×
Ad

ದಲಿತರ ಮೇಲಿನ ದೌರ್ಜನ್ಯಗಳ ಕರಾಳತೆ

Update: 2026-01-27 11:45 IST

ಇತ್ತೀಚೆಗೆ ಹುಬ್ಬಳ್ಳಿಯ ಇನಾಂ ವೀರಾಪುರದಲ್ಲಿ ದಲಿತ ಸಮಾಜದ ಯುವಕನನ್ನು ವಿವಾಹವಾದ ಪರಿಣಾಮವಾಗಿ ತುಂಬು ಗರ್ಭಿಣಿಯನ್ನು ಅಮಾನುಷವಾಗಿ ಕೊಚ್ಚಿ ಕೊಂದದ್ದು ನೆನಪಿಂದ ಮಾಸುವ ಮುನ್ನವೇ ರಾಜ್ಯದಲ್ಲಿ ಪ್ರತಿದಿನ ಕನಿಷ್ಠ ಆರು ಪರಿಶಿಷ್ಟ ಜಾತಿ ಮತ್ತು ಪಂಗಡದವರ ಮೇಲೆ ದೌರ್ಜನ್ಯಗಳು ನಡೆಯುತ್ತಿರುವ ವಿಚಾರ ಈಗ ಮುನ್ನೆಲೆಗೆ ಬಂದಿದೆ.

ರಾಜ್ಯ ಪೊಲೀಸ್ ಅಪರಾಧ ದತ್ತಾಂಶ ಘಟಕದಿಂದ ದಾಖಲಾದ ಅಂಕಿ ಅಂಶಗಳನ್ನು ಗಮನಿಸಿದರೆ, ಕಳೆದ ಮೂರು ವರ್ಷಗಳಲ್ಲಿ 2023ರಲ್ಲಿ 2,157, 2024ರಲ್ಲಿ 2,115, 2025ರಲ್ಲಿ 2,412 ಪ್ರಕರಣಗಳು ದಾಖಲಾಗಿವೆ. ಜಾತಿನಿಂದನೆ, ಹತ್ಯೆ, ಕೊಲೆ, ಸುಲಿಗೆ, ಅತ್ಯಾಚಾರ, ಅಪಹರಣದಂತಹ ಪ್ರಕರಣಗಳು ಪರಿಶಿಷ್ಟ ಜಾತಿ ಮತ್ತು ಪಂಗಡದವರ ಮೇಲಿನ ಕ್ರೌರ್ಯಗಳ ಏರುಗತಿಯು ದಲಿತರ ಸಂತ್ರಸ್ತ ಸ್ಥಿತಿಯನ್ನು ತೋರಿಸುತ್ತದೆ. ದತ್ತಾಂಶಗಳು ಶೋಷಿತರನ್ನೇ ಬೆಚ್ಚಿ ಬೀಳಿಸುತ್ತದೆ ವಿನಃ ಶೋಷಕರನ್ನಲ್ಲ! ಅಷ್ಟೊಂದು ನಿರ್ಭೀತಿ ಮತ್ತು ನಿರ್ಭಯಗಳನ್ನು ಬೆಳೆಸಿಕೊಂಡಂತೆ ಪ್ರಕರಣಗಳ ಏರಿಕೆಯ ನಾಗಲೋಟ ಕಾಣಿಸುತ್ತಿದೆ.

ಹಿರಿಯ ಪೊಲೀಸ್ ಅಧಿಕಾರಿಗಳೊಂದಿಗೆ ಮುಖ್ಯಮಂತ್ರಿ ಮತ್ತು ಗೃಹ ಸಚಿವರು ಕಟ್ಟುನಿಟ್ಟಿನ ಕ್ರಮಕ್ಕೆ ಸೂಚಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯಕ್ಕೆ ಪ್ರತ್ಯೇಕ ಪೊಲೀಸ್ ಠಾಣೆ ಅಧಿಕಾರ ಕೊಟ್ಟು, ದಲಿತರ ಮೇಲಿನ ದೌರ್ಜನ್ಯಗಳನ್ನಾಧರಿಸಿ ಕ್ರಿಮಿನಲ್ ಕೇಸುಗಳನ್ನು ದಾಖಲಿಸುವ ಪವರ್ ಇದ್ದರೂ ಉದ್ದೇಶಿತ ಮಟ್ಟವನ್ನು ನಿರೀಕ್ಷಿತವಾಗಿ ತಲುಪಲು ಸಾಧ್ಯವಾಗಿಲ್ಲ ಎನ್ನುವುದನ್ನು ಅಂಕಿ ಅಂಶಗಳು ವಿಶ್ಲೇಷಣೆ ಮಾಡುತ್ತವೆ. ಕಳೆದ ಮೂರು ವರ್ಷಗಳಲ್ಲಿ 18ರಲ್ಲಿ ಮಾತ್ರ ಆರೋಪಿಗಳಿಗೆ ಶಿಕ್ಷೆ ವಿಧಿಸಲಾಗಿದೆ. 467 ಕೇಸುಗಳು ಖುಲಾಸೆಗೊಂಡಿವೆ. ಅಲ್ಲದೆ, 1,152 ಕೇಸುಗಳು ತನಿಖಾ ಹಂತದಲ್ಲಿದ್ದು, ಧೂಳು ಹಿಡಿಯುತ್ತ, ಬಸವನ ಹುಳುವಿನಂತೆ ನಿಧಾನವಾಗಿ ತೆವಳುತ್ತಿವೆ! ಎಸ್‌ಸಿ/ಎಸ್‌ಟಿ ದೌರ್ಜನ್ಯ ತಡೆ ಕಾಯ್ದೆಯ ದುರುಪಯೋಗದ ಆರೋಪವೂ ಕೇಳಿ ಬರುತ್ತಿದೆ. ಇಂತಹ ಬೆಳವಣಿಗೆ ಕಾಯ್ದೆಯಲ್ಲಿರುವ ದೂರದೃಷ್ಟಿಯ ಶಕ್ತಿಗುಂದಿ, ದೃಷ್ಟಿದೋಷಕ್ಕೆ ತುತ್ತಾಗುವ ಅಪಾಯ ಹೆಚ್ಚಿರುತ್ತದೆ. ಈ ಮೂರು ವರ್ಷಗಳಲ್ಲಿ ಒಟ್ಟು 6,684 ಕೇಸುಗಳಲ್ಲಿ 899 ಕೇಸುಗಳನ್ನು ಪೊಲೀಸರು ಸತ್ಯಾಂಶವಿಲ್ಲ ಎಂದು ‘ಷರಾ’ ಬರೆದು ನ್ಯಾಯಾಲಯಕ್ಕೆ ‘ಬಿ’ ರಿಪೋರ್ಟ್ ಸಲ್ಲಿಸಿದ್ದಾರೆ.

ಜಾತಿ ತನ್ನ ಆವಾಸಸ್ಥಾನವನ್ನು ಹಳ್ಳಿಯ ಜೊತೆಗೆ ನಗರದವರೆಗೂ ವ್ಯಾಪಿಸಿಕೊಂಡಿದೆ. ಅಂದರೆ, ಐಟಿಬಿಟಿ ಕ್ಷೇತ್ರದಲ್ಲೂ ಬೀಟ್ ಮಾಡುತ್ತಿದೆ; ಲ್ಯಾಂಡಿಂಗ್ ಆಗಿದೆ! ಆಧುನಿಕ ಜಗತ್ತಿನೊಂದಿಗೆ ಸಂಪರ್ಕ ತೆರೆದುಕೊಂಡಿರುವ ಐಟಿಗಳಲ್ಲೂ ಜಾತಿಯಿಂದ ಬಿಡಿಸಿಕೊಳ್ಳಲು ಸಾಧ್ಯವಾಗದಿರುವ ಮುಖವಾಡಗಳು ಬಯಲಾಗಿವೆ. ವಿಜ್ಞಾನ ಮತ್ತು ತಂತ್ರಜ್ಞಾನ ಮುಂದುವರಿದ ಜಾಗಗಳಲ್ಲೂ ಮಾನವನ ಬದುಕು ಸಹ್ಯವಾಗಿಲ್ಲ. ಅತ್ಯಂತ ಆಘಾತಕಾರಿ ಎಂದರೆ ಟಾಪ್ 5 ಜಿಲ್ಲೆಗಳಲ್ಲಿ ಮಹಾನಗರ ಬೆಂಗಳೂರು (261-ಕೇಸ್‌ಗಳು)ಮೊದಲ ಸ್ಥಾನದಲ್ಲಿದೆ! ನಂತರ ತುಮಕೂರು(139 ಕೇಸ್‌ಗಳು), ಬೆಳಗಾವಿ (128 ಕೇಸುಗಳು), ರಾಯಚೂರು (121 ಕೇಸ್‌ಗಳು) ಮತ್ತು ಹಾಸನ (116 ಕೇಸ್‌ಗಳು) ಹೀಗೆ ನಗರಗಳಲ್ಲಿಯೂ ಕೂಡ ಜಾತಿ ನಾಗರ ಹೆಡೆಗಳು ವಿಷ ಕಾರುತ್ತಿರುವ ಅಂಶಗಳು ವಿಷಮಯಕಾರಿಯಾದ ಪರಿಸ್ಥಿತಿಯನ್ನು ಸೃಷ್ಟಿಸಿವೆ ಎನ್ನುವುದನ್ನು ಪ್ರಕರಣಗಳ ಗ್ರಾಫ್ ಹೇಳುತ್ತಿದೆ. ದಿನದಿಂದ ದಿನಕ್ಕೆ, ವರ್ಷದಿಂದ ವರ್ಷಕ್ಕೆ ಜಾತಿ ತನ್ನ ಮೊನಚನ್ನು ಹೆಚ್ಚು ಮಾಡಿಕೊಳ್ಳುತ್ತ ಮುನ್ನುಗ್ಗುತ್ತಿದೆ ಎನ್ನುವುದಂತೂ ಸುಸ್ಪಷ್ಟ. ಅಸಹನೆಯನ್ನು ದೃಢೀಕರಿಸುವ ಈ ಅಂಕಿ ಸಂಖ್ಯೆಗಳು ನಾಗರಿಕ ಸಮಾಜ ತನ್ನ ನಾಚಿಕೆಯನ್ನು ಕೊಂದುಕೊಳ್ಳಬಾರದು! ಚಂದ್ರಲೋಕ, ಮಂಗಳಲೋಕವನ್ನು ಹಾರಿ ಮುಟ್ಟಿ ತಟ್ಟಿ ಬಂದಿರುವ ನಾವು ಪಕ್ಕದಲ್ಲಿರುವ ಮನುಷ್ಯನನ್ನು ಮುಟ್ಟಲಿಕ್ಕೆ ಆಗದೆ ಇರುವ ಸ್ಥಿತಿ ಎದುರಾಗಬಾರದು.

‘ಮಾನವ ಜಾತಿ ತಾನೊಂದೇ ವಲಂ’ ಎಂದ ಪಂಪನ ಮಾತಿಗೆ ಸಾವಿರ ವರ್ಷಗಳೇ ಉರುಳಿ ಹೋದವು. ‘ನೆಲವೊಂದೆ ಹೊಲೆಗೇರಿ ಶಿವಾಲಯಕ್ಕೆ ಜಲವೊಂದೆ ಶೌಚಾಚಮನಕ್ಕೆ’ ಎಂದ ಬಸವಣ್ಣನವರ ಮಾತಿಗೆ 900 ವರ್ಷಗಳೇ ಗತಿಸಿದವು. ‘ಕುಲ ಕುಲವೆಂದು ಹೊಡೆದಾಡದಿರಿ ನಿಮ್ಮ ಕುಲದ ನೆಲೆಯನೇನಾದರೂ ಬಲ್ಲಿರಾ?’ ಎಂದು ಪ್ರಶ್ನಿಸಿದ ಕನಕದಾಸರ ಮಾತಿಗೆ ಐದು ನೂರು ವರ್ಷಗಳು ಸಂದು ಹೋದವು. ಹೀಗೆ ಬುದ್ಧ, ಬಸವ, ಬಾಬಾ ಸಾಹೇಬ್ ಅಂಬೇಡ್ಕರ್, ಸಂತರು, ಸುಧಾರಕರು, ಚಿಂತಕರು, ಹೋರಾಟಗಾರರು ಜಾತಿ ನಿರ್ಮೂಲನಕ್ಕೆ ಶ್ರಮಿಸಿದ್ದಾರೆ. ಸಂವಿಧಾನ ರಚನೆಗೊಂಡು, ಅನುಷ್ಠಾನಗೊಂಡು, ನಮಗೆ ನಾವೇ ವಿಧಿಸಿಕೊಂಡು 75 ವರ್ಷಗಳಾಯಿತು. ಆದರೂ ಜನರ ಮನದಲ್ಲಿ ಜಾತಿ ಅಧಿನಾಯಕವಾಯಿತೆ!? ಎಂಬ ಪ್ರಶ್ನೆ ಮಾತ್ರ ನಮ್ಮೆಲ್ಲರನ್ನು ಆತಂಕಿತವಾಗಿ ಕಾಡುತ್ತಿದೆ. ಜಾತಿ ಎಂದೂ ನಮ್ಮ ಅಧಿನಾಯಕನಾಗುವುದು ಬೇಡ ಎನ್ನುವುದಾದರೆ ದಲಿತರಿಗೆ ಶೋಷಣೆಯಿಂದ ಬಿಡುಗಡೆ ಬೇಕು. ಎಂದು!? ಮತ್ತೆ ಮತ್ತೆ ಈ ಭೂಮಿಯನ್ನು ಮತ್ತು ನೆಲವನ್ನು ತಟ್ಟಿ ತಟ್ಟಿ ಕೇಳಬೇಕಿದೆ. ದಲಿತರು ಈ ಮಣ್ಣಲ್ಲಿ ಬದುಕಲಿಕ್ಕೆ ಹಕ್ಕಿಲ್ಲವೇ? ಒಂದು ಕ್ಷಣ, ಭೂಮಿಯಷ್ಟು ಸಹನೆಯನ್ನು ನೀಡಿದ ದಲಿತರಿಗೆ ಕಾಲವನ್ನು ಧಿಕ್ಕರಿಸಿಬಿಡಬೇಕು ಎನಿಸುತ್ತದೆ! ಮಾನವೀಯತೆ ಒಂದೇ ಮಾನವನ ವಿಕಾಸದ ಬಾಗಿಲು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಡಾ. ಎಲ್ಲಪ್ಪ ಜಿ. ಬಾಗಲಕೋಟೆ

contributor

Similar News