ಉಡುಪಿ: ವಯಸ್ಸು ಚಿಕ್ಕದಾದರೂ ಸಾಧನೆ ಮಾತ್ರ ಹಿರಿದು. ಭರತನಾಟ್ಯದಿಂದ ಶಾಸ್ತ್ರೀಯ ಸಂಗೀತದವರೆಗೆ, ಯಕ್ಷಗಾನದಿಂದ ಚಲನಚಿತ್ರ ಅಭಿನಯ ದವರೆಗೆ ವಿವಿಧ ಕಲಾಪ್ರಕಾರಗಳಲ್ಲಿ ತನ್ನ ಪ್ರತಿಭೆ ಅನಾವರಣಗೊಳಿಸುತ್ತಿರುವ ಕುಂದಾಪುರ ತಾಲೂಕಿನ ಹಕ್ಲಾಡಿ ಗ್ರಾಮದ ಬಾಲ ಪ್ರತಿಭೆ ಸಮೀಕ್ಷಾ ಸುರೇಶ ಹಕ್ಲಾಡಿ, ಕಲೆ ಮತ್ತು ಸಾಂಸ್ಕೃತಿಕ ಕ್ಷೇತ್ರದಲ್ಲಿ ಮಾಡುತ್ತಿರುವ ಸಾಧನೆ ಗಮನಾರ್ಹವಾಗಿದೆ.

ಕಲೆಯಲ್ಲಿ ನೈಪುಣ್ಯತೆ: ಪ್ರತಿಭಾನ್ವಿತೆಯಾಗಿರುವ ಸಮೀಕ್ಷಾ, ಬಾಲ್ಯದಿಂದಲೇ ಕಲೆಯತ್ತ ಆಸಕ್ತಿ ಬೆಳೆಸಿಕೊಂಡಿದ್ದಳು. ಈಕೆಯ ಪ್ರತಿಭೆಗೆ ಪೋಷಕರು ಬಹಳಷ್ಟು ಪ್ರೋತ್ಸಾಹ ನೀಡುತ್ತಾ ಬರುತ್ತಿದ್ದಾರೆ. ಇದು ಆಕೆಯ ಕಲೆಯ ಮೇಲಿನ ಆಸಕ್ತಿಗೆ ಮತ್ತಷ್ಟು ಪುಷ್ಟಿ ನೀಡಿದಂತಾಗಿತ್ತು.

ಕುಂದಾಪುರ ತಾಂಡವಂ ಸ್ಟುಡಿಯೋದಲ್ಲಿ ಭರತನಾಟ್ಯ ಜೂನಿಯರ್ ವಿಭಾಗದಲ್ಲಿ ಡಿಸ್ಟಿಂಕ್ಷನ್ ಪಡೆದಿರುವ ಸಮೀಕ್ಷಾ, ಸೀನಿಯರ್ ವಿಭಾಗದಲ್ಲಿ ವಿದುಷಿ ಭಾಗೀರಥಿ ಎಂ. ರಾವ್ ಅವರಲ್ಲಿ ಕಲಿಯುತ್ತಿದ್ದಾರೆ. ಹಾಗೆಯೇ ಫಿಲ್ಮಿ ಡಾನ್ಸ್ ಜೂನಿಯರ್ ವಿಭಾಗವನ್ನು ಮುಗಿಸಿದ್ದು, ಕರ್ನಾಟಕ ಶಾಸ್ತ್ರೀಯ ಸಂಗೀತವನ್ನು ವಿದುಷಿ ನಳಿನಿ ವಿ.ರಾವ್ ಅವರಲ್ಲಿ ಕಲಿಯುತ್ತಿದ್ದಾಳೆ.

ಅಲ್ಲದೇ ಹೊಂಬಾಳೆ ಫಿಲ್ಮ್ಸ್ ನಿರ್ಮಾಣದ ರಿಷಭ್ ಶೆಟ್ಟಿ ನಿರ್ದೇಶನದಲ್ಲಿ ಮೂಡಿಬಂದ ಕಾಂತಾರ ಚಾಪ್ಟರ್-1 ಫ್ಯಾನ್ ಇಂಡಿಯಾ ಸಿನೆಮಾದಲ್ಲಿ ಮುಖ್ಯ ಪಾತ್ರವಾದ ಬಾಲ ಬೈದಿಯಾಗಿ ನಟಿಸಿದ್ದಲ್ಲದೆ ಯಕ್ಷಗಾನದಲ್ಲೂ ಬಣ್ಣ ಹಚ್ಚಿದ್ದಾರೆ. ಇತ್ತೀಚೆಗಷ್ಟೇ ಸಮೀಕ್ಷಾ, ವಿದುಷಿ ಭಾಗೀರಥಿ ಎಂ. ರಾವ್ ಮತ್ತು ವಿದುಷಿ ರಾಧಿಕಾ ಎಸ್. ಕಾರಂತ ಅವರ ನೃತ್ಯ ಸಂಯೋಜನೆಯಲ್ಲಿ ಭರತನಾಟ್ಯ ರಂಗಪ್ರವೇಶ ಮಾಡಿದ್ದಾರೆ.

ಪ್ರಶಸ್ತಿ, ಸನ್ಮಾನಗಳ ಗರಿ: ಸಮೀಕ್ಷಾಳ ಬಾಲ ಪ್ರತಿಭೆಯನ್ನು ಗುರುತಿಸಿ ಕೋಟ ಶಿವರಾಮ ಕಾರಂತ ಜಿಲ್ಲಾ ಬಾಲ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿ ಹಾಗೂ ಗೌರವಗಳು ಲಭಿಸಿವೆ.

ಕರ್ನಾಟಕ ದಸಂಸ ಅಂಬೇಡ್ಕರ್ ವಾದ ಜಿಲ್ಲಾ ವೇದಿಕೆಯಲ್ಲಿ ಸನ್ಮಾನ, ಉಡುಪಿ ಕೃಷ್ಣ ಮಠದ ರಾಜಾಂಗಣದಲ್ಲಿ ಶ್ರೀಸುಗುಣೇಂದ್ರ ತೀರ್ಥ ಸ್ವಾಮೀಜಿಯವರ ಸಮ್ಮುಖದಲ್ಲಿ ಜಿಲ್ಲಾ ಎಸ್‌ಡಿಎಂಸಿ ಸಮನ್ವಯ ವೇದಿಕೆಯಿಂದ ಸನ್ಮಾನ, ಇಂಟರ್‌ನ್ಯಾಶನಲ್ ಲಯನ್ಸ್ ಕ್ಲಬ್ ಹಕ್ಲಾಡಿ ಚೆನ್ನಕೇಶವ ಜಿಲ್ಲಾ ವೇದಿಕೆಯಲ್ಲಿ ಸನ್ಮಾನ, ಹೆಸ್ಕುತ್ತೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಮಕ್ಕಳ ಹಬ್ಬದ ಸಿಂಗಾರ ಕಾರ್ಯಕ್ರಮದಲ್ಲಿ ಮಾಜಿ ಸಂಸದ ಕೆ.ಜಯಪ್ರಕಾಶ ಹೆಗ್ಡೆಯವರಿಂದ ಸನ್ಮಾನ, ಹಾಗೂ ಹಲವಾರು ಸಂಘ ಸಂಸ್ಥೆಗಳು ಇವಳ ಪ್ರತಿಭೆಯನ್ನು ಗುರುತಿಸಿ ಸನ್ಮಾನಿಸಿದ್ದಾರೆ.

ಹಕ್ಲಾಡಿಯ ಗೀತಾ-ಸುರೇಶ್ ದಂಪತಿಯ ಪುತ್ರಿಯಾಗಿರುವ ಸಮೀಕ್ಷಾ, ವಕೀಲರಾದ ಮಂಜುನಾಥ ಗಿಳಿಯಾರು, ಉಡುಪಿ ಡಯಟ್ ಸಂಸ್ಥೆಯ ಉಪನ್ಯಾಸಕ ಡಾ.ಕಿಶೋರ್ ಕುಮಾರ್ ಶೆಟ್ಟಿ ಮಾರ್ಗದರ್ಶನದಲ್ಲಿ ಶಿಕ್ಷಣದ ಜೊತೆಗೆ ಕಲಾ ಸೇವೆಯಲ್ಲಿ ಸಾಧನೆ ಮಾಡುತ್ತಿದ್ದಾಳೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಯೋಗೀಶ್ ಕುಂಭಾಸಿ

contributor