ರಾಯಚೂರಿನಲ್ಲಿ ನೂತನ ಜಿಲ್ಲಾ ಕಾರಾಗೃಹ ನಿರ್ಮಾಣಕ್ಕೆ ಕ್ರಮ : ಡಾ.ಶರಣಪ್ರಕಾಶ್ ಪಾಟೀಲ್

Update: 2026-08-20 21:37 IST

ಬೆಂಗಳೂರು: ರಾಯಚೂರಿನಲ್ಲಿ ನೂತನ ಜಿಲ್ಲಾ ಕಾರಾಗೃಹ ನಿರ್ಮಾಣ ಕಾಮಗಾರಿಗೆ 2026-27ನೇ ಸಾಲಿನಲ್ಲಿ ಒದಗಿಸಲಾಗಿರುವ 75 ಕೋಟಿ ರೂ.ಅನುದಾನದಲ್ಲಿ 5 ಕೋಟಿ ರೂ.ಅನುದಾನವನ್ನು ನಿಗದಿಪಡಿಸಿಕೊಂಡು ಕ್ರಿಯಾ ಯೋಜನೆಗೆ ಅನುಮೋದನೆ ಪಡೆಯಲು, ಆಡಳಿತಾತ್ಮಕ ಮಂಜೂರಾತಿ ಹಾಗೂ ಅನುದಾನ ಬಿಡುಗಡೆಗೆ ಕ್ರಮವಹಿಸಲಾಗುತ್ತಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ್ ಪಾಟೀಲ್ ತಿಳಿಸಿದರು.

ಗುರುವಾರ ಪರಿಷತ್ತಿನ ಪ್ರಶ್ನೋತ್ತರ ಕಲಾಪದಲ್ಲಿ ಕಾಂಗ್ರೆಸ್ ಸದಸ್ಯ ಎನ್.ಎಸ್.ಭೋಸರಾಜು ಪ್ರಶ್ನೆಗೆ ಗೃಹ ಸಚಿವರ ಪರವಾಗಿ ಉತ್ತರ ನೀಡಿದ ಅವರು, ರಾಯಚೂರು ಜಿಲ್ಲೆಯ ಬಿಜನಗೇರಾ ಗ್ರಾಮದ ಸರ್ವೆ ನಂ.30ರಲ್ಲಿ ಮಂಜೂರಾಗಿರುವ 19.15 ಎಕರೆ ಜಮೀನಿನಲ್ಲಿ 500 ಬಂಧಿಗಳ ಸಾಮರ್ಥ್ಯದ ನೂತನ ಜಿಲ್ಲಾ ಕಾರಾಗೃಹ ನಿರ್ಮಾಣಕ್ಕಾಗಿ ಕರ್ನಾಟಕ ರಾಜ್ಯ ಪೊಲೀಸ್ ವಸತಿ ಮತ್ತು ಮೂಲಭೂತ ಸೌಲಭ್ಯ ಅಭಿವೃದ್ಧಿ ನಿಗಮ ಇವರಿಂದ 90 ಕೋಟಿ ರೂ.ಗಳ ಸಮಗ್ರ ಅಂದಾಜು ಪಟ್ಟಿಯನ್ನು ಪಡೆಯಲಾಗಿದೆ ಎಂದರು.

ಸಿಂಧನೂರು ತಾಲೂಕಿನಲ್ಲಿ 1098 ಪ್ರಕರಣಗಳು ದಾಖಲು

ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನಲ್ಲಿ 2023ರಿಂದ ಈವರೆಗೆ ಡ್ರಗ್ಸ್, ಗಾಂಜಾ, ಇಸ್ವೀಟ್, ಅಕ್ರಮ ಮರಳು ದಂಧೆ, ಬೆಟ್ಟಿಂಗ್ ಹಾಗೂ ಆನ್ ಲೈನ್ ಜೂಜಾಟಕ್ಕೆ ಸಂಬಂಧಿಸಿದಂತೆ 1095 ಪ್ರಕರಣಗಳು ದಾಖಲಾಗಿವೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣ ಪ್ರಕಾಶ್ ಪಾಟೀಲ್ ತಿಳಿಸಿದರು.

ಗುರುವಾರ ಪರಿಷತ್ತಿನ ಪ್ರಶ್ನೋತ್ತರ ಕಲಾಪದಲ್ಲಿ ಕಾಂಗ್ರೆಸ್ ಸದಸ್ಯ ಬಸನಗೌಡ ಬಾದರ್ಲಿ ಪ್ರಶ್ನೆಗೆ ಗೃಹಸಚಿವರ ಪರವಾಗಿ ಉತ್ತರಿಸಿದ ಸಚಿವರು, ಅಕ್ರಮ ಚಟುವಟಿಕೆಗಳಲ್ಲಿ ನಿರಂತರವಾಗಿ ತೊಡಗಿರುವ ವ್ಯಕ್ತಿಗಳನ್ನು ಗುರುತಿಸಿ, ಪ್ರಕರಣ ದಾಖಲಿಸಲಾಗಿದೆ ಎಂದು ಮಾಹಿತಿ ನೀಡಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News