×
Ad

ತಮಿಳುನಾಡಿನಲ್ಲಿನ ಭಾರಿ ಮಳೆಗೆ ನೀಲಗಿರಿಯಲ್ಲಿ ಭೂಕುಸಿತ: 5 ಜಿಲ್ಲೆಗಳಲ್ಲಿ ಶಾಲಾ ಕಾಲೇಜುಗಳಿಗೆ ರಜೆ

Update: 2023-11-09 14:42 IST

Photo: indiatoday.in

ಚೆನ್ನೈ: ತಮಿಳುನಾಡಿನಲ್ಲಿ ಈಶಾನ್ಯ ಮಾನ್ಸೂನ್ ಮಾರುತವು ಬಿರುಸು ಪಡೆದಿದ್ದು, ಕೊಯಂಬತ್ತೂರು, ತಿರುಪ್ಪೂರು, ಮಧುರೈ, ಥೇಣಿ, ದಿಂಡಿಗಲ್ ಸೇರಿದಂತೆ ಐದು ಜಿಲ್ಲೆಗಳು ಹಾಗೂ ನೀಲಗಿರಿ ಜಿಲ್ಲೆಯ ಕೆಲವು ತಾಲ್ಲೂಕುಗಳಲ್ಲಿನ ಶಾಲಾ ಕಾಲೇಜುಗಳಿಗೆ ಗುರುವಾರದಂದು ರಜೆ ಘೋಷಿಸಲಾಗಿದೆ ಎಂದು indiatoday.in ವರದಿ ಮಾಡಿದೆ. 

ಭಾರಿ ಮಳೆಯಿಂದ ನೀಲಗಿರಿ ಜಿಲ್ಲೆಯ ಕೋಟಾಗಿರಿ-ಮೆಟ್ಟುಪಾಳ್ಯಂ ರಸ್ತೆಯಲ್ಲಿ ಭೂಕುಸಿತವಾಗಿದ್ದು, ಇದರಿಂದ ಸಂಚಾರಕ್ಕೆ ಅಡಚಣೆಯುಂಟಾಗಿತ್ತು. ನಂತರ ಆ ಮಾರ್ಗದಲ್ಲಿ ಸಂಚರಿಸುತ್ತಿದ್ದ ವಾಹನಗಳಿಗೆ ಬೇರೆ ಮಾರ್ಗವಾಗಿ ಪ್ರಯಾಣಿಸಲು ವ್ಯವಸ್ಥೆ ಮಾಡಲಾಯಿತು. ಪರಿಹಾರ ಕಾಮಗಾರಿಗಳು ಪ್ರಗತಿಯಲ್ಲಿವೆ.

ಈ ನಡುವೆ, ಭಾರಿ ಮಳೆಯಿಂದಾಗಿ ಕಲ್ಲರ್ ಮತ್ತು ಅಡ್ಡರ್ಲಿ ನಡುವಿನ ರೈಲ್ವೆ ಹಳಿ ಕೆಳಗಿನ ಮಣ್ಣು ಕೊಚ್ಚಿ ಹೋಗಿರುವುದರಿಂದ ನೀಲಗಿರಿ ಬೆಟ್ಟ ರೈಲ್ವೆ ವಿಭಾಗದ ಎರಡು ರೈಲುಗಳನ್ನು ರದ್ದುಗೊಳಿಸಲಾಗಿದೆ. ಮಧುರೈನ ಹಲವಾರು ಭಾಗಗಳು ಜಲಾವೃತಗೊಂಡಿವೆ ಎಂದು ವರದಿಯಾಗಿದೆ.

ಗುರುವಾರ ತಮಿಳುನಾಡು ಮತ್ತು ಕೇರಳದಾದ್ಯಂತ ಭಾರಿ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆಯು ಮುನ್ಸೂಚನೆ ನೀಡಿದೆ. 

ಭಾರತದ ದಕ್ಷಿಣ ಭಾಗದಲ್ಲಿ ಲಘುವಿನಿಂದ ಸಾಧಾರಣ ಹಾಗೂ ಸಾಕಷ್ಟು ವ್ಯಾಪಕ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆಯು ಅಂದಾಜಿಸಿದೆ. 

ಕಳೆದ ಕೆಲವು ದಿನಗಳಿಂದ ಕೇರಳದಲ್ಲಿ ಗಣನೀಯ ಮಳೆಯಾಗುತ್ತಿದ್ದು, ಬುಧವಾರ ಕಣ್ಣೂರು ಜಿಲ್ಲೆಯಲ್ಲಿ 7 ಸೆಂಟಿಮೀಟರ್ ಮಳೆಯಾಗಿದೆ. 

ಮುಂದಿನ ಎರಡು ದಿನಗಳಲ್ಲಿ ಕೇರಳದಲ್ಲಿ ಭಾರಿ ಮಳೆಯಾಗಲಿದ್ದು, ಇದೇ ಅವಧಿಯಲ್ಲಿ ತಮಿಳುನಾಡಿನಲ್ಲಿ ಸಾಕಷ್ಟು ವ್ಯಾಪಕ ಮಳೆ ಸುರಿಯಲಿದೆ ಎಂದು ಭಾರತೀಯ ಹವಾಮಾನ ಇಲಾಖೆಯ ನೂತನ ವಾರ್ತಾಪತ್ರದಲ್ಲಿ ಮುನ್ಸೂಚನೆ ನೀಡಲಾಗಿದೆ. 

ಗುರುವಾರ ತೆಲಂಗಾಣದಲ್ಲಿ ಚದುರಿದ ಮಳೆಯಾಗುವ ನಿರೀಕ್ಷೆ ಇದ್ದು, ಮಾನ್ಸೂನ್ ಮಳೆಯ ಪರಿಣಾಮವನ್ನು ಎದುರಿಸಲು ಪ್ರಾಧಿಕಾರಿಗಳು ಎಲ್ಲ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಂಡಿವೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News