ಹರೀಶ್ ರಾಣಾ ಪ್ರಕರಣ | ದಯಾಮರಣಕ್ಕೆ ಸುಪ್ರೀಂ ಕೋರ್ಟ್ ಅನುಮತಿ
2018ರಲ್ಲಿ ದಯಾಮರಣಕ್ಕೆ ಅನುಮತಿಸುವ ಮಾರ್ಗಸೂಚಿಗಳನ್ನು ರೂಪಿಸಿದ ಬಳಿಕದ ಮೊದಲ ಪ್ರಕರಣ
ಹರೀಶ್ ರಾಣಾ (Photo credit: indiatoday.in)
ಹೊಸದಿಲ್ಲಿ: 2013ರಿಂದ ಅರಿವು ಅಥವಾ ಜಾಗೃತಿ ಇಲ್ಲದ ಸ್ಥಿತಿಯಲ್ಲಿ ಇರುವ ವ್ಯಕ್ತಿಗೆ ಜೀವ ಉಳಿಸುವ ಚಿಕಿತ್ಸೆಯನ್ನು ನಿಲ್ಲಿಸುವ ದಯಾಮರಣಕ್ಕೆ ಅವಕಾಶ ನೀಡುವ ಮಹತ್ವದ ತೀರ್ಪನ್ನು ಸುಪ್ರೀಂ ಕೋರ್ಟ್ ಬುಧವಾರ ನೀಡಿದೆ. 2018ರಲ್ಲಿ ಇಂತಹ ದಯಾಮರಣಕ್ಕೆ ಅನುಮತಿ ನೀಡುವ ಮಾರ್ಗಸೂಚಿಗಳನ್ನು ರೂಪಿಸಿದ ಬಳಿಕ, ವೈಯಕ್ತಿಕ ಪ್ರಕರಣದಲ್ಲಿ ನ್ಯಾಯಾಲಯ ಇಂತಹ ಆದೇಶ ನೀಡಿರುವುದು ಇದೇ ಮೊದಲ ಬಾರಿಗೆ ಎಂದು ತಿಳಿದುಬಂದಿದೆ.
ಚಂಡೀಗಢದಲ್ಲಿ ಕಟ್ಟಡದಿಂದ ಬಿದ್ದು ಅರಿವು ಅಥವಾ ಜಾಗೃತಿ ಇಲ್ಲದ ಸ್ಥಿತಿಯಲ್ಲಿ ಉಳಿದಿರುವ 31 ವರ್ಷದ ಹರೀಶ್ ರಾಣಾ ಅವರ ಜೀವ ಉಳಿಸುವ ಚಿಕಿತ್ಸೆಯನ್ನು ನಿಲ್ಲಿಸುವ ದಯಾಮರಣಕ್ಕೆ ಸಂಬಂಧಿಸಿದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಅಂಗೀಕರಿಸಿದೆ. ‘ಹರೀಶ್ ರಾಣಾ vs ಭಾರತ ಒಕ್ಕೂಟ’ ಪ್ರಕರಣದಲ್ಲಿ ನ್ಯಾಯಮೂರ್ತಿಗಳಾದ ಜೆ.ಬಿ. ಪಾರ್ದಿವಾಲಾ ಮತ್ತು ಕೆ.ವಿ. ವಿಶ್ವನಾಥನ್ ಅವರ ಪೀಠ ಈ ತೀರ್ಪು ನೀಡಿತು.
2018ರಲ್ಲಿ ಐವರು ನ್ಯಾಯಾಧೀಶರಿದ್ದ ಸಂವಿಧಾನ ಪೀಠವು ಜೀವ ಉಳಿಸುವ ಚಿಕಿತ್ಸೆಯನ್ನು ಹಿಂತೆಗೆದುಕೊಳ್ಳುವ ದಯಾಮರಣ ಹಾಗೂ ಜೀವಂತ ವಿಲ್/ಮುಂಗಡ ನಿರ್ದೇಶನಗಳನ್ನು ಗುರುತಿಸಿ ಅನುಮೋದನೆ ನೀಡಿತ್ತು. ಆ ತೀರ್ಪಿನಲ್ಲಿ ಸಂವಿಧಾನದ ಆರ್ಟಿಕಲ್ 21 ಅಡಿಯಲ್ಲಿ ಬದುಕುವ ಹಕ್ಕಿನಲ್ಲಿ ಘನತೆಯಿಂದ ಬದುಕುವ ಹಕ್ಕು ಸೇರಿದೆ ಎಂದು ಸುಪ್ರೀಂ ಕೋರ್ಟ್ ಹೇಳಿತ್ತು. ಇದೇ ವೇಳೆ ಮಾರಕ ರೋಗದಿಂದ ಬಳಲುತ್ತಿರುವವರು ಅಥವಾ ಚೇತರಿಕೆಯ ಯಾವುದೇ ಭರವಸೆ ಇಲ್ಲದೆ ನಿರಂತರವಾಗಿ ಅರಿವು ಇಲ್ಲದ ಸ್ಥಿತಿಯಲ್ಲಿ ಇರುವ ವ್ಯಕ್ತಿಯೊಬ್ಬರು ಸಾವಿನ ಪ್ರಕ್ರಿಯೆಯನ್ನು ಸುಗಮಗೊಳಿಸುವ ದಯಾಮರಣದ ಹಕ್ಕು ಸಹ ಅದರಲ್ಲಿ ಒಳಗೊಂಡಿದೆ ಎಂದು ನ್ಯಾಯಾಲಯ ಸ್ಪಷ್ಟಪಡಿಸಿತ್ತು.
ಸುಮಾರು 31 ವರ್ಷ ವಯಸ್ಸಿನ ಹರೀಶ್ ರಾಣಾ ಅವರು ಆಗಸ್ಟ್ 2013ರಲ್ಲಿ ಚಂಡೀಗಢದಲ್ಲಿ ಬಿಟೆಕ್ ಪದವಿ ಪಡೆಯುತ್ತಿದ್ದಾಗ ತಮ್ಮ ಪೇಯಿಂಗ್ ಗೆಸ್ಟ್ ನ ನಾಲ್ಕನೇ ಮಹಡಿಯಿಂದ ಬಿದ್ದು ಭೀಕರ ಅಪಘಾತಕ್ಕೀಡಾಗಿದ್ದರು. ಈ ಅಪಘಾತದಲ್ಲಿ ಅವರ ಮೆದುಳಿಗೆ ತೀವ್ರವಾದ ಆಘಾತಕಾರಿ ಗಾಯವಾಗಿದ್ದು, ಅಂದಿನಿಂದ ಅವರು ಅರಿವು ಅಥವಾ ಜಾಗೃತಿ ಇಲ್ಲದ ಸ್ಥಿತಿಯಲ್ಲಿದ್ದಾರೆ.
PEG ಟ್ಯೂಬ್ ಮೂಲಕ ನೀಡಲಾಗುವ ಕ್ಲಿನಿಕಲ್ ಅಸಿಸ್ಟೆಡ್ ನ್ಯೂಟ್ರಿಷನ್ ಮತ್ತು ಹೈಡ್ರೇಶನ್ (CANH) ರೂಪದಲ್ಲಿ ರಾಣಾ ಅವರಿಗೆ ನೀಡಲಾಗುತ್ತಿರುವ ಜೀವರಕ್ಷಕ ಚಿಕಿತ್ಸೆಯನ್ನು ಹಿಂತೆಗೆದುಕೊಳ್ಳುವಂತೆ ಅವರ ಕುಟುಂಬ ನ್ಯಾಯಾಲಯವನ್ನು ಸಂಪರ್ಕಿಸಿತ್ತು.
ಈ ಮೊದಲು ರಾಣಾ ಅವರ ಪೋಷಕರು ದಿಲ್ಲಿ ಹೈಕೋರ್ಟ್ ಅನ್ನು ಸಂಪರ್ಕಿಸಿ, ಅವರ ಸ್ಥಿತಿಯನ್ನು ಪರಿಶೀಲಿಸಲು ವೈದ್ಯಕೀಯ ಮಂಡಳಿಯನ್ನು ರಚಿಸಿ ‘ಕಾಮನ್ ಕಾಸ್ vs ಯೂನಿಯನ್ ಆಫ್ ಇಂಡಿಯಾ’ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ನೀಡಿದ್ದ ಮಾರ್ಗಸೂಚಿಗಳಿಗೆ ಅನುಗುಣವಾಗಿ ಜೀವರಕ್ಷಕ ಚಿಕಿತ್ಸೆಯನ್ನು ಹಿಂತೆಗೆದುಕೊಳ್ಳಬಹುದೇ ಎಂದು ಪರಿಗಣಿಸುವಂತೆ ಕೋರಿದ್ದರು.
ಆದರೆ ದೆಹಲಿ ಹೈಕೋರ್ಟ್ ಅನುಮತಿ ನೀಡಲು ನಿರಾಕರಿಸಿತ್ತು. ಹರೀಶ್ ರಾಣಾ ಅವರಿಗೆ ಯಾಂತ್ರಿಕ ಜೀವರಕ್ಷಕ ಬೆಂಬಲವಿಲ್ಲ ಮತ್ತು ಬಾಹ್ಯ ಸಹಾಯವಿಲ್ಲದೆ ಅವರು ತಮ್ಮನ್ನು ತಾವು ಉಳಿಸಿಕೊಳ್ಳಲು ಸಾಧ್ಯವಿದೆ ಎಂದು ನ್ಯಾಯಾಲಯ ಹೇಳಿತ್ತು. ಅವರು ಮಾರಕ ಅನಾರೋಗ್ಯದಿಂದ ಬಳಲುತ್ತಿಲ್ಲವಾದ್ದರಿಂದ ಜೀವ ಉಳಿಸುವ ಚಿಕಿತ್ಸೆಯನ್ನು ನಿಲ್ಲಿಸುವ ದಯಾಮರಣದ ಪ್ರಶ್ನೆ ಉದ್ಭವಿಸುವುದಿಲ್ಲ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿತ್ತು.
ನಂತರ ಪೋಷಕರು 2024ರಲ್ಲಿ ದೆಹಲಿ ಹೈಕೋರ್ಟ್ ಆದೇಶವನ್ನು ಸುಪ್ರೀಂ ಕೋರ್ಟ್ನಲ್ಲಿ ಪ್ರಶ್ನಿಸಿ, ತಮ್ಮ ಮಗನ ಸ್ಥಿತಿಯನ್ನು ಪರಿಶೀಲಿಸಲು ಪ್ರಾಥಮಿಕ ವೈದ್ಯಕೀಯ ಮಂಡಳಿಯನ್ನು ರಚಿಸುವಂತೆ ಕೋರಿದ್ದರು.
ಉನ್ನತ ನ್ಯಾಯಾಲಯ ಆರಂಭದಲ್ಲಿ ಆ ಬೇಡಿಕೆಯನ್ನು ಅಂಗೀಕರಿಸಲು ನಿರಾಕರಿಸಿದರೂ, ಅಗತ್ಯವಿದ್ದರೆ ಮತ್ತೆ ನ್ಯಾಯಾಲಯವನ್ನು ಸಂಪರ್ಕಿಸಲು ಪೋಷಕರಿಗೆ ಸ್ವಾತಂತ್ರ್ಯ ನೀಡಿತ್ತು.
ರಾಣಾ ಅವರ ಸ್ಥಿತಿ ಬದಲಾಗದೆ ಮತ್ತು ಬದಲಾಯಿಸಲಾಗದ ಕಾರಣ, ಅವರ ತಂದೆ ತಮ್ಮ ಮಗನಿಗೆ ನೀಡಲಾಗುತ್ತಿರುವ ಜೀವರಕ್ಷಕ ಚಿಕಿತ್ಸೆಯನ್ನು ಹಿಂತೆಗೆದುಕೊಳ್ಳುವಂತೆ ಕೋರಿ ಮತ್ತೆ ಅರ್ಜಿ ಸಲ್ಲಿಸಿದ್ದರು.
ಪ್ರಕರಣವನ್ನು ದೀರ್ಘವಾಗಿ ವಿಚಾರಿಸಿದ ಬಳಿಕ ಸುಪ್ರೀಂ ಕೋರ್ಟ್ ಜನವರಿ 15ರಂದು ತೀರ್ಪನ್ನು ಕಾಯ್ದಿರಿಸಿತ್ತು. ಇದೀಗ ನ್ಯಾಯಾಲಯ ಅರ್ಜಿಯನ್ನು ಅಂಗೀಕರಿಸಿ ಹರೀಶ್ ರಾಣಾ ಅವರಿಗೆ ಜೀವ ಉಳಿಸುವ ಚಿಕಿತ್ಸೆಯನ್ನು ನಿಲ್ಲಿಸುವ ದಯಾಮರಣಕ್ಕೆ ಅನುಮತಿ ನೀಡಿದೆ.