ಮದ್ಯ ಸೇವಿಸಿ ಶಾಲೆಗೆ ಬರುವ ಶಿಕ್ಷಕ

ವಿದ್ಯಾರ್ಥಿಗಳ ಮೇಲೆ ಹಲ್ಲೆ ಅವಾಚ್ಯ ಶಬ್ದ ; ಆರೋಪ

Update: 2026-08-08 15:00 IST

ಬಸವಕಲ್ಯಾಣ : ತಾಲೂಕಿನ ಮಂಠಾಳ ಗ್ರಾಮದ ಕರ್ನಾಟಕ ಪಬ್ಲಿಕ್ ಪ್ರೌಢಶಾಲಾ ವಿಭಾಗದ ಗಣಿತ ಮತ್ತು ಭೌತಶಾಸ್ತ್ರ ಶಿಕ್ಷಕರೊಬ್ಬರು ಮದ್ಯ ಸೇವಿಸಿ ವಿದ್ಯಾರ್ಥಿಗಳಿಗೆ ಪಾಠ ಮಾಡುತ್ತಾರೆ ಎಂದು ವಿದ್ಯಾರ್ಥಿಗಳು ಆರೋಪಿಸಿದ್ದಾರೆ.

ವಿದ್ಯಾರ್ಥಿಗಳ ಬಾಳಿಗೆ ಬೆಳಕಾಗಬೇಕಿದ್ದ ಗಣಿತ ಶಿಕ್ಷಕ ಮದ್ಯ ಸೇವಿಸಿ ಶಾಲೆಯಲ್ಲಿ ಪಾಠ ಮಾಡುವುದಲ್ಲದೆ, ವಿದ್ಯಾರ್ಥಿಗಳ ಮೇಲೂ ಹಲ್ಲೆ ಮಾಡುತ್ತಾರೆ. ನಾವು ಒಂಬತ್ತನೆ ತರಗತಿಯಲ್ಲಿ ಇರುವಾಗಲೂ ಅವರು ಇದೇ ರೀತಿ ವರ್ತಿಸಿದ್ದರು. ಇದರಿಂದಾಗಿ ನಮಗೆ ತುಂಬಾ ತೊಂದರೆಯಾಗುತ್ತಿದೆ ಎಂದು ಶಾಲೆಯ 10ನೇ ತರಗತಿ ವಿದ್ಯಾರ್ಥಿಗಳು ಆರೋಪಿಸಿದ್ದಾರೆ.

ಗಣಿತ ಹಾಗೂ ಭೌತಶಾಸ್ತ್ರ ಶಿಕ್ಷಕ ನಮಗೆ ಸರಿಯಾಗಿ ಪಾಠ ಮಾಡುತ್ತಿಲ್ಲ. ಅವರು ಮಾತನಾಡುವುದೇ ನಮಗೆ ಅರ್ಥವಾಗುತ್ತಿಲ್ಲ. ಪ್ರಶ್ನಿಸಿದರೆ ನಮಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ, ನಮ್ಮ ಮೇಲೆ ಹಲ್ಲೆ ಮಾಡುತ್ತಿದ್ದಾರೆ ಎಂದು ವಿದ್ಯಾರ್ಥಿಗಳೇ ಖುದ್ದು ತಮ್ಮ ಅಳಲನ್ನು ತೋಡಿಕೊಂಡಿದ್ದು, ಮದ್ಯ ಸೇವಿಸಿ ಬಂದು ಪಾಠ ಮಾಡುವ ಶಿಕ್ಷಕ ನಮಗೆ ಬೇಕಾಗಿಲ್ಲ. ನಮ್ಮ ವಿದ್ಯಾಭ್ಯಾಸಕ್ಕೆ ಸಮಸ್ಯೆಯಾಗುತ್ತಿದೆ. ನಮ್ಮ ಶಾಲೆಗೆ ಒಳ್ಳೆಯ ಶಿಕ್ಷಕರನ್ನು ನೇಮಕ ಮಾಡಿ ಎಂದು ಅವರು ಮನವಿ ಮಾಡಿದ್ದಾರೆ.

ಇವರ ಬಗ್ಗೆ ಮುಖ್ಯೋಪಾಧ್ಯಾಯರಿಗೆ ಹೇಳಿದರೂ ಕೂಡ ಯಾವುದೇ ರೀತಿಯಲ್ಲಿ ಸಮಸ್ಯೆ ಬಗೆಹರಿಯುತ್ತಿಲ್ಲ. ಮುಖ್ಯೋಪಾಧ್ಯಾಯರು ಕೂಡ ಬಿಇಒ ಕಚೇರಿ ಅಥವಾ ಪಂಚಾಯತಿಗೆ ಹೋಗಿ ಎಂದು ಹೇಳುತ್ತಿದ್ದಾರೆ. ಈ ಶಿಕ್ಷಕನ ನಡುವಳಿಕೆಯಿಂದ ಗಣಿತ ವಿಷಯವನ್ನು ನಮಗೆ ತಿಳಿದುಕೊಳ್ಳಲು ಸಾದ್ಯವಾಗುತ್ತಿಲ್ಲ ಎಂದು ಹೇಳಿದರೆ ಯೂಟ್ಯೂಬ್‌ನಲ್ಲಿ ನೋಡಿ ಎಂದು ಹೇಳುತ್ತಿದ್ದಾರೆ ಎಂದು ವಿದ್ಯಾರ್ಥಿಗಳು ತಿಳಿಸಿದರು.

ಅಧಿಕಾರಿಗಳು ಶಾಲೆಗೆ ಬಂದರೆ ಶಾಲೆಯ ಕುರಿತು ದೂರನ್ನೂ ಹೇಳಬಾರದು ಎಂದು ಮುಖ್ಯೋಪಾಧ್ಯಾಯರೇ ತಿಳಿಸುತ್ತಾರೆ. ಇದರಿಂದ ದಿಕ್ಕು ತೋಚದಂತಾಗಿದೆ ಎಂದು ವಿದ್ಯಾರ್ಥಿಗಳು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ. ಈ ಶಿಕ್ಷಕನ ಕಾಟಚಾರ ತಾಳಲಾರದೆ ವಿದ್ಯಾರ್ಥಿಗಳು ಇತ್ತಿಚಿಗೆ ಮಂಠಾಳ್ ಗ್ರಾಪಂ ಎದುರು ಕುಳಿತು ಪ್ರತಿಭಟನೆ ಕೂಡ ಮಾಡಿದ್ದರು. ಆದರೆ, ಯಾವುದೇ ರೀತಿಯ ಬದಲಾವಣೆಯಾಗಲಿಲ್ಲ.

ದುಷ್ಚಟದಿಂದ ದೂರವಿದ್ದು, ಆರೋಗ್ಯ ಕಾಪಾಡಿಕೊಳ್ಳಿ ಎಂದು ನೀತಿ ಪಾಠ ಹೇಳುವ ಶಿಕ್ಷಕನೇ ಇಂದು ಮದ್ಯ ಸೇವಿಸಿ ಶಾಲೆಗೆ ಬಂದು ವಿದ್ಯಾರ್ಥಿಗಳಿಗೆ ತೊಂದರೆ ನೀಡುತ್ತಿರುವುದು ವಿಷಾದದ ಸಂಗತಿ. ಇದರಿಂದ ವಿದ್ಯಾರ್ಥಿಗಳ ವಿದ್ಯಾಭ್ಯಾಸದ ಮೇಲೆ ಪರಿಣಾಮ ಬೀರುತ್ತಿದೆ. ಹಾಗೆಯೇ ವಿದ್ಯಾರ್ಥಿಗಳು ಕೂಡ ಈ ಶಿಕ್ಷಕನಿಂದ ಪ್ರೇರೇಪಿತರಾಗಿ ದುಷ್ಚಟಗಳಿಗೆ ಬಲಿಯಾಗುವ ಸಂಭವ ಕೂಡ ಇರುತ್ತದೆ. ಆದ್ದರಿಂದ ಸಂಬಂಧಪಟ್ಟ ಅಧಿಕಾರಿಗಳು ಇದಕ್ಕೆ ಕ್ರಮ ಕೈಗೊಂಡು, ಸಮಸ್ಯೆಯನ್ನು ಆದಷ್ಟು ಬೇಗ ಬಗೆಹರಿಸುವ ಕೆಲಸ ಮಾಡಬೇಕಿದೆ ಎಂದು ವಿದ್ಯಾರ್ಥಿಗಳು ಆಗ್ರಹಿಸಿದ್ದಾರೆ.

ಶಾಲೆಯಿಂದ ಈ ಕುರಿತು ಮಾಹಿತಿ ಪಡೆದು ಈಗಾಗಲೇ ಡಿಡಿಪಿಐ ಅವರಿಗೆ ಲಿಖಿತ ರೂಪದಲ್ಲಿ ಮಾಹಿತಿ ನೀಡಲಾಗಿದೆ.

-ಪ್ರಭಾಕರ್ ಕಳಮಸೆ

ಪ್ರಭಾರಿ ಕ್ಷೇತ್ರ ಶಿಕ್ಷಣಾಧಿಕಾರಿ, ಬಸವಕಲ್ಯಾಣ

ಮಂಠಾಳ್ ಗ್ರಾಮದ ಶಾಲೆಯಲ್ಲಿನ ಗಣಿತ ಶಿಕ್ಷಕ ಮದ್ಯ ಸೇವಿಸಿ ಬರುವುದಲ್ಲದೇ, ವಿದ್ಯಾರ್ಥಿಗಳಿಗೆ ಹೊಡೆಯುವ ಕೆಲಸ ಮಾಡುತ್ತಿದ್ದಾರೆ. ಮಕ್ಕಳಿಗೆ ಪಾಠ ಕೂಡ ಹೇಳುತ್ತಿಲ್ಲ. ಇದರಿಂದ ವಿದ್ಯಾರ್ಥಿಗಳಿಗೆ ತುಂಬಾ ತೊಂದರೆಯಾಗುತ್ತಿದೆ. ಈ ಶಿಕ್ಷಕನನ್ನು ಕೂಡಲೇ ಅಮಾನತು ಮಾಡಬೇಕು.

-ಆಸಿಫ್, ಗ್ರಾಪಂ ಮಾಜಿ ಸದಸ್ಯ, ಮಂಠಾಳ್

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವೀರಶೆಟ್ಟಿ ಎರಂಡಗೆ

contributor

Similar News