ವಿಜಯನಗರ ಕಾಲದ ಕೆರೆ ನಿರ್ಮಾಣ ಶಾಸನ ತೆಕ್ಕಲಕೋಟೆಯಲ್ಲಿ ಪತ್ತೆ
‘ಟೆಕಲಕೊಟೆ’ ಉಲ್ಲೇಖವಿರುವ ಐತಿಹಾಸಿಕ ಶಾಸನ ಬೆಳಕಿಗೆ
ಸಿರುಗುಪ್ಪ: ತಾಲೂಕಿನ ತೆಕ್ಕಲಕೋಟೆಯಲ್ಲಿ ಇತ್ತೀಚೆಗೆ ನಡೆದ ಪ್ರಾಗೈತಿಹಾಸಿಕ ಕಾಲದ ಉತ್ಪನನ ನಡೆದ ‘ಗೌಡ್ರ ಮೂಲೆ’ ಪ್ರದೇಶದಲ್ಲಿ ಕೆರೆ ನಿರ್ಮಾಣಕ್ಕೆ ಸಂಬಂಧಿಸಿದ ಬಂಡೆಗಲ್ಲು ಶಾಸನವೊಂದು ಪತ್ತೆಯಾಗಿದೆ.
ಸ್ಥಳೀಯ ಇತಿಹಾಸ ಸಂಶೋಧನಾರ್ಥಿ ಮನೋಹರ್ ಸಿ.ಎಂ. ಅವರು ಬಂಡೆಗಲ್ಲು ಶಾಸನವನ್ನು ಗುರುತಿಸಿದ್ದಾರೆ. ಧಾರವಾಡದ ಲಿಪಿತಜ್ಞ ಮಾರುತಿ ಭಜಂತ್ರಿ ಅಧ್ಯಯನ ನಡೆಸಿ, ಶಾಸನದ ಲಿಪಿ ಹಾಗೂ ಬರವಣಿಗೆಯ ಶೈಲಿಯನ್ನು ಪರಿಗಣಿಸಿ ಇದು ವಿಜಯನಗರ ಅಥವಾ ವಿಜಯನಗರೋತ್ತರ ಕಾಲಘಟ್ಟದ (17ರಿಂದ 18ನೇ ಶತಮಾನ) ಶಾಸನವಾಗಿರಬಹುದು ಎಂದು ಅಭಿಪ್ರಾಯಪಟ್ಟಿದ್ದಾರೆ.
ಆರು ಸಾಲುಗಳನ್ನು ಹೊಂದಿರುವ ಈ ಬಂಡೆಗಲ್ಲು ಶಾಸನದಲ್ಲಿ ಕನ್ನಡ ಲಿಪಿ ಬಳಸಲಾಗಿದೆ. ಆರಂಭದಲ್ಲಿ ಸೂರ್ಯ ಮತ್ತು ಚಂದ್ರನ ಸಂಕೇತಗಳಿದ್ದು, ‘ಟೆಕಲಕೊಟೆ ನಾಡಗೌಡ ಯರೆ ತ್ರಿಜಣ ಗೌಡನ ಮಗ ಮಲಣಗೌಡನ ಮಗ ಚಿಣಗೌಡನ ಮಗ ಪ್ರಜಟನ ಮಗ ಗೌಡಪನ ಮಗ ತ್ರಿಚಣ ಚನ್ನವಿರಪ ಗೌಡನು ಕಟ್ಟಿಸಿದ ಕೆರೆ’ ಎಂದು ಕೆತ್ತಲಾಗಿದೆ.
ಈ ಪ್ರದೇಶದಲ್ಲಿ ಗೌಡರು ಅಧಿಪತ್ಯ ಹೊಂದಿದ್ದ ಹಿನ್ನೆಲೆಯಲ್ಲಿ ಈ ಸ್ಥಳಕ್ಕೆ ‘ಗೌಡ್ರ ಮೂಲೆ’ ಎಂಬ ಹೆಸರು ಬಂದಿರಬಹುದು ಎಂಬುದನ್ನು ಶಾಸನವು ಸೂಚಿಸುತ್ತದೆ. ಜೊತೆಗೆ ತೆಕ್ಕಲಕೋಟೆಯ ಸ್ಥಳನಾಮವನ್ನು ‘ಟೆಕಲಕೊಟೆ’ ಎಂದು ಉಲ್ಲೇಖಿಸಿರುವುದು ಐತಿಹಾಸಿಕ ಮಹತ್ವ ಪಡೆದಿದೆ.
ಶಾಸನದಲ್ಲಿರುವ ಉಲ್ಲೇಖದ ಪ್ರಕಾರ ತ್ರಿಚಣ ಚನ್ನವಿರಪ ಗೌಡನು ತಾನು ನಿರ್ಮಿಸಿದ ಕೆರೆಯ ನೆನಪಿಗಾಗಿ ತನ್ನ ವಂಶದ ಪ್ರತಿಷ್ಠೆಯನ್ನು ತೋರಿಸುವ ಉದ್ದೇಶದಿಂದ ಈ ಶಾಸನವನ್ನು ಕೆತ್ತಿಸಿದ್ದಾನೆ ಎನ್ನಲಾಗಿದೆ. ವಿಜಯನಗರ ಕಾಲದಲ್ಲಿ ನಾಡಗೌಡರಾಗಿದ್ದ ತನ್ನ ಹಿರಿಯರ ಹೆಸರನ್ನೂ ದಾಖಲಿಸಿರುವುದು ವಿಶೇಷವಾಗಿದೆ.
ಈ ಶಾಸನದ ಪ್ರಕಾರ ತೆಕ್ಕಲಕೋಟೆ ಕುರುಗೋಡಿನ ಸಿಂಧರ ಕಾಲದಲ್ಲಿ ‘ತೆಕ್ಕೆಕಲ್ಲು ೧೨’ ಎಂಬ ನಾಮ ವಿಶೇಷತೆಯನ್ನು ಪಡೆದಿದ್ದು, ವಿಜಯನಗರ ಕಾಲದಲ್ಲಿಯೂ ಪ್ರಮುಖ ನಾಡಾಗಿ ಪ್ರಸಿದ್ಧಿ ಹೊಂದಿತ್ತು ಎಂಬುದು ತಿಳಿದುಬರುತ್ತದೆ.
ಬೃಹತ್ ಬಂಡೆಯೊಂದರ ಮೇಲೆ ಕೆತ್ತಲಾದ ಈ ಶಾಸನದ ಮುಂಭಾಗದಲ್ಲೇ ಕೆರೆಯ ಕುರುಹುಗಳು ಕಂಡುಬರುತ್ತಿದ್ದು, ಪ್ರಸ್ತುತ ಅದನ್ನು ‘ಗುನ್ನಯ್ಯನ ಕೆರೆ’ ಎಂದು ಕರೆಯಲಾಗುತ್ತಿದೆ. ಕೃಷಿ, ಸಾರ್ವಜನಿಕರ ಉಪಯೋಗ ಹಾಗೂ ಪ್ರಾಣಿ-ಪಕ್ಷಿಗಳಿಗೆ ನೀರುಣಿಸುವ ಉದ್ದೇಶದಿಂದ ಕೆರೆಯನ್ನು ನಿರ್ಮಿಸಿದ್ದ ಮಹತ್ವದ ಕಾರ್ಯವನ್ನು ಈ ಶಾಸನ ಸ್ಮರಿಸುತ್ತದೆ. ಶಾಸನ ಪತ್ತೆ ಕಾರ್ಯದಲ್ಲಿ ಅಶೋಕ್ ಅಬಕಾರಿ ಹಾಗೂ ಎಂ ನಾಗರಾಜ ಸಹಕರಿಸಿದ್ದಾರೆ.