ಮೊಘಲರ ಹೆಜ್ಜೆ ಗುರುತು ಹೊತ್ತ ಬೆಂಗಳೂರಿನ ತಾರಾಮಂಡಲ ಮಸೀದಿ
ಬೆಂಗಳೂರು: ರಾಜ್ಯ ರಾಜಧಾನಿ ಆಧುನಿಕ ಬೆಂಗಳೂರಿನ ನಗರ ಜೀವನದ ನಡುವೆ ತನ್ನೊಳಗೆ ಹಲವು ಶತಮಾನಗಳ ಇತಿಹಾಸವನ್ನು ಅಡಗಿಸಿಕೊಂಡಿರುವ ‘ಸಂಗೀನ್ ಜಾಮಾ ಮಸೀದಿ’, ನಗರದ ಮುಸ್ಲಿಮ್ ಪರಂಪರೆಯ ಪ್ರಮುಖ ಐತಿಹಾಸಿಕ ಸ್ಮಾರಕಗಳಲ್ಲಿ ಒಂದಾಗಿದೆ. ಕಬ್ಬನ್ಪೇಟೆಯ ಸಿದ್ದಣ್ಣ ಲೇನ್ ಪ್ರದೇಶದಲ್ಲಿರುವ ಈ ಮಸೀದಿಯು ‘ತಾರಾಮಂಡಲ ಮಸೀದಿ’ ಎಂದೇ ಹೆಚ್ಚು ಜನಪ್ರಿಯವಾಗಿದೆ.
17ನೇ ಶತಮಾನದ ಅಂತ್ಯದಲ್ಲಿ ಮೊಘಲ್ ಸಾಮ್ರಾಜ್ಯ ದಕ್ಷಿಣ ಭಾರತದಲ್ಲಿ ತನ್ನ ಪ್ರಭಾವ ವಿಸ್ತರಿಸುತ್ತಿದ್ದ ಸಂದರ್ಭದಲ್ಲಿ ಬೆಂಗಳೂರಿಗೂ ಮೊಘಲರ ಪ್ರವೇಶವಾ ಯಿತು. ಔರಂಗಜೇಬನ ಸೇನಾನಾಯಕ ಖಾಸೀಂ ಖಾನ್, ಬೆಂಗಳೂರನ್ನು ಮರಾಠ ರಾಜ ವೆಂಕೋಜಿ ಭೋಂಸ್ಲೆ ಅವರಿಂದ ವಶಪಡಿಸಿಕೊಂಡನು. ಬಳಿಕ ಕ್ರಿ.ಶ. 1687ರಲ್ಲಿ ತನ್ನ ಸೈನಿಕರ ಪ್ರಾರ್ಥನೆಗಾಗಿ ಈ ಮಸೀದಿಯನ್ನು ನಿರ್ಮಿಸಿದನು.
‘ಸಂಗೀನ್’ ಎಂಬುದು ಪರ್ಷಿಯನ್ ಮೂಲದ ಪದವಾಗಿದ್ದು, ‘ಕಲ್ಲಿನಿಂದ ನಿರ್ಮಿತ’ ಎಂಬ ಅರ್ಥವನ್ನು ಹೊಂದಿದೆ. ಕಲ್ಲಿನ ನಿರ್ಮಾಣಶೈಲಿಯ ಕಾರಣದಿಂದಲೇ ಈ ಮಸೀದಿಗೆ ಸಂಗೀನ್ ಜಾಮಾ ಮಸೀದಿ ಎಂಬ ಹೆಸರು ಬಂದಿದೆ. ಆ ಕಾಲಘಟ್ಟದಲ್ಲಿ ಬೆಂಗಳೂರು ಕೇವಲ ಒಂದು ಸಣ್ಣ ಕೋಟೆ ನಗರವಾಗಿರದೆ, ದಕ್ಷಿಣ ಭಾರತದ ರಾಜಕೀಯ ಹಾಗೂ ಸೈನಿಕ ಚಟುವಟಿಕೆಗಳ ಪ್ರಮುಖ ಕೇಂದ್ರವಾಗಿ ರೂಪುಗೊಳ್ಳುತ್ತಿತ್ತು.
ಮೊಘಲರ ವಶಕ್ಕೆ ಬಂದ ಬಳಿಕ ಕೆಲವೇ ವರ್ಷಗಳಲ್ಲಿ ಬೆಂಗಳೂರು ಮತ್ತೆ ಮೈಸೂರು ಒಡೆಯರ ಅಧೀನಕ್ಕೆ ಹೋಯಿತು. ವೆಂಕೋಜಿ ಬೆಂಗಳೂರನ್ನು ಮೈಸೂರು ಅರಸ ಚಿಕ್ಕದೇವರಾಜ ಒಡೆಯರ್ ಅವರಿಗೆ 3 ಲಕ್ಷ ರೂ.ಗೆ ಮಾರಾಟ ಮಾಡಲು ಬಯಸಿದ್ದರು. ಆದರೆ, ಆ ವ್ಯವಹಾರ ಪೂರ್ಣಗೊಳ್ಳುವ ಖಾಸೀಂ ಖಾನ್ ಬೆಂಗಳೂರನ್ನು ವಶಪಡಿಸಿಕೊಂಡನು. ಬಳಿಕ ಖಾಸೀಂ ಖಾನ್ ಮತ್ತು ಚಿಕ್ಕದೇವರಾಜ ಒಡೆಯರ್ ನಡುವೆ ಒಪ್ಪಂದವಾಗಿ ಬೆಂಗಳೂರು ಮೈಸೂರು ಸಂಸ್ಥಾನದ ಅಧೀನಕ್ಕೆ ಬಂತು.
ಮುಂದಿನ ಅವಧಿಯಲ್ಲಿ ಬೆಂಗಳೂರು ಹೈದರ್ ಅಲಿ ಮತ್ತು ಟಿಪ್ಪು ಸುಲ್ತಾನರ ಕಾಲದಲ್ಲಿ ಮತ್ತಷ್ಟು ವಿಸ್ತಾರಗೊಂಡಿತು. ನಗರದ ಕೋಟೆ, ಮಾರುಕಟ್ಟೆಗಳು, ಕೈಗಾರಿಕಾ ಚಟುವಟಿಕೆಗಳು ಹಾಗೂ ವಿವಿಧ ಧಾರ್ಮಿಕ ಕೇಂದ್ರಗಳ ಬೆಳವಣಿಗೆಯಲ್ಲೂ ಈ ಕಾಲಘಟ್ಟ ಮಹತ್ವದ್ದಾಗಿದೆ.
ತಾರಾಮಂಡಲ ಮಸೀದಿಯೂ ಇದೇ ಐತಿಹಾಸಿಕ ಪರಂಪರೆಯೊಂದಿಗಿನ ಸಂಬಂಧವನ್ನು ಹೊಂದಿದೆ.
ಮಸೀದಿಯ ಸುತ್ತಮುತ್ತಲಿನ ಪ್ರದೇಶವು ಟಿಪ್ಪು ಸುಲ್ತಾನ್ ಅವರ ಕಾಲದಲ್ಲಿ ವಿವಿಧ ಕೈಗಾರಿಕಾ ಹಾಗೂ ಸೈನಿಕ ಚಟುವಟಿಕೆಗಳಿಗೆ ಸಂಬಂಧಿಸಿದ ಪ್ರದೇಶವಾಗಿತ್ತು ಎಂಬ ಉಲ್ಲೇಖಗಳಿವೆ. ಹೀಗಾಗಿ ತಾರಾಮಂಡಲ ಮಸೀದಿ ಕೇವಲ ಧಾರ್ಮಿಕ ಸ್ಥಳವಲ್ಲ; ಬೆಂಗಳೂರಿನ ರಾಜಕೀಯ, ಸಾಮಾಜಿಕ ಹಾಗೂ ನಗರಾಭಿವೃದ್ಧಿಯ ಪರಿವರ್ತನೆಗಳಿಗೆ ಸಾಕ್ಷಿಯಾಗಿರುವ ಐತಿಹಾಸಿಕ ತಾಣವೂ ಹೌದು.
ರಾತ್ರಿ ಆಕಾಶದಲ್ಲಿ ‘ನಕ್ಷತ್ರಗಳ ಮಳೆ’: ಟಿಪ್ಪು ಸುಲ್ತಾನ್ ಸೇನೆಯಲ್ಲಿ ರಾಕೆಟ್ಗಳನ್ನು ಯುದ್ಧಾಸ್ತ್ರವಾಗಿ ಬಳಸುವ ತಂತ್ರಕ್ಕೆ ವಿಶೇಷ ಮಹತ್ವ ನೀಡಲಾಗಿತ್ತು. ಬೆಂಗಳೂರಿನ ತಾರಾಮಂಡಲಪೇಟೆ ಪ್ರದೇಶದಲ್ಲಿ ರಾಕೆಟ್ಗಳನ್ನು ತಯಾರಿಸುವುದು, ಪ್ರಯೋಗಿಸುವುದು ಮತ್ತು ಪರೀಕ್ಷಿಸುವುದು ನಡೆಯುತ್ತಿತ್ತು.
ರಾತ್ರಿ ವೇಳೆ ರಾಕೆಟ್ಗಳನ್ನು ಆಕಾಶಕ್ಕೆ ಹಾರಿಸಿದಾಗ ಅವುಗಳಿಂದ ಹೊರಹೊಮ್ಮುತ್ತಿದ್ದ ಬೆಳಕು ನಕ್ಷತ್ರಗಳ ಸಮೂಹದಂತೆ ಕಾಣುತ್ತಿತ್ತು. ಈ ದೃಶ್ಯದಿಂದಲೇ ‘ತಾರಾಮಂಡಲಪೇಟೆ’ ಎಂಬ ಹೆಸರು ರೂಢಿಗೆ ಬಂದಿತು ಎಂದು ಹೇಳಲಾಗುತ್ತದೆ.