ನಾಗರಿಕ ಹಕ್ಕುಗಳನ್ನು ಪ್ರಶ್ನಿಸುವ ಅಧಿಕಾರ ಚುನಾವಣಾ ಆಯೋಗಕ್ಕಿಲ್ಲ : ಶಿವಸುಂದರ್
ಗುಡಿಬಂಡೆ : ನಮ್ಮ ದೇಶದ ಪ್ರಜೆಗಳ ನಾಗರಿಕ ಹಕ್ಕುಗಳನ್ನು ಪ್ರಶ್ನಿಸುವಂತಹ ಹಕ್ಕು ಚುನಾವಣಾ ಆಯೋಗಕ್ಕೆ ಇಲ್ಲ ಎಂದು ಚಿಂತಕ ಶಿವಸುಂದರ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ತಾಲೂಕಿನ ಬೀಚಗಾನಹಳ್ಳಿ ಗ್ರಾಮದಲ್ಲಿನ ಸಮುದಾಯ ಭವನದಲ್ಲಿ ಸಂವಿಧಾನ ಸಂರಕ್ಷಣಾ ಪಡೆ- ಕರ್ನಾಟಕದ ವತಿಯಿಂದ ಆಯೋಜಿಸಿದ್ದ ‘ಸಂವಿಧಾನ ಅಳಿವು ಉಳಿವು ಸಂರಕ್ಷಣೆ’ಯ ಒಂದು ದಿನದ ಕಾರ್ಯಾಗಾರ ಚಿಂತನ ಮಂಥನ ಕಾರ್ಯಾಗಾರದಲ್ಲಿ ಮಾತನಾಡಿದ ಅವರು, ಹಿಂದಿನ ಕಾಲದಲ್ಲಿ ರಾಜ ರಾಣಿಯ ಹೊಟ್ಟೆಯಲ್ಲಿ ಹುಟ್ಟುತ್ತಿದ್ದರು. ಈಗ ರಾಜ ಮತದಾರರ ಪಟ್ಟಿಯಲ್ಲಿ ಹುಟ್ಟುತ್ತಿದ್ದಾನೆ. ಇದು ಈ ದೇಶಕ್ಕೆ ಸಂವಿಧಾನ ಜಾರಿಯಾದಾಗಿನಿಂದ ಮಾತ್ರ. ಈ ದೇಶದ ಸಂವಿಧಾನ ಪ್ರತಿಯೊಬ್ಬ ನಾಗರಿಕನು ಸಹ ಘನತೆಯಿಂದ ಬದುಕುವಂತಹ ಹಕ್ಕನ್ನು ನೀಡಿದೆ. 18 ವರ್ಷ ತುಂಬಿದ ಈ ದೇಶದ ಪ್ರತಿಯೊಬ್ಬ ನಾಗರಿಕನಿಗೂ ಮತದಾನದ ಹಕ್ಕನ್ನು ನೀಡುವುದು ಚುನಾವಣಾ ಆಯೋಗದ ಕರ್ತವ್ಯವೂ ಆಗಿದೆ. ದೇಶದ ಪ್ರತಿಯೊಬ್ಬ ನಾಗರಿಕನಿಗೂ ಸಹ ಮತದಾನದ ಹಕ್ಕನ್ನು ಪ್ರತಿಪಾದಿಸಿದ್ದು ಡಾ .ಬಿ. ಅಂಬೇಡ್ಕರ್ ಎಂಬುದನ್ನು ಮನವರಿಕೆ ಮಾಡಿಕೊಳ್ಳಬೇಕು ಎಂದು ಹೇಳಿದರು.
ಮತದಾರರ ಪಟ್ಟಿ ಪರಿಷ್ಕರಣೆಗೆ ಮನೆಗಳಿಗೆ ಬಿಎಲ್ಒ ರವರು ಬಂದು ಅರ್ಜಿಯನ್ನು ನೀಡುತ್ತಾರೆ. ಆ ಅರ್ಜಿಯನ್ನು ಭರ್ತಿ ಮಾಡಿ ಚುನಾವಣಾ ಕಚೇರಿಗೆ ತಲುಪಿಸಬೇಕು. ಇಲ್ಲವಾದರೆ ನಮ್ಮ ಹೆಸರು ಮತದಾರರ ಪಟ್ಟಿಯಲ್ಲಿ ಇರಲ್ಲ. ಮೊದಲು ಬಿಎಲ್ಒ ಅವರು ಮನೆಗಳಗೆ ಭೇಟಿ ನೀಡಿ ಹೆಸರನ್ನು ಸೇರ್ಪಡೆ ಮಾಡಿಕೊಳ್ಳುವುದು ಅಥವಾ ತೆಗೆಯುವುದನ್ನು ಮಾಡುತ್ತಿದ್ದರು. ಈಗ ಈ ರೀತಿಯಲ್ಲಿ ಮತದಾರ ಪಟ್ಟಿಯನ್ನು ಪರಿಷ್ಕರಣೆ ಮಾಡಲು ಹೊರಟಿದ್ದಾರೆ. ಇದು ತುಂಬಾ ಅಪಾಯದ ನಡೆ. ಜನರು ಎಚ್ಚರಿಕೆಯಿಂದ ಇರಬೇಕಾಗಿದೆ ಎಂದು ತಿಳಿಸಿದರು.
ಈ ಸಂದರ್ಭ ಡಿಎಸ್ಎಸ್ ಹಿರಿಯ ಮುಖಂಡ ಎನ್.ವೆಂಕಟೇಶ್, ಜೀವಿಕಾ ಸಂಘಟನೆಯ ರಾಜ್ಯ ಸಂಚಾಲಕ ಕಿರಣ್ ಕಮಾಲ್ ಪ್ರಸಾದ್, ಎಲ್.ಲಕ್ಷ್ಮೀನಾರಾಯಣರೆಡ್ಡಿ, ಮುಹಮ್ಮದ್ ನೂರ್ವುಲ್ಲಾ, ಕೆಡಿಪಿ ಸದಸ್ಯ ಎಚ್.ಪಿ.ಲಕ್ಷ್ಮೀನಾರಾಯಣ, ಮಂಜುನಾಥ್ ರೆಡ್ಡಿ, ಸೌಭಾಗ್ಯಮ್ಮ, ಸೈದ್ ಬಾಷ್, ರಿಝ್ವ್ವಾನ್, ಎದ್ದೇಳು ಕರ್ನಾಟಕದ ಸಮೀರ್, ಶ್ರೀರಂಗಾಚಾರಿ, ಜೀವಿಕಾ ನಾರಾಯಣಸ್ವಾಮಿ, ಚನ್ನರಾಯಪ್ಪ, ಇನ್ನಿತರರು ಉಪಸ್ಥಿತರಿದ್ದರು.
ಚುನಾವಣಾ ಆಯೋಗವು ಕಾಲಕಾಲಕ್ಕೆ ಮತದಾರರ ಪಟ್ಟಿಯನ್ನು ಪರಿಷ್ಕರಣೆ ಮಾಡುವುದು ಸಾಮಾನ್ಯ. ಆದರೆ ಜನರಿಗೆ ಅರ್ಥವಾಗದ ರೀತಿಯಲ್ಲಿ ಪರಿಷ್ಕರಣೆ ಮಾಡುವುದನ್ನು ದೇಶದ ಜನ ಮನವರಿಕೆ ಮಾಡಿಕೊಳ್ಳಬೇಕು. ದೇಶದ ನಿವಾಸಿಗಳ ಮೇಲೆ ಕೇಂದ್ರ ಸರಕಾರ ಅನುಮಾನದಿಂದ ನೋಡುತ್ತಿದೆ.
-ಶಿವಸುಂದರ್, ಚಿಂತಕ