×
Ad

ರಾಜಾರೋಷ ಮರಳು ಸಾಗಾಟ; ಹದಗೆಟ್ಟ ರಸ್ತೆಗಳು: ಜನಜೀವನ ಅಸ್ತವ್ಯಸ್ತ

‘ಮಾಮೂಲಿ’ ಸಂಸ್ಕೃತಿಗೆ ಮೌನವಾದರೇ ಜನಸೇವಕರು?

Update: 2026-06-02 14:58 IST

ಕನಕಗಿರಿ: ತಾಲೂಕಿನಾದ್ಯಂತ ಅಕ್ರಮ ಮರಳು ಸಾಗಾಟ ದಂಧೆ ರಾಜಾರೋಷವಾಗಿ ನಡೆಯುತ್ತಿದ್ದು, ಇದರಿಂದಾಗಿ ಡಾಂಬರ್ ರಸ್ತೆಗಳು ಸಂಪೂರ್ಣ ಹದಗೆಟ್ಟು ಜನಜೀವನ ಅಸ್ತವ್ಯಸ್ತಗೊಂಡಿದೆ. ಸಂಬಂಧಿತ ಇಲಾಖೆಗಳ ಅಧಿಕಾರಿಗಳಿಗೆ ಎಲ್ಲ ಮಾಹಿತಿ ಇದ್ದರೂ ‘ಕಂಡೂ ಕಾಣದಂತೆ’ ವರ್ತಿಸುತ್ತಿದ್ದಾರೆ ಎಂಬ ಆರೋಪ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ.

ನವಲಿ ಗ್ರಾಮದ ಮುಕ್ತಿಧಾಮಕ್ಕೆ ಹೋಗುವ ರಸ್ತೆ, ಪಿಯು ಕಾಲೇಜು ಸಮೀಪ, ಉದ್ದಿಹಾಳ್ ರಸ್ತೆ ಬದಿ ಸೇರಿದಂತೆ ಬುನ್ನಟ್ಟಿ, ಯತ್ನಟ್ಟಿ, ಗೂಡದೂರು, ಮಲ್ಲಿಗೆವಾಡ, ಹೀರೆಖೇಡ, ಕರಡೋಣಿ, ಮಲ್ಲಪುರ, ಕ್ಯಾರಿಹಾಳ, ಈಚನಾಳ, ರಾಂಪುರು, ರಾಮದುರ್ಗ ಹಾಗೂ ಚಿಕ್ಕಡಂಕನಕಲ್ ಗ್ರಾಮಗಳ ವ್ಯಾಪ್ತಿಯಲ್ಲಿ ಅಕ್ರಮವಾಗಿ ಮರಳು ಗಣಿಗಾರಿಕೆ ನಡೆಸಲಾಗುತ್ತಿದೆ ಎನ್ನಲಾಗಿದೆ. ಇಲ್ಲಿ ಅಗೆದ ಮರಳನ್ನು ವಿವಿಧ ತಾಲೂಕುಗಳು ಹಾಗೂ ಜಿಲ್ಲೆಗಳಿಗೆ ರಾತ್ರೋರಾತ್ರಿ ಸಾಗಾಟ ಮಾಡಲಾಗುತ್ತಿದೆ.

<ದಿನಕ್ಕೆ 40-50 ಭಾರೀ ವಾಹನಗಳ ಸಂಚಾರ: ಸ್ಥಳೀಯರ ಮಾಹಿತಿ ಪ್ರಕಾರ ಮೇಲೆ ಉಲ್ಲೇಖಿಸಿದ ಗ್ರಾಮಗಳ ವ್ಯಾಪ್ತಿಯಲ್ಲಿ ಪ್ರತಿದಿನ 40ರಿಂದ 50 ಟ್ರ್ಯಾಕ್ಟರ್ ಹಾಗೂ ಟಿಪ್ಪರ್‌ಗಳ ಮೂಲಕ ಹಗಲು-ರಾತ್ರಿ ಎನ್ನದೆ ಮರಳು ಸಾಗಿಸಲಾಗುತ್ತಿದೆ. ವಾಹನಗಳ ಸಾಮರ್ಥ್ಯಕ್ಕೂ ಮೀರಿ ಮರಳು ತುಂಬುವುದರಿಂದ ಭಾರೀ ತೂಕದ, ಭರದ ಓಡಾಟದಿಂದಾಗಿ ಡಾಂಬರ್ ರಸ್ತೆಗಳು ಸಂಪೂರ್ಣ ಹಾಳಾಗಿದ್ದು, ರಸ್ತೆಗಳ ಕೆಳಭಾಗದ ಜಲ್ಲಿಕಲ್ಲುಗಳು ಕಿತ್ತು ಹೊರಬಿದ್ದಿವೆ.

ಹದಗೆಟ್ಟ ರಸ್ತೆಗಳ ಪರಿಣಾಮ ಶಾಲೆ ಹಾಗೂ ಕಾಲೇಜು ವಿದ್ಯಾರ್ಥಿಗಳು ನಿತ್ಯ ಸಂಕಷ್ಟ ಅನುಭವಿಸುತ್ತಿದ್ದಾರೆ. ಸಮರ್ಪಕ ಬಸ್ ಸೌಲಭ್ಯ ಇಲ್ಲದ ಕಾರಣ ಕಾಲ್ನಡಿಗೆಯಲ್ಲಿ ಅಥವಾ ಬೈಕುಗಳಲ್ಲಿ ಸಂಚರಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಧೂಳು ಹಾಗೂ ಗುಂಡಿಗಳ ಮಧ್ಯೆ ಮರಳು ತುಂಬಿದ ಟಿಪ್ಪರ್‌ಗಳು ಅತಿ ವೇಗದಲ್ಲಿ ಸಂಚರಿಸುತ್ತಿರುವುದರಿಂದ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಜೀವದ ಹಂಗು ತೊರೆದು ಓಡಾಡುವಂತಾಗಿದೆ.

<ಮನವಿಗಳಿಗೆ ಸ್ಪಂದನೆ ಇಲ್ಲ: ಅಕ್ರಮ ಮರಳು ಸಾಗಾಟದಿಂದ ಗ್ರಾಮಗಳಲ್ಲಿನ ಡಾಂಬರ್ ರಸ್ತೆಗಳು ಹಾಳಾಗಿವೆ. ಈ ಕುರಿತು ಗಣಿ ಮತ್ತು ಭೂವಿಜ್ಞಾನ ಇಲಾಖೆ, ಕಂದಾಯ ಇಲಾಖೆ ಹಾಗೂ ಪೊಲೀಸ್ ಇಲಾಖೆಯ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಸಲ್ಲಿಸಿದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಅಧಿಕಾರಿಗಳಿಗೆ ಹಲವಾರು ಬಾರಿ ಮನವಿ ಸಲ್ಲಿಸಿದರೂ, ಮರಳು ಮಾಫಿಯಾ ವಿರುದ್ಧ ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಅಧಿಕಾರಿಗಳ ಮೌನವೇ ದಂಧೆಕೋರರಿಗೆ ಶ್ರೀರಕ್ಷೆಯಾಗಿದೆ.

<ವಿರೇಶ, ವಿದ್ಯಾರ್ಥಿ

ಕನಕಗಿರಿ ತಾಲೂಕಿನಲ್ಲಿ ಸರಕಾರಿ ಜಾಗಗಳು, ಹಳ್ಳ-ಕೊಳ್ಳಗಳಲ್ಲಿ ಅಕ್ರಮ ಮರಳು ಗಣಿಗಾರಿಕೆ ನಡೆಸಿ ಕೋಟ್ಯಂತರ ರೂಪಾಯಿ ಲೂಟಿ ಮಾಡಲಾಗುತ್ತಿದೆ. ಇದರಿಂದ ರಸ್ತೆ ಹಾಳಾಗುವುದರ ಜೊತೆಗೆ ವಿದ್ಯಾರ್ಥಿಗಳ ಶಿಕ್ಷಣಕ್ಕೂ ತೊಂದರೆಯಾಗುತ್ತಿದೆ. ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಖುದ್ದಾಗಿ ಸ್ಥಳಕ್ಕೆ ಭೇಟಿ ನೀಡಿ ಅಕ್ರಮ ದಂಧೆಗೆ ಕಡಿವಾಣ ಹಾಕಬೇಕು. ಇಲ್ಲವಾದಲ್ಲಿ ಎಸ್‌ಎಫ್‌ಐ ನೇತೃತ್ವದಲ್ಲಿ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು.

<ಶಿವಕುಮಾರ್ ಈಚನಾಳ, ಎಸ್‌ಎಫ್‌ಐ ಜಿಲ್ಲಾ ಅಧ್ಯಕ್ಷರು, ಕೊಪ್ಪಳ

ಅಕ್ರಮ ಮರಳು ದಂಧೆಯಿಂದ ಸರಕಾರದ ಬೊಕ್ಕಸಕ್ಕೆ ಕೋಟ್ಯಂತರ ರೂಪಾಯಿ ನಷ್ಟ ಉಂಟಾಗುತ್ತಿದ್ದು, ಪರಿಸರ ಹಾಗೂ ಸಾರ್ವಜನಿಕ ಆಸ್ತಿಯಾದ ರಸ್ತೆಗೂ ಹಾನಿಯಾಗುತ್ತಿದೆ. ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಇನ್ನಾದರೂ ಎಚ್ಚೆತ್ತುಕೊಂಡು ಮರಳು ಮಾಫಿಯಾಗೆ ಕಡಿವಾಣ ಹಾಕುತ್ತಾರೆಯೇ ಅಥವಾ ‘ಮಾಮೂಲಿ’ ಸಂಸ್ಕೃತಿಗೆ ಶರಣಾಗಿ ಮೂಕ ಪ್ರೇಕ್ಷಕರಾಗಿಯೇ ಉಳಿಯುತ್ತಾರೆಯೇ ಎಂದು ಕಾದು ನೋಡುತ್ತೇವೆ

<ಯಮನೂರು ಚಲುವಾದಿ, ನವಲಿ ಗ್ರಾಮಸ್ಥ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಹೊನ್ನೂರ ಹುಸೇನ ಬೇಲ್ದಾರ್

contributor

Similar News