×
Ad

ಜನರಿಗೆ ಹತ್ತಿರವಾಗಲು ಸಾಮಾಜಿಕ ಜಾಲತಾಣ ಮೊರೆ ಹೋದ ಖಾಕಿ

Update: 2026-06-02 14:44 IST

ಹರಪನಹಳ್ಳಿ: ಸಾರ್ವಜನಿಕರಲ್ಲಿ ಸಂಚಾರ ನಿಯಮ, ಸೈಬರ್ ಅಪರಾಧ, ಸುಳ್ಳು ಸುದ್ದಿ, ಪ್ರಚೋದನಕಾರಿ ಪೋಸ್ಟ್ ಬಗ್ಗೆ ಜಾಗೃತಿ ಮೂಡಿಸಲು ಹರಪನಹಳ್ಳಿ ಪೊಲೀಸರು ಸಾಮಾಜಿಕ ಜಾಲತಾಣ ಬಳಕೆಗೆ ಮೊರೆ ಹೋಗಿದ್ದಾರೆ.

ವಿಜಯನಗರ ಜಿಲ್ಲೆ ಎಸ್ಪಿ ಎಸ್. ಜಾಹ್ನವಿ ನಿರ್ದೇಶನದಂತೆ ಹರಪನಹಳ್ಳಿ ಉಪ ವಿಭಾಗದ ಡಿವೈಎಸ್ಪಿ ಸಂತೋಷ ಚೌವ್ಹಣ್ ನೇತೃತ್ವದಲ್ಲಿ ಅಧಿಕಾರಿಗಳು ಮತ್ತು ಸಿಬ್ಬಂದಿಯ ತಂಡ ಜನರಲ್ಲಿ ಅರಿವು ಮೂಡಿಸುವ ಕೆಲಸದ ಜತೆಗೆ ತಾವು ಮಾಡಿದ ಪ್ರತಿಯೊಂದು ಕಾರ್ಯ ಜನರಿಗೆ ತಿಳಿಯಬೇಕು ಎಂಬ ಉದ್ದೇಶದಿಂದ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿದ್ದಾರೆ.

ಹರಪನಹಳ್ಳಿ ಡಿಎಸ್ಪಿ ಪೊಲೀಸ್ ಇಲಾಖೆಯ ಹೆಸರಿನಲ್ಲಿ ತೆರೆಯಲಾಗಿರುವ ಫೇಸ್ಬುಕ್ ಪೇಜಿಗೆ ಸಾಕಷ್ಟು ಮಂದಿ ಫಾಲೋವರ್ಸ್‌ಗಳಿದ್ದು ಇನ್‌ಸ್ಟಾಗ್ರಾಮ್ ಖಾತೆಯಲ್ಲೂ ಹೆಚ್ಚು ಆಕ್ಟಿವ್ ಆಗಿದ್ದು, ಸೋಶಿಯಲ್ ಮೀಡಿಯಾ ವೇದಿಕೆಯನ್ನು ಹರಪನಹಳ್ಳಿ ಪೊಲೀಸರು ಸದ್ಬಳಕೆ ಮಾಡಿಕೊಳ್ಳುತ್ತಿದ್ದಾರೆ.

ತಾಲೂಕಿನ ಪ್ರತಿ ಪೊಲೀಸ್ ಠಾಣೆಯಲ್ಲಿ ಒಬ್ಬ ಪೊಲೀಸರು ಸಾಮಾಜಿಕ ಜಾಲತಾಣಗಳ ಮೇಲೆ ನಿಗಾ ಇಡುತ್ತಿದ್ದಾರೆ. ಶಾಂತಿಗೆ ಭಂಗ ತರುವ ಸಂದೇಶಗಳನ್ನು ಪತ್ತೆ ಮಾಡಿ ಠಾಣಾಧಿಕಾರಿಯ ಗಮನಕ್ಕೆ ತರುತ್ತಿದ್ದಾರೆ.

ಈ ಮೊದಲು ಒಂದಷ್ಟು ಪ್ರಕರಣಗಳ ಫೋಟೊ ಮತ್ತು ಆರೋಪಿಗಳನ್ನು ಬಂಧಿಸಿದ ಫೋಟೊವನ್ನು ಸಾಮಾಜಿಕಜಾಣದಲ್ಲಿ ಪೋಸ್ಟ್ ಮಾಡುತ್ತಿದ್ದ ಇಲ್ಲಿನ ಪೊಲೀಸ್ ಇಲಾಖೆಯು ಈಗ ನಾನಾ ಬಗೆಯ ಅಪರಾಧ ಕೃತ್ಯಗಳೊಂದಿಗೆ ಸೈಬರ್ ಅಪರಾಧ, ಸಂಚಾರ ನಿಯಮ ಉಲ್ಲಂಘನೆ, ಹೊಸ ಬಗೆಯ ಅಪರಾಧ ಕೃತ್ಯಗಳ ಬಗ್ಗೆ ಎಐ ತಂತ್ರಜ್ಞಾನ ಬಳಸಿಕೊಂಡು ವಿಭಿನ್ನವಾಗಿ ವಿಡಿಯೋಗಳನ್ನು ಸಿದ್ಧಪಡಿಸಿ ಅಪ್ಲೋಡ್ ಮಾಡುತ್ತಿದೆ.

ಪೊಲೀಸ್ ಇಲಾಖೆಯ ಸಾಮಾಜಿಕ ಜಾಲತಾಣಗಳಲ್ಲಿ ಪೊಲೀಸ್ ಕಾರ್ಯದ ಎಲ್ಲ ಮಾಹಿತಿ ಇರಲಿದ್ದು,ಪೊಲೀಸ್ ಬೀಟ್ ವ್ಯವಸ್ಥೆ ಮನೆ ಮನೆಗೆ ಪೊಲೀಸ್, ತೆರೆದ ಮನೆ ಕಾರ್ಯಕ್ರಮ, ಇಲಾಖೆಗೆ ಸರಕಾರಿ ಸಂಬಂಧಿಸಿದ ಆದೇಶಗಳು, ಕಾರ್ಯಕ್ರಮಗಳ ಮಾಹಿತಿ ಇರಲಿದೆ.

ಬಾಕ್ಸ್‌| ಕೆಎಸ್ಪಿ ಪೊಲೀಸ್ ಆ್ಯಪ್ ಬಗ್ಗೆ ಇರಲಿ ಮಾಹಿತಿ

ಕೆಎಸ್ಪಿ ಪೊಲೀಸ್ ಆ್ಯಪ್‌ನಲ್ಲಿ ದೂರು ದಾಖಲಿಸಲು ಅವಕಾಶ ನೀಡಲಾಗಿದ್ದು, ಸಾರ್ವಜನಿಕರಿಗೆ ಹತ್ತಿರದ ಪೊಲೀಸ್ ಠಾಣೆಯ ಮಾಹಿತಿ, ಮೊಬೈಲ್ ನಂಬರ್, ಇ-ಮೇಲ್, ಪೊಲೀಸ್ ಅಧಿಕಾರಿಗಳ ಮಾಹಿತಿ ಸೇರಿದಂತೆ ಗೂಗಲ್ ಮ್ಯಾಪ್ ಜಿಪಿಎಸ್ ಮೂಲಕ ಪೊಲೀಸ್ ಠಾಣೆಯ ಮಾರ್ಗವನ್ನು ಪಡೆಯಬಹುದಾಗಿದೆ. ಈಗಾಗಲೇ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ದೂರಿನ ಬಗ್ಗೆ ಎಫ್‌ಐಆರ್ ಪ್ರತಿಯನ್ನು ಡೌನ್ಲೋಡ್ ಮಾಡಿಕೊಳ್ಳುವ ಹಾಗೂ ಕಳ್ಳತವಾದ ವಾಹನಗಳ ಬಗ್ಗೆ, ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಸಂದೇಶ ರವಾನೆ,ವಿವರವನ್ನು ಪಡೆಯುವ ಆಯ್ಕೆ ಆ್ಯಪ್‌ನಲ್ಲಿ ಲಭ್ಯವಿದೆ. ಹಾಗೂ ಪ್ರತಿಯೊಂದು ಪೊಲೀಸ್ ನಿರ್ವಹಣಾ ಕೊಠಡಿಯೂ ಸಹ ಆ್ಯಪ್ ನೊಂದಿಗೆ ಸಂಪರ್ಕ ಹೊಂದಿದ್ದು, ದೂರುಗಳ ಕುರಿತು ಪ್ರತಿಕ್ರಿಯೆ ಈ ಆ್ಯಪ್ ನಲ್ಲಿ ಪಡೆಯಬಹುದು.

ಹರಪನಹಳ್ಳಿ ಪಟ್ಟಣ ಸೇರಿದಂತೆ ಗ್ರಾಮಾಂತರ ಪ್ರದೇಶದಲ್ಲಿಯೂ ಜನರಲ್ಲಿ ಅಪರಾಧ ಕೃತ್ಯ ಮತ್ತು ಸಂಚಾರ ನಿಯಮ, ಪೋಕ್ಸೊ, ಬಗ್ಗೆ ಜಾಗೃತಿ ಮೂಡಿಸಲು ಸಾಮಾಜಿಕ ಜಾಲತಾಣ ಬಳಕೆ ಮಾಡಿಕೊಳ್ಳಲಾಗುತ್ತಿದೆ. ಸಾಮಾಜಿಕ ಜಾಲತಾಣ ಸದ್ಬಳಕೆ ಮಾಡಿ ಸಾರ್ವಜನಿಕರಿಗೆ ಕಾನೂನಿನ ಅರಿವು ಮೂಡಿಸುತ್ತಿದ್ದೇವೆ.

<ಸಂತೋಷ್ ಚೌವ್ಹಾಣ್-

ಡಿವೈಎಸ್ಪಿ ಹರಪನಹಳ್ಳಿ ಉಪ ವಿಭಾಗ

ಜನರೊಂದಿಗೆ ಸಮನ್ವಯ ಸಾಧಿಸಲು ಉತ್ತಮ ಕಾರ್ಯಕ್ರಮವಾಗಿದೆ. ಸಾರ್ವಜನಿಕರಲ್ಲಿ ಪೊಲೀಸರ ಬಗ್ಗೆ ಇರುವ ಅಭಿಪ್ರಾಯವನ್ನು ಉತ್ತಮಗೊಳಿಸಲು ಈ ವೇದಿಕೆ ಅನುಕೂಲವಾಗಿದ್ದು, ಪೋಲೀಸರ ಈ ಕಾರ್ಯ ನಿಜಕ್ಕೂ ಶ್ಲಾಘನೀಯ.

<ಹೇಮಣ್ಣ ಮೋರಗೇರಿ-ಹರಪನಹಳ್ಳಿ ನಿವಾಸಿ

ಸಾಮಾಜಿಕಜಾಲತಾಣಗಳು ಹೆಚ್ಚಾಗಿ ಬಳಕೆಯಾಗುವುದರಿಂದ ಸಾರ್ವಜನಿಕರಲ್ಲಿ ಸಂಚಾರ ನಿಯಮ, ಅಪರಾಧ ಕೃತ್ಯ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದೇವೆ.ಈ ಮೂಲಕ ಇನ್ನೂ ಜನರೊಂದಿಗೆ ಹತ್ತಿರವಾಗಿದ್ದೇವೆ.

<ಮಹಾಂತೇಶ್ ಸಜ್ಜನ್, ಸಿಪಿಐ

ಮಕ್ಕಳಿಗೆ ಪೊಲೀಸರ ಮೇಲಿನ ಭಯ ಹೋಗಲಾಡಿಸಿ, ಮಕ್ಕಳ ಹಕ್ಕುಗಳ ರಕ್ಷಣೆ, ಪಾಲನೆ ಕಾನೂನಿನ ಬಗ್ಗೆ ಅರಿವು ಮೂಡಿಸುವ ಕೆಲಸ ಪೊಲೀಸ್ ಇಲಾಖೆ ಮಾಡಬೇಕು. ಮಕ್ಕಳ ಸ್ನೇಹಿ ಕೊಠಡಿಗಳನ್ನು ನಿರ್ಮಿಸಿ ಪೊಲೀಸರ ಮೇಲಿನ ಭಯ ಮತ್ತು ಪೋಕ್ಸೊ ಕಾನೂನಿನ ಮಹತ್ವದ ಬಗ್ಗೆ ಪಾಠ ಮಾಡಬೇಕು.

<ಬಿ.ರಾಜಶೇಖರ್, ಶಿಕ್ಷಕರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಗುಡಿಹಳ್ಳಿ ಭೋವಿ ಮಂಜುನಾಥ್

contributor

Similar News