Raichur | ಒಂದೇ ತಿಂಗಳಲ್ಲಿ ಮೂವರು ದಲಿತರ ಕೊಲೆ: ಪೊಲೀಸ್ ಇಲಾಖೆ ವಿರುದ್ಧ ಬಿಎಸ್‌ಪಿ ಆಕ್ರೋಶ

ದಲಿತರ ಕೊಲೆ, ಅತ್ಯಾಚಾರ ಪ್ರಕರಣಕ್ಕೆ ಪೊಲೀಸರ ಆಡಳಿತ ವೈಫಲ್ಯವೇ ಕಾರಣ : ಬಿಎಸ್ ಪಿ ಆರೋಪ

Update: 2026-08-22 17:24 IST

ರಾಯಚೂರು: ಜಿಲ್ಲೆಯಲ್ಲಿ ದಲಿತ ಯುವಕ ಭೂಮಾನಂದನ ಕೊಲೆ, ಹೊಕ್ರಾಣಿಯಲ್ಲಿ ಯುವತಿಯ ಮೇಲೆ ನಡೆದಿದೆ ಎನ್ನಲಾದ ಅತ್ಯಾಚಾರ ಹಾಗೂ ಕೊಲೆ ಮತ್ತು ಲಿಂಗಸೂಗೂರಿನ ಕರಡಕಲ್ ಗ್ರಾಮದಲ್ಲಿ ಮಹಿಳೆಯ ಅನುಮಾನಾಸ್ಪದ ಕೊಲೆ ಪ್ರಕರಣಗಳು ಒಂದೇ ತಿಂಗಳಲ್ಲಿ ನಡೆದಿದ್ದು, ಪೊಲೀಸ್ ಇಲಾಖೆ ಸಂಪೂರ್ಣ ವಿಫಲವಾಗಿದೆ ಎಂದು ಬಹುಜನ ಸಮಾಜ ಪಕ್ಷದ ರಾಜ್ಯ ಕಾರ್ಯದರ್ಶಿ ಎಂ. ಬಸವರಾಜ ಆರೋಪಿಸಿದರು.

ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಒಂದೇ ತಿಂಗಳಲ್ಲಿ ಮೂವರು ದಲಿತರು ಭೀಕರವಾಗಿ ಕೊಲೆಯಾಗಿರುವುದು ಜಿಲ್ಲೆಯ ಜನರಲ್ಲಿ ಆತಂಕ ಮೂಡಿಸಿದೆ. ಜಿಲ್ಲೆಯಲ್ಲಿ ಕಿರಾಣಿ ಅಂಗಡಿಗಳಲ್ಲಿ ಅಕ್ರಮ ಮದ್ಯ ಮಾರಾಟ ಹಾಗೂ ಲಿಕ್ಕರ್ ಮಾಫಿಯಾ ಎಗ್ಗಿಲ್ಲದೆ ನಡೆಯುತ್ತಿದೆ. ಯುವಕರಿಗೆ ಮಾದಕ ವಸ್ತುಗಳು ಸುಲಭವಾಗಿ ಲಭ್ಯವಾಗುತ್ತಿರುವುದರಿಂದ ಕೊಲೆ, ಸುಲಿಗೆ ಸೇರಿದಂತೆ ಅಪರಾಧ ಚಟುವಟಿಕೆಗಳು ಹೆಚ್ಚಾಗುತ್ತಿವೆ. ಅಕ್ರಮ ಚಟುವಟಿಕೆಗಳನ್ನು ತಡೆಯುವಲ್ಲಿ ಅಬಕಾರಿ ಹಾಗೂ ಪೊಲೀಸ್ ಇಲಾಖೆ ನಿರ್ಲಕ್ಷ್ಯ ವಹಿಸುತ್ತಿವೆ ಎಂದು ದೂರಿದರು.

ದಲಿತರ ಮೇಲಿನ ಭೀಕರ ಕೊಲೆಗಳನ್ನು ಖಂಡಿಸಿ ದೇವದುರ್ಗ ತಾಲೂಕಿನ ಹದ್ದಿನಾಳ ಗ್ರಾಮದಿಂದ ರಾಯಚೂರು ನಗರದವರೆಗೆ ದಲಿತಪರ ಸಂಘಟನೆಗಳ ವತಿಯಿಂದ ಬೈಕ್ ರ‍್ಯಾಲಿ ಹಮ್ಮಿಕೊಳ್ಳಲಾಗಿದ್ದು, ಬಿಎಸ್‌ಪಿ ಬೆಂಬಲ ನೀಡಲಿದೆ ಎಂದು ತಿಳಿಸಿದರು.

ಬಿಎಸ್‌ಪಿ ರಾಜ್ಯ ಕಾರ್ಯದರ್ಶಿ ಹನುಮಂತಪ್ಪ ವಕೀಲ ಮಾತನಾಡಿ, ಮಾಜಿ ಶಾಸಕರಾದ ತಿಪ್ಪರಾಜು ಹವಾಲ್ದಾರ್, ಶಿವನಗೌಡ ನಾಯಕ ಹಾಗೂ ನಗರ ಶಾಸಕ ಡಾ. ಶಿವರಾಜ ಪಾಟೀಲ ಅವರ ಸಹಚರರು ಬಾರ್ ಮತ್ತು ರೆಸ್ಟೋರೆಂಟ್ ನಡೆಸುತ್ತಿದ್ದು, ಅಕ್ರಮ ಮದ್ಯ ಮಾರಾಟಕ್ಕೆ ಪರೋಕ್ಷವಾಗಿ ಕಾರಣರಾಗುತ್ತಿದ್ದಾರೆ ಎಂದು ಆರೋಪಿಸಿದರು.

ಜಿಲ್ಲಾಧ್ಯಕ್ಷ ಜೈಭೀಮ್ ವಲ್ಲಭ, ಯೇಸು ಕಮಲದಿನ್ನಿ, ಬುಡ್ಡಪ್ಪ ಕೆ, ಎಂ.ಆರ್ ಬೇರಿ, ಚಂದ್ರಶೇಖರ ಇದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News