×
Ad

ಕುಡಿಯುವ ನೀರಿಗಾಗಿ ಪರದಾಡುತ್ತಿರುವ ಹುಪಳಾ ಗ್ರಾಮಸ್ಥರು

ಕೆರೆ ನೀರು ಬಳಸಿ ಚರ್ಮರೋಗಕ್ಕೆ ತುತ್ತಾಗುತ್ತಿರುವ ಜನರು

Update: 2026-06-02 14:38 IST

ಬೀದರ್: ಭಾಲ್ಕಿ ತಾಲೂಕಿನ ಹುಪಳಾ ಗ್ರಾಮದಲ್ಲಿ ಕಳೆದ ಒಂದು ತಿಂಗಳಿನಿಂದ ತೀವ್ರ ಕುಡಿಯುವ ನೀರಿನ ಸಮಸ್ಯೆ ಉಂಟಾಗಿದ್ದು, ಗ್ರಾಮಸ್ಥರು ದಿನನಿತ್ಯ ನೀರಿಗಾಗಿ ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಕೆಲಸ ಕಾರ್ಯಗಳನ್ನು ಬದಿಗೊತ್ತಿ ಹೊಲ-ಗದ್ದೆಗಳಿಗೆ ತೆರಳಿ ನೀರು ತರುವ ಅನಿವಾರ್ಯತೆ ಎದುರಾಗಿದೆ.

ಬೇಸಿಗೆ ತೀವ್ರಗೊಂಡ ಹಿನ್ನೆಲೆಯಲ್ಲಿ ಗ್ರಾಮದಲ್ಲಿ ಕುಡಿಯುವ ನೀರಿನ ಕೊರತೆ ಹೆಚ್ಚಾಗಿದ್ದು, ಮಹಿಳೆಯರು ಕೊಡಗಳನ್ನು ಹೊತ್ತು ಸುತ್ತಮುತ್ತಲಿನ ಹೊಲಗಳಿಗೆ ತೆರಳಿ ನೀರು ತರುತ್ತಿದ್ದಾರೆ. ಹೊಲಗಳಿಗೆ ಬಿಡಲಾಗುವ ನೀರೇ ಗ್ರಾಮಸ್ಥರಿಗೆ ಆಸರೆಯಾಗಿದ್ದು, ಭೂಮಾಲೀಕರು ನೀರು ನೀಡಲು ನಿರಾಕರಿಸಿದರೆ ಮತ್ತಷ್ಟು ಸಂಕಷ್ಟ ಎದುರಾಗುವ ಸಾಧ್ಯತೆಯಿದೆ.

ಕೆಲವರು ನೀರು ಸಾಗಿಸಲು ಪ್ರತ್ಯೇಕವಾಗಿ ದ್ವಿಚಕ್ರ ವಾಹನಗಳನ್ನು ಬಳಸುತ್ತಿದ್ದು, ಬೈಕ್‌ಗಳಲ್ಲಿ ಹಲವು ಕೊಡಗಳನ್ನು ಹೊತ್ತು ದೂರದ ಪ್ರದೇಶಗಳಿಂದ ನೀರು ತರುತ್ತಿದ್ದಾರೆ.

ಕೆರೆ ನೀರಿನಿಂದ ಆರೋಗ್ಯ ಸಮಸ್ಯೆ

ಗ್ರಾಮದ ಬಳಿಯ ಕೆರೆಯ ನೀರನ್ನು ಸ್ನಾನ ಹಾಗೂ ಇತರೆ ಬಳಕೆಗಳಿಗೆ ಉಪಯೋಗಿಸಲಾಗುತ್ತಿದೆ. ಆದರೆ ಈ ನೀರಿನ ಬಳಕೆಯಿಂದ ಗ್ರಾಮಸ್ಥರಲ್ಲಿ ಚರ್ಮರೋಗ ಸೇರಿದಂತೆ ವಿವಿಧ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿವೆ ಎಂಬ ಆತಂಕ ವ್ಯಕ್ತವಾಗಿದೆ.

ಮೈಯಲ್ಲಿ ತುರಿಕೆ, ಚರ್ಮದ ಮೇಲೆ ಹುಣ್ಣುಗಳು ಕಾಣಿಸಿಕೊಳ್ಳುವುದು ಸಾಮಾನ್ಯವಾಗಿದೆ. ಕುಡಿಯುವ ನೀರಿನ ಅಭಾವದಿಂದ ಕೆಲ ಮಕ್ಕಳು ಇದೇ ನೀರನ್ನು ಸೇವಿಸುತ್ತಿದ್ದು, ಇದರಿಂದ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗುತ್ತಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.

ಸಮಸ್ಯೆಗೆ ಮೂಲ ಕಾರಣ ಟ್ರಾನ್ಸ್‌ಫಾರ್ಮರ್

ಗ್ರಾಮದಲ್ಲಿ ನೀರಿನ ಸಮಸ್ಯೆಗೆ ಪ್ರಮುಖ ಕಾರಣ ಕಡಿಮೆ ಸಾಮರ್ಥ್ಯದ ವಿದ್ಯುತ್ ಟ್ರಾನ್ಸ್‌ಫಾರ್ಮರ್ ಎನ್ನಲಾಗಿದೆ. ಗ್ರಾಮದಲ್ಲಿ ಒಂದೇ ಟ್ರಾನ್ಸ್‌ಫಾರ್ಮರ್ ಇದ್ದು, ಅದರಿಂದ ಇಡೀ ಊರಿನ ವಿದ್ಯುತ್ ಅವಶ್ಯಕತೆಗಳನ್ನು ಪೂರೈಸಬೇಕಾಗಿದೆ.

ಕಡಿಮೆ ವೋಲ್ಟೇಜ್‌ನಿಂದ ನೀರು ಸರಬರಾಜು ಮೋಟಾರ್‌ಗಳು ಪದೇಪದೇ ಸುಟ್ಟುಹೋಗುತ್ತಿವೆ. ಕಳೆದ ಒಂದು ತಿಂಗಳಲ್ಲೇ ಮೂರು ಬಾರಿ ಮೋಟಾರ್ ಹಾನಿಗೊಳಗಾದ ಉದಾಹರಣೆಗಳಿವೆ. ಪರಿಣಾಮವಾಗಿ ನೀರಿನ ಮೂಲ ಲಭ್ಯವಿದ್ದರೂಸಮರ್ಪಕ ವಿದ್ಯುತ್ ಪೂರೈಕೆಯ ಕೊರತೆಯಿಂದ ನೀರು ಸರಬರಾಜು ಸ್ಥಗಿತಗೊಂಡಿದೆ.

<ಮನವಿಗಳಿಗೂ ಸ್ಪಂದನೆ ಇಲ್ಲ: ಗ್ರಾಮದಲ್ಲಿ ಹೆಚ್ಚಿನ ಸಾಮರ್ಥ್ಯದ ಟ್ರಾನ್ಸ್ ಫಾರ್ಮರ್ ಅಳವಡಿಸಬೇಕು ಎಂದು ಗ್ರಾಮಸ್ಥರು ಹಾಗೂ ಗ್ರಾಮ ಪಂಚಾಯಿತಿ ಅಧಿಕಾರಿಗಳು ಹಲವು ಬಾರಿ ಜೆಸ್ಕಾಂ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರೂ ಇದುವರೆಗೆ ಸಮಸ್ಯೆ ಬಗೆಹರಿದಿಲ್ಲ ಎಂದು ಆರೋಪಿಸಲಾಗಿದೆ.

ತಕ್ಷಣ ಹೆಚ್ಚಿನ ವೋಲ್ಟೇಜ್ ಸಾಮರ್ಥ್ಯದ ಟ್ರಾನ್ಸ್‌ಫಾರ್ಮರ್ ಅಳವಡಿಸಿ ನೀರಿನ ಸಮಸ್ಯೆ ಪರಿಹರಿಸಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಗ್ರಾಮದಲ್ಲಿ ನೀರಿನ ಸಮಸ್ಯೆಗೆ ಮೂಲ ಕಾರಣವೇ ಕಡಿಮೆ ವೋಲ್ಟೇಜ್‌ನ ಟ್ರಾನ್ಸ್‌ಫಾರ್ಮರ್. ಹೆಚ್ಚಿನ ಸಾಮರ್ಥ್ಯದ ಟ್ರಾನ್ಸ್‌ಫಾರ್ಮರ್ ಅಳವಡಿಸಬೇಕು ಎಂದು ಆರು ತಿಂಗಳಿಂದ ಮನವಿ ಸಲ್ಲಿಸುತ್ತಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಸಂಸದ ಸಾಗರ್ ಖಂಡ್ರೆ ಅವರ ಮೂಲಕ ಮನವಿ ಮಾಡಿದರೂ ಅಧಿಕಾರಿಗಳು ನಿರ್ಲಕ್ಷ್ಯ ತೋರಿದ್ದಾರೆ. ಆದಷ್ಟು ಬೇಗ ಹೆಚ್ಚಿನ ವೋಲ್ಟೇಜ್ ಇರುವ ಟ್ರಾನ್ಸ್‌ಫಾರ್ಮರ್ ಅಳವಡಿಸಿ ಶೀಘ್ರವೇ ಸಮಸ್ಯೆ ಪರಿಹರಿಸಬೇಕು.

<ಇಂದ್ರಜಿತ್ ವಾಡಿಕರ್, ಗ್ರಾಮಸ್ಥ

ಕಡಿಮೆ ವೋಲ್ಟೇಜ್‌ನಿಂದ ತಿಂಗಳಿಗೆ ಮೂರು ಬಾರಿ ಮೋಟಾರ್ ಸುಟ್ಟಿದೆ. ಹೆಚ್ಚಿನ ಸಾಮರ್ಥ್ಯದ ಟ್ರಾನ್ಸ್‌ಫಾರ್ಮರ್ ಅಳವಡಿಸಿದರೆ ನೀರಿನ ಸಮಸ್ಯೆ ಪರಿಹಾರವಾಗುತ್ತದೆ. ಜೆಸ್ಕಾಂ ನ ಎಇಇ ಅವರಿಗೆ ಹೆಚ್ಚಿನ ವೋಲ್ಟೇಜ್ ಇರುವ ಟ್ರಾನ್ಸ್ಫಾರ್ಮರ್ ಅಳವಡಿಸಬೇಕು ಎಂದು ಮನವಿ ಸಲ್ಲಿಸಿದರು ಕೂಡ ಸಮಸ್ಯೆ ಬಗೆಹರಿದಿಲ್ಲ. ಹೆಚ್ಚಿನ ವೋಲ್ಟೇಜ್ ಇರುವ ಟ್ರಾನ್ಸ್‌ಫಾರ್ಮರ್ ಇದ್ದರೆ ಅಲ್ಲಿ ನೀರಿನ ಸಮಸ್ಯೆ ಉಂಟಾಗುವುದಿಲ್ಲ. ಸದ್ಯಕ್ಕೆ ತಾತ್ಕಾಲಿಕವಾಗಿ ಸರ್ವಿಸ್ ವೈರ್ ನಿಂದ ಬೇರೆ ಟ್ರಾನ್ಸ್ಫಾರ್ಮರ್ ನಿಂದ ವಿದ್ಯುತ್ ಸಂಪರ್ಕ ಪಡೆದುಕೊಂಡು ನೀರಿನ ವ್ಯವಸ್ಥೆ ಮಾಡಲಾಗುವುದು.

<ಗೀತಾ, ಪಂಚಾಯತ್ ಅಭಿವೃದ್ಧಿ ಅಧಿಕಾರಿ

ಹುಪಳಾ ಗ್ರಾಮದಲ್ಲಿ 63 ಕೆವಿಎ ಸಾಮರ್ಥ್ಯದ ಹೊಸ ಟ್ರಾನ್ಸ್‌ಫಾರ್ಮರ್ ಅಳವಡಿಸಲು ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದೆ. 8ರಿಂದ 10 ದಿನಗಳೊಳಗೆ ಟ್ರಾನ್ಸ್‌ಫಾರ್ಮರ್ ಅಳವಡಿಸಲಾಗುವುದು. ಬಳಿಕ ಸಮಸ್ಯೆ ನಿವಾರಣೆಯಾಗಲಿದೆ.

<ಮೋತಿಲಾಲ್, ಜೆಸ್ಕಾಂ ಜೆಇ, ಹಲಬರ್ಗಾ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಚಿತ್ರಸೇನ ವ್ಹಿ ಫುಲೆ

contributor

Similar News