೇಕೆಂದು ಹೇಳಿದರು.
ಈ ಕಾರ್ಯಕ್ರಮವು ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾಗಿದ್ದು, ಕಂದಾಯ ಸಚಿವರು ಹಾಗೂ ಜಿಲ್ಲಾಧಿಕಾರಿಗಳ ಆದೇಶದಂತೆ ಯಾರು ಸಹ ನಿರ್ಲಕ್ಷ್ಯ ವಹಿಸುವಂತಿಲ್ಲ, ಕಾನೂನು ಪ್ರಕಾರ ಅಗತ್ಯ ದಾಖಲೆಗಳನ್ನು ಪಡೆದು ಪೋತಿಯಾದ ವಾರಸುದಾರರ ಹೆಸರಿನಲ್ಲಿ ಖಾತೆ ಬದಲಾವಣೆ ಮಾಡಬೇಕೆಂದು ತಿಳಿಸಿದರು.
ಶಿರಸ್ತೇದಾರರಾದ ಅನಿತಾ ಇಂಡಿ, ಶರಣಪ್ಪ, ಭೂಮಿ ಗ್ರಾಮ ಆಡಳಿತ ಅಧಿಕಾರಿ ಶರಣು ಚಳಗೇರಿ ಇದ್ದರು.