Raichur | ಧಾರ್ಮಿಕ ವಿಧಿಗಳ ಜತೆಗೆ ಜನಹಿತ ಕಾರ್ಯಕ್ಕೂ ಮಠಗಳು ಆದ್ಯತೆ ನೀಡಬೇಕು: ಜಯಣ್ಣ
ರಾಯಚೂರು: ಧಾರ್ಮಿಕ ವಿಧಿ-ವಿಧಾನಗಳ ಜತೆಗೆ ಭಾವೈಕ್ಯತೆಯ ಸಂದೇಶ ಸಾರುವುದರೊಂದಿಗೆ ಜನಹಿತ ಕಾರ್ಯಗಳಿಗೆ ಆದ್ಯತೆ ನೀಡುವುದು ಶ್ರೀಮಠಗಳ ಕರ್ತವ್ಯ ಎಂದು ಮಹಾನಗರ ಪಾಲಿಕೆ ಮಾಜಿ ಸದಸ್ಯ ಜಯಣ್ಣ ಹೇಳಿದರು.
ನಗರದ ಕಿಲ್ಲೆ ಬೃಹನ್ಮಠದಲ್ಲಿ ಗುರುವಾರ ಸಂಜೆ 102ನೇ ವರ್ಷದ ಶ್ರಾವಣ ಮಾಸದ ಅಂಗವಾಗಿ ಆಯೋಜಿಸಲಾಗಿರುವ ಒಂದು ತಿಂಗಳ ಸಂತ ಶಿಶುನಾಳ ಶರೀಫರ ಜೀವನದರ್ಶನ ಪ್ರವಚನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸಂತ ಶಿಶುನಾಳ ಶರೀಫರ ಜೀವನ ಹಾಗೂ ಅವರ ಗುರು ಗೋವಿಂದರ ಶಿಷ್ಯತ್ವದ ಕುರಿತು ಮಾತನಾಡಿದ ಅವರು, ಸಮಾಜದಲ್ಲಿ ನೈತಿಕ ಮೌಲ್ಯಗಳು ಮರೆಯಾಗುತ್ತಿರುವ ಸಂದರ್ಭದಲ್ಲಿ ಅವುಗಳನ್ನು ಎತ್ತಿಹಿಡಿಯುವುದು ಎಲ್ಲರ ಕರ್ತವ್ಯವಾಗಿದೆ. ನೈತಿಕತೆ ಹಾಗೂ ಆರೋಗ್ಯಕರ ಸಮಾಜ ನಿರ್ಮಾಣಕ್ಕೆ ಶ್ರೀಮಠ ಕೈಗೊಂಡಿರುವ ಕಾರ್ಯಗಳು ಶ್ಲಾಘನೀಯ ಎಂದರು.
ಕಿಲ್ಲೆ ಬೃಹನ್ಮಠದ ಪೀಠಾಧಿಪತಿ ಶ್ರೀ ಶಾಂತ ಮಲ್ಲ ಶಿವಾಚಾರ್ಯ ಮಹಾಸ್ವಾಮೀಜಿ ದಿವ್ಯ ಸಾನ್ನಿಧ್ಯ ವಹಿಸಿದ್ದರು. ಸಿದ್ದರಾಮೇಶ್ವರ ಶರಣರು, ಡಾ. ಕ್ಷೀರಲಿಂಗೇಶ್ವರ ಶರಣರು, ಮರಡಿ ಸಂತ ಫಕೀರ್ ಸಾಹೇಬ್ ಶರಣರು, ಸುಲ್ತಾನಪುರದ ಏಕ್ ಮಿನಾರ್ ಮಸೀದಿ ಅಧ್ಯಕ್ಷ ಅಬ್ದುಲ್ ಲತೀಫ್, ಮಹಾನಗರ ಪಾಲಿಕೆ ಮಾಜಿ ಸದಸ್ಯರಾದ ದರೂರ್ ಬಸನಗೌಡ ವಿನಯ್ ಕುಮಾರ್, ಜಿ.ಶಿವಮೂರ್ತಿ ಕಡಗೊಳ್ ಆಂಜನೇಯ, ಎಸ್ಎಲ್ ಕೇಶವ ರೆಡ್ಡಿ, ಡಾ.ನಿಜಗುಣ ಶಿವಯೋಗಪ್ಪ, ಜವಳಿ ಸಲೀಂ ರಾಹಿ, ಅಸ್ಕಿಹಾಳ ವಿರೂಪಾಕ್ಷಪ್ಪ, ಸಾಹುಕಾರ ಮಲ್ಲಿಕಾರ್ಜುನ್ ಪಾಟಿಲ್, ಮಹಾಂತೇಶ ಯಾದವ್, ಪೆನಗೊಂಡಲ ಗೋವಿಂದರಾಜು ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.
ಸಂತ ಶಿಶುನಾಳ ಶರೀಫರ ಪುರಾಣ ಪ್ರವಚನಕಾರ ವೆ.ಮೂ. ಸಿದ್ದರಾಮಯ್ಯ ಶಾಸ್ತ್ರಿಗಳು ಪ್ರವಚನ ನೀಡಿದರು. ವಿವಿಧ ಕ್ಷೇತ್ರಗಳ ಗಣ್ಯರು ಹಾಗೂ ಭಕ್ತರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ವೆ.ಮೂ. ಶರಣಯ್ಯ ಸ್ವಾಮಿ ಸಿದ್ದಲಿಂಗೇಶ್ವರ ಹಿರೇಮಠ ಸ್ವಾಗತಿಸಿದರು.