×
Ad

ಅಭಿವೃದ್ಧಿ ಹೆಸರಲ್ಲಿ ಪರಿಸರ ಮಾರಕ ಯೋಜನೆ : ವಯನಾಡು ದುರಂತ ಮಲೆನಾಡಿಗೆ ಎಚ್ಚರಿಕೆ ಗಂಟೆ

Update: 2026-07-13 09:11 IST

ಶಿವಮೊಗ್ಗ, ಜು.12: ಕೇರಳದ ವಯನಾಡು ಜಿಲ್ಲೆಯ ಕಲ್ಲಾಡಿ(ಮೀನಾಕ್ಷಿ ಸೇತುವೆ)ಯಲ್ಲಿ ಸಂಭವಿಸಿದ ಭೀೀಕರ ಭೂಕುಸಿತ ಪ್ರಕರಣ ಮಲೆನಾಡು-ಕರಾವಳಿ ಜಿಲ್ಲೆಗಳಿಗೆ ಎಚ್ಚರಿಕೆಯ ಗಂಟೆಯಾಗಿದೆ. ಅಭಿವೃದ್ಧಿ ಹೆಸರಿನಲ್ಲಿ ಪಶ್ಚಿಮ ಘಟ್ಟದ ಮೇಲೆ ನಡೆಯುತ್ತಿರುವ ಕಾಮಗಾರಿಗಳಿಂದ ಯಾವ ಸಮಯದಲ್ಲಾದರೂ ಭೂ ಕುಸಿತ ಸಂಭವಿಸುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ.

ಪಶ್ಚಿಮಘಟ್ಟ ವ್ಯಾಪ್ತಿಯಲ್ಲಿ ಕಳೆದೊಂದು ದಶಕದಿಂದ ಸಂಭವಿಸುತ್ತಿರುವ ಭೂಕುಸಿತ ಕರ್ನಾಟಕದ 31,261 ಚ.ಕಿ.ಮೀ. ಪ್ರದೇಶದಲ್ಲಿ ಅಪಾಯದ ಆತಂಕ ಸೃಷ್ಟಿಸಿದೆ. 2006ರಿಂದ ಇದುವರೆಗಿನ ಅಂಕಿ-ಅಂಶ ಗಮನಿಸಿದರೆ, ಮಲೆನಾಡು ಹಾಗೂ ಕರಾವಳಿ ಜಿಲ್ಲೆಗಳಲ್ಲಿ ಬರೋಬ್ಬರಿ 1,495 ಕಡೆ ಭೂಕುಸಿತ ಸಂಭವಿಸಿದೆ. ಇದರಿಂದಾಗಿ ಸುಮಾರು 13,797 ಚ.ಕಿ.ಮೀ. ಪ್ರದೇಶ ಹಾನಿಗೊಳಗಾಗಿದೆ. ಉತ್ತರ ಕನ್ನಡ, ಶಿವಮೊಗ್ಗ, ಚಿಕ್ಕಮಗಳೂರು, ಉಡುಪಿ, ದ.ಕ., ಕೊಡಗು ಮತ್ತು ಹಾಸನ ಜಿಲ್ಲೆಗಳು ಸೂಕ್ಷ್ಮ ಪ್ರದೇಶಗಳಾಗಿವೆ.

ಹೆಚ್ಚುತ್ತಿರುವ ಜನಸಂಖ್ಯೆ, ಆಧುನಿಕ ಜಗತ್ತಿನ ಓಟಕ್ಕೆ ಅಭಿವೃದ್ಧಿ ಅನಿವಾರ್ಯ. ಆದರೆ, ಲಂಗುಲಗಾಮು ಇಲ್ಲದೆ ಅಭಿವೃದ್ಧಿಗೆ ಭೂಮಿಯ ಒಡಲು ಸೀಳಲಾಗುತ್ತಿದೆ. ಪಶ್ಚಿಮ ಘಟ್ಟದಲ್ಲಿ ಗಣಿಗಾರಿಕೆ, ಬೃಹತ್ ಅಣೆಕಟ್ಟುಗಳು, ಸುರಂಗ ಮಾರ್ಗಗಳ ನಿರ್ಮಾಣದಿಂದ ನೈಸರ್ಗಿಕ ವಿಕೋಪಗಳು ನಡೆಯುತ್ತಿವೆ.

2019ರಲ್ಲಿ ಶಿವಮೊಗ್ಗ, ತೀರ್ಥಹಳ್ಳಿ ತಾಲೂಕಿನ ಗಡಿ ಭಾಗದಲ್ಲಿರುವ ಹೆಗಲತ್ತಿ ಗ್ರಾಮದಲ್ಲಿ ಸಂಭವಿಸಿದ ಗುಡ್ಡ ಕುಸಿತ ಪ್ರಕರಣ ಇಡೀ ಮಲೆನಾಡನ್ನೇ ಆತಂಕಕ್ಕೆ ದೂಡಿತ್ತು. ಗುಡ್ಡ ಕುಸಿತ ಪ್ರಕರಣದಿಂದ 25ಕ್ಕೂ ಹೆಚ್ಚು ಕುಟುಂಬಗಳು ಬದುಕು ಕಳೆದುಕೊಂಡು ಬೀದಿಪಾಲಾಗಿದ್ದವು.

2025ರಲ್ಲಿ ಹೊಸನಗರ ಭಾಗದ ಅರಮನೆ ಗ್ರಾಪಂ ವ್ಯಾಪ್ತಿಯ ಕುಂದಗಲ್ ಗ್ರಾಮದಲ್ಲಿ ಸುಮಾರು 200 ಅಡಿಯಷ್ಟು ವ್ಯಾಪ್ತಿಯಲ್ಲಿ ಭೂಕುಸಿತ ಸಂಭವಿಸಿತ್ತು.

2026ರ ಎಪ್ರಿಲ್‌ನಲ್ಲಿ ಹೊಸನಗರ ತಾಲೂಕಿನ ಹುಲಿಕಲ್ ಘಾಟ್ ರಸ್ತೆಯಲ್ಲಿ ತಡೆಗೋಡೆ ನಿರ್ಮಾಣ ಕಾಮಗಾರಿಯಲ್ಲಿ ಸಂಭವಿಸಿದ ಭೀಕರ ಮಣ್ಣು ಕುಸಿತದಲ್ಲಿ ಮೂವರು ಕಾರ್ಮಿಕರು ಸ್ಥಳದಲ್ಲೇ ಮೃತಪಟ್ಟು, ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದರು. ಈ ಘಟನೆಯ ನಂತರ ಮಲೆನಾಡು ಹಾಗೂ ಕರಾವಳಿ ಜಿಲ್ಲೆಗಳ ಸಂಪರ್ಕ ತಾತ್ಕಾಲಿಕವಾಗಿ ಕಡಿತಗೊಂಡಿತ್ತು. ಈ ರೀತಿಯ ಘಟನೆಗಳು ಹಾಗೂ ಕೇರಳದ ವಯನಾಡಿನಲ್ಲಿ ಸಂಭವಿಸಿದ ಗುಡ್ಡ ಕುಸಿತ ಪ್ರಕರಣ ಕಣ್ಣೆದುರಿಗೆ ಇದ್ದರೂ ಜಿಲ್ಲೆಯ ಸಂಸದರು ಸೇರಿದಂತೆ ಜನಪ್ರತಿನಿಧಿಗಳು ಆಗುಂಬೆ ಸುರಂಗ ಮಾರ್ಗ ಮತ್ತು ಶಿವಮೊಗ್ಗ-ಶೃಂಗೇರಿ ರೈಲು ಯೋಜನೆಗೆ ಬಹಳ ಉತ್ಸುಕರಾಗಿದ್ದಾರೆ ಎಂದು ಪರಿಸರವಾದಿಗಳು/ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಆಗುಂಬೆ ಸುರಂಗ ಮಾರ್ಗ ಮತ್ತು ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಯಿಂದ ಪರಿಸರದ ಮೇಲಾಗುವ ಅಪಾಯದ ಮುನ್ಸೂಚನೆಯನ್ನು ಸರಕಾರಗಳಿಗೆ ನೀಡುತ್ತಿದ್ದರೂ ಸರಕಾರಗಳು ಕಿವಿಗೊಡುತ್ತಿಲ್ಲ ಎಂಬವುದು ಪರಿಸರ ತಜ್ಞರ ಆರೋಪವಾಗಿದೆ.

ಕರ್ನಾಟಕ ವಿದ್ಯುತ್ ನಿಗಮ ನಿಯಮಿತ (ಕೆಪಿಸಿಎಲ್) ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ ಹೆಸರಿನಲ್ಲಿ ಶರಾವತಿ ಮತ್ತು ಸಮುದ್ರದ ನೆಂಟಸ್ಥನವನ್ನೇ ಕಡಿದು ಹಾಕಲು ಯೋಜನೆ ರೂಪಿಸಲಾಗಿದೆ. ಈ ಯೋಜನೆಯನ್ನು ತಳಕಳಲೆ ಮತ್ತು ಗೇರುಸೊಪ್ಪ ನಡುವೆ ಮಾಡುತ್ತಿದ್ದು, 2,000 ಮೆಗಾ ವ್ಯಾಟ್ ವಿದ್ಯುತ್ ಉತ್ಪಾದಿಸುವ ಗುರಿ ಹೊಂದಿದೆ. ಹೈದರಾಬಾದ್ ಮೂಲದ ಮೇಘಾ ಇಂಜಿನಿಯರಿಂಗ್ ಮತ್ತು ಇನ್‌ಫ್ರಾಸ್ಟ್ರಕ್ಚರ್ಸ್ ಸಂಸ್ಥೆಗೆ 2024ರ ಫೆಬ್ರವರಿಯಲ್ಲಿ 8,005 ಕೋಟಿ ರೂ.ಗೆ ಯೋಜನೆಯ ಟೆಂಡರ್ ನೀಡಲಾಗಿದೆ. ಯೋಜನೆಯ ಒಟ್ಟು ಮೊತ್ತ 10,500 ಕೋಟಿ ರೂ. ಎನ್ನಲಾಗುತ್ತಿದೆ.

54.155 ಹೆಕ್ಟೇರ್ ಅರಣ್ಯ ಪ್ರದೇಶ, 24.31 ಹೆಕ್ಟೇರ್ ಖಾಸಗಿ ಭೂಮಿ ಬಳಕೆಯಾಗುತ್ತಿದೆ. ಹಾಲಿ ಇರುವ ತಳಕಳಲೆ ಮತ್ತು ಗೇರುಸೊಪ್ಪ ಜಲಾಶಯದ ನಡುವೆ ಸುರಂಗ ಮೂಲಕ ನೀರು ಹರಿಸಿ ವಿದ್ಯುತ್ ಶೇಖರಣೆ, ಮರು ಉಪಯೋಗದ ವಿನ್ಯಾಸ ಮಾಡಲಾಗುತ್ತದೆ. ಸುರಂಗದ ಮಧ್ಯಭಾಗದ ಭೂ ಗರ್ಭದಲ್ಲೇ ವಿದ್ಯುತ್ ಘಟಕ ಸ್ಥಾಪಿಸಲಾಗುತ್ತದೆ.

ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ ಪ್ರದೇಶ ಸಿಂಗಳೀಕ ಅಭಯಾರಣ್ಯ. ಅತ್ಯಂತ ಸೂಕ್ಷ್ಮ ಪರಿಸರ ಹೊಂದಿರುವ ಈ ಅಭಯಾರಣ್ಯದಲ್ಲಿ 16 ಸಾವಿರಕ್ಕೂ ಹೆಚ್ಚು ಮರಗಳ ಹನನ ಮಾಡಲಾಗುತ್ತದೆ ಎಂಬುದು ಪರಿಸರವಾದಿಗಳ ಆರೋಪವಾಗಿದೆ.

ಅಪರೂಪದ ಪ್ರಾಣಿ, ಪಕ್ಷಿ, ಜೀವಿ ಮತ್ತು ಸಸ್ಯ ಸಂಕುಲ ಹಾಳುಗೆಡವಿ ಈ ಯೋಜನೆ ಮಾಡುವ ಅಗತ್ಯವೇ ಇಲ್ಲ. 2,000 ಮೆಗಾವ್ಯಾಟ್ ವಿದ್ಯುತ್ ಉತ್ಪಾದಿಸಲು ಅಷ್ಟೇ ಪ್ರಮಾಣದ ವಿದ್ಯುತ್ ಬೇಕಾಗುತ್ತದೆ ಎಂದಾದರೆ ಈ ಯೋಜನೆ ಮಾಡುವ ಉದ್ದೇಶವೇನು ಎಂದು ಸ್ಥಳೀಯರು, ಪರಿಸರವಾದಿಗಳು ಪ್ರಶ್ನಿಸುತ್ತಿದ್ದಾರೆ. ಆದರೆ, ವಿರೋಧದ ನಡುವೆಯೂ ರಾಜ್ಯ ಇಂಧನ ಸಚಿವರು ಈ ಯೋಜನೆ ಮಾಡುವುದಾಗಿ ಸಮರ್ಥಿಸಿಕೊಂಡಿದ್ದು, ಈ ಯೋಜನೆಯಿಂದ ಯಾವುದೇ ಕಾಡು ನಾಶವಾಗುವುದಿಲ್ಲ ಎಂದು ಸ್ಪಷ್ಟಪಡಿಸುತ್ತಿದ್ದಾರೆ.

ಪಶ್ಚಿಮ ಘಟ್ಟದ ಅತೀ ಸೂಕ್ಷ್ಮ ಪ್ರದೇಶಗಳಲ್ಲಿ ಒಂದಾದ ಆಗುಂಬೆಯಲ್ಲಿ ಘಾಟ್ ರಸ್ತೆ ಮೇಲ್ದರ್ಜೆ ಯೋಜನೆ ಜೊತೆಗೆ ಸುರಂಗ ಮಾರ್ಗ ನಿರ್ಮಾಣಕ್ಕೆ ಕೇಂದ್ರ ಸರಕಾರ ಮುಂದಾಗಿದ್ದು, ಡಿಪಿಆರ್ ಸಿದ್ಧಪಡಿಸಲು 2026ರ ಫೆಬ್ರವರಿಯಲ್ಲಿ ಟೆಂಡರ್ ಆಹ್ವಾನಿಸಿದೆ. ಇದು 3,500 ಕೋಟಿ ರೂ. ಅಂದಾಜು ವೆಚ್ಚದ ಯೋಜನೆಯಾಗಿದ್ದು, ಇದಕ್ಕೂ ತೀವ್ರ ವಿರೋಧ ವ್ಯಕ್ತವಾಗುತ್ತಿದೆ.

ಪಶ್ಚಿಮ ಘಟ್ಟದ ಜೀವವೈವಿಧ್ಯ ತಾಣವಾಗಿರುವ ಸೋಮೇಶ್ವರ ವನ್ಯಜೀವಿ ಧಾಮದಲ್ಲಿ ಸುರಂಗ ಕೊರೆಯುವುದರಿಂದ ಪರಿಸರ ನಾಶವಾಗಲಿದೆ. ಆಗುಂಬೆ ಪ್ರದೇಶವು ಅತಿ ಹೆಚ್ಚು ಮಳೆ ಬೀಳುವ ಹಾಗೂ ದುರ್ಬಲ ಭೂರಚನೆ ಹೊಂದಿರುವ ಪ್ರದೇಶವಾಗಿದೆ. ಸುರಂಗ ಕೊರೆಯುವಿಕೆ ಹಾಗೂ ಭಾರೀ ಯಂತ್ರಗಳ ಬಳಕೆಯಿಂದ ವಯನಾಡು ಮಾದರಿಯ ಭೂಕುಸಿತಗಳಿಗೆ ದಾರಿ ಮಾಡಿಕೊಡಬಹುದು ಎಂದು ಪರಿಸರ ತಜ್ಞರು ಎಚ್ಚರಿಸಿದ್ದಾರೆ.

ಆಗುಂಬೆ ಘಾಟಿ ಪರಿಸರ ಸೂಕ್ಷ್ಮ ಪ್ರದೇಶವಾಗಿದ್ದು, ಇದು ಸಿಂಗಳಿಕ, ದಾಸಮಂಗಟ್ಟೆ, ಕಾಳಿಂಗ ಸರ್ಪ ಸೇರಿದಂತೆ ಕೋಟ್ಯಂತರ ಜೀವವೈವಿಧ್ಯಗಳ ಆವಾಸ ಸ್ಥಾನವಾಗಿದೆ. ಈ ಯೋಜನೆಯಿಂದ ಅದಕ್ಕೆ ಧಕ್ಕೆಯಾಗುವ ಸಾಧ್ಯತೆ ಹೆಚ್ಚಿದೆ. ಸುರಂಗ ನಿರ್ಮಾಣದ ವೇಳೆ ಬಳಸುವ ಸ್ಫೋಟಕ, ಅತ್ಯಾಧುನಿಕ ಯಂತ್ರಗಳ ಹೊಡೆತಕ್ಕೆ ಗುಡ್ಡವೇ ಜಾರುವ ಸಾಧ್ಯತೆ ಇದೆ ಎಂದು ಪರಿಸರ ತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ.

ಶಿವಮೊಗ್ಗ-ಶೃಂಗೇರಿ-ಮಂಗಳೂರು ನೂತನ ರೈಲು ಮಾರ್ಗ ನಿರ್ಮಾಣ ಯೋಜನೆಗೆ ಅಂತಿಮ ಸ್ಥಳ ಸಮೀಕ್ಷೆ ಮತ್ತು ವಿಸ್ತೃತ ಯೋಜನಾ ವರದಿ ತಯಾರಿಕೆಗೆ ಕೇಂದ್ರ ಸರಕಾರದಿಂದ ಅನುಮೋದನೆ ದೊರೆತಿದೆ. ಅಂದಾಜು 3,300 ಕೋಟಿ ರೂ. ವೆಚ್ಚದ ಈ ಮಾರ್ಗವು 332 ಕಿ.ಮೀ. ವ್ಯಾಪ್ತಿ ಹೊಂದಿದೆ. ಇದರಿಂದ ಶಿವಮೊಗ್ಗ, ಚಿಕ್ಕಮಗಳೂರು, ದಕ್ಷಿಣ ಕನ್ನಡ, ದಾವಣಗೆರೆ, ಹಾವೇರಿ ಮತ್ತು ಚಿತ್ರದುರ್ಗ ಜಿಲ್ಲೆಗಳ ಜನರಿಗೆ ಅನುಕೂಲವಾಗಲಿದೆ. ಈ ಮಾರ್ಗವು ಹೊಸನಗರ, ತೀರ್ಥಹಳ್ಳಿ, ಶೃಂಗೇರಿ ಹಾಗೂ ಕಾರ್ಕಳ ತಾಲೂಕುಗಳನ್ನು ಸಂಪರ್ಕಿಸಲಿದೆ. ಆದರೆ, ಪಶ್ಚಿಮ ಘಟ್ಟಗಳ ಸೂಕ್ಷ್ಮ ಪರಿಸರ ವಲಯದ ಮೂಲಕ ರೈಲು ಮಾರ್ಗ ಹಾದುಹೋಗುವುದರಿಂದ ಅಪಾರ ಪ್ರಮಾಣದ ಮರಗಳ ನಾಶ, ಜೀವವೈವಿಧ್ಯಕ್ಕೆ ಧಕ್ಕೆ ಮತ್ತು ವನ್ಯಜೀವಿಗಳ ಆವಾಸಸ್ಥಾನಕ್ಕೆ ತೊಂದರೆಯಾಗುವ ಆತಂಕವನ್ನು ಪರಿಸರವಾದಿಗಳು ವ್ಯಕ್ತಪಡಿಸಿದ್ದಾರೆ.

ಈಗಾಗಲೇ ಶಿವಮೊಗ್ಗ- ಚಿಕ್ಕಮಗಳೂರು-ಉಡುಪಿ-ದ.ಕ. ಜಿಲ್ಲೆಗಳಲ್ಲಿ ಮಾನವ-ವನ್ಯ ಜೀವಿ ಸಂಘರ್ಷದಿಂದ ಅಪಾರ ಮಾನವ ಜೀವ ಹಾನಿ ಸಂಭವಿಸುತ್ತಿದ್ದು, ಹೊಸ ರೈಲು ಯೋಜನೆಯಿಂದ ಮಾನವ-ವನ್ಯಜೀವಿ ಸಂಘರ್ಷ ಮತ್ತಷ್ಟು ಉಲ್ಭಣಗೊಳ್ಳುವ ಸಾಧ್ಯತೆ ದಟ್ಟವಾಗಿದೆ.

ಅಭಿವೃದ್ಧಿ ಯೋಜನೆಗಳಿಂದಲೇ ಭೀತಿ!

ಮಲೆನಾಡು ಶಿವಮೊಗ್ಗ ಜಿಲ್ಲೆಯಲ್ಲಿ ದಟ್ಟ ಅರಣ್ಯವನ್ನು ಮುಳುಗಿಸಿ ಏಳು ಅಣೆಕಟ್ಟುಗಳನ್ನು ಕಟ್ಟಲಾಗಿದೆ. ಇದರೊಂದಿಗೆ ಶರಾವತಿ ಪಂಪ್ಡ್ ಸ್ಟೋರೇಜ್, ಆಗುಂಬೆ ಸುರಂಗ ಮಾರ್ಗ, ಶಿವಮೊಗ್ಗ-ಶೃಂಗೇರಿ-ದಕ್ಷಿಣ ಕನ್ನಡ ರೈಲು ಮಾರ್ಗ, ಕೊಡಚಾದ್ರಿ ಕೇಬಲ್ ಕಾರು... ಹೀಗೆ ಹತ್ತು ಹಲವಾರು ಯೋಜನೆಗಳು ಜಿಲ್ಲೆಯಲ್ಲಿ ಮುಂಚೂಣಿಯಲ್ಲಿವೆ. ವಿಶ್ವ ವಿಖ್ಯಾತ ಜೋಗ ಅಭಿವೃದ್ಧಿ ಹೆಸರಲ್ಲಿ ಜೋಗದ ಅತ್ಯಂತ ಸೂಕ್ಷ್ಮ ಪರಿಸರದಲ್ಲಿ ನೂರಾರು ಕೋಟಿ ರೂ. ವೆಚ್ಚದಲ್ಲಿ ಬೃಹತ್ ಕಾಮಗಾರಿ ನಡೆಯುತ್ತಿದ್ದು, ಸರ್ವ ಋತು ತಾಣವನ್ನಾಗಿ ಮಾಡಲು ರಾಜ್ಯ ಸರಕಾರ ಮುಂದಾಗಿದೆ. ಲಿಂಗನಮಕ್ಕಿಯಿಂದ ಬೆಂಗಳೂರಿಗೆ ನೀರು, ನದಿ ತಿರುವು ಯೋಜನೆ ಸೇರಿದಂತೆ ಅಭಿವೃದ್ಧಿ ಯೋಜನೆಗಳಿಂದಲೇ ಭೀತಿ ಎದುರಾಗಿದೆ.

‘ಮಾನವ ಹಸ್ತಕ್ಷೇಪ ನಿಲ್ಲಲಿ’

ಮಲೆನಾಡಿನ ಜೀವನಾಡಿಯಾಗಿರುವ ಪರಿಸರ ಸೂಕ್ಷ್ಮ ವಲಯದಲ್ಲಿ ಪ್ರಸ್ತಾವಿಸಲಾಗಿರುವ ಆಗುಂಬೆ ಸುರಂಗ ಮಾರ್ಗ ಯೋಜನೆ, ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ ಹಾಗೂ ‘ಶೃಂಗೇರಿ-ಮಂಗಳೂರು ರೈಲ್ವೆ ಯೋಜನೆ’ಗಳು ನಿಲ್ಲಬೇಕಿದೆ. ಪ್ರಸ್ತಾವಿತ ಯೋಜನೆಗಳು ಮಲೆನಾಡಿನ ಒಡಲನ್ನು ಸೀಳಿ ವಯನಾಡು ಮಾದರಿಯ ಮಹಾ ದುರಂತವನ್ನು ನಾವೇ ಆಹ್ವಾನಿಸುವುದಂತಾಗುತ್ತದೆ ಎಂದು ಸ್ಥಳೀಯರು ಆತಂಕ ಸಾರ್ವಜನಿಕರಲ್ಲಿ ಮೂಡಿದೆ. ಅಭಿವೃದ್ಧಿ ಯೋಜನೆಯ ನೆಪದಲ್ಲಿ ಪರಿಸರಕ್ಕೆ ಹಾನಿಯುಂಟಾಗುವ ಯೋಜನೆಗಳನ್ನು ಕೈ ಬಿಡಬೇಕಿದೆ. ಆಳುವ ಸರಕಾರಗಳು ಪಶ್ಚಿಮ ಘಟ್ಟ/ಪರಿಸರದ ಬಗ್ಗೆ ಕಾಳಜಿ ವಹಿಸಬೇಕಿದೆ.ವಯನಾಡು ದುರಂತವನ್ನು ಗಮನದಲ್ಲಿಟ್ಟುಕೊಂಡು ಅವೈಜ್ಞಾನಿಕ ಯೋಜನೆಗಳಿಗೆ ಕಡಿವಾಣ ಹಾಕಬೇಕಿದೆ ಎಂಬ ಆಗ್ರಹಗಳು ಜಿಲ್ಲೆಯ ಜನರಿಂದ ಕೇಳಿ ಬರುತ್ತಿವೆ.



Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಶರತ್ ಪುರದಾಳ್

contributor

Similar News