ಲಿಂಗಸುಗೂರು(ರಾಯಚೂರು): ಭ್ರಷ್ಟ, ಜನವಿರೋಧಿ, ದಲಿತ ವಿರೋಧಿ, ಅಭಿವೃದ್ಧಿ ವಿರೋಧಿ ಕಾಂಗ್ರೆಸ್ ಸರ್ಕಾರ ವಿರುದ್ಧ ಹೋರಾಟ ಆರಂಭವಾಗಿದೆ. ಪಾದಯಾತ್ರೆ ಸೆ.10ಕ್ಕೆ ಮುಗಿಯಬಹುದು. ಆದರೆ ಈ ಸರ್ಕಾರದ ವಿರುದ್ಧ ಹೋರಾಟ ನಿರಂತರವಾಗಿ ನಡೆಯಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿದ್ದಾರೆ.

ಗುರುಗುಂಟಾದ ಶ್ರೀ ಅಮರೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮುಂದಿನ ಒಂದೂವರೆ ಎರಡು ವರ್ಷ ಈ ಜನವಿರೋಧಿ ಭ್ರಷ್ಟ ಸರ್ಕಾರದ ಬಣ್ಣ ಬಯಲು ಮಾಡಲಿದ್ದೇವೆ. ಈ ಸರ್ಕಾರವನ್ನು ನಾವು ಬುಡಸಮೇತ ಕಿತ್ತೊಗೆಯುತ್ತೇವೆ. ಅಲ್ಲಿವರೆಗೆ ನಮ್ಮ ಹೋರಾಟ ನಡೆಲಿದೆ. ಮುಂದೆ ನಮ್ಮ ಬಿಜೆಪಿ ನೇತೃತ್ವದ ಎನ್ ಡಿಎ ಸರ್ಕಾರ ಅಧಿಕಾರಕ್ಕೆ ಬರಬೇಕು ಎಂದು ತಿಳಿಸಿದರು.

ಇದು ಹತ್ತು ದಿನಗಳ ಪಾದಯಾತ್ರೆ. ನಮ್ಮ ಪಕ್ಷದ ಎಲ್ಲ ನಾಯಕರು ಇದರಲ್ಲಿ ಭಾಗವಹಿಸಲಿದ್ದಾರೆ. ಉತ್ತರ ಕರ್ನಾಟಕ ಭಾಗದ ನಾಯಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲಿದ್ದಾರೆ. ನಮ್ಮ ಕಾರ್ಯಕರ್ತರು ಅತಿ ಉತ್ಸಾಹದಿಂದ ಇದರಲ್ಲಿ ತೊಡಗಿಸಿಕೊಳ್ಳಲಿದ್ದಾರೆ. ಇದೊಂದು ಐತಿಹಾಸಿಕ ಪಾದಯಾತ್ರೆ ಎಂದು ವಿಜಯೇಂದ್ರ ವಿಶ್ಲೇಷಿಸಿದರು.

ಬಿಎಸ್ ವೈ ಚಾಲನೆ

ಪಾದಯಾತ್ರೆಗೆ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಚಾಲನೆ ನೀಡಲಿದ್ದಾರೆ. ಮಾಜಿ ಮುಖ್ಯಮಂತ್ರಿ ಹಾಗೂ ಸಂಸದರಾದ ಬಸವರಾಜ ಬೊಮ್ಮಾಯಿ, ಜಗದೀಶ್ ಶೆಟ್ಟರ್, ವಿರೋಧ ಪಕ್ಷದ ನಾಯಕರಾದ ಆರ್ ಅಶೋಕ್, ಛಲವಾದಿ ನಾರಾಯಣ ಸ್ವಾಮಿ, ಮಾಜಿ ಸಚಿವರಾದ ಬಿ.ಶ್ರೀರಾಮುಲು, ಶಿವನಗೌಡ ನಾಯಕ್, ಸ್ಥಳೀಯ ಶಾಸಕರಾದ ಮಾನಪ್ಪ ವಜ್ಜಲ್, ಪಕ್ಷದ ಮುಖಂಡರಾದ ಬಂಗಾರು ಹನುಮಂತು ಸೇರಿದಂತೆ ಹಲವಾರು ಮುಖಂಡರು ಪಾದಯಾತ್ರೆಯಲ್ಲಿ ಭಾಗವಹಿಲಿದ್ದಾರೆ. ಈ ಭಾಗದ ಶಾಸಕರು, ಮುಖಂಡರು, ಕಾರ್ಯಕರ್ತರು ಈ ಪಾದಯಾತ್ರೆ ಯಶಸ್ವಿಯಾಗಿ ನಡೆಯಲು ಸಾಕಷ್ಟು ಮುತುವರ್ಜಿ ವಹಿಸಿದ್ದಾರೆ ಎಂದು ವಿವರಿಸಿದರು.

ಬಿಜೆಪಿ ಹೊಸಯುಗ ಆರಂಭ

ಎಷ್ಟು ಜನ ಭಾಗವಹಿಸುತ್ತಾರೆ ಎಂಬುದು ಮುಖ್ಯವಲ್ಲ. ನಮ್ಮ ಹೋರಾಟ ಎಷ್ಟು ನಡೆಯುತ್ತದೆ ಎಂಬುದು ಮುಖ್ಯ. ನಮ್ಮ ಹೋರಾಟಕ್ಕೆ ಹೆದರಿ ಈಗಾಗಲೇ ಒಬ್ಬರು ಭ್ರಷ್ಟ ಸಚಿವ ರಾಜೀನಾಮೆ ನೀಡಿದ್ದಾರೆ. ಅಂತಹ ಅನಿವಾರ್ಯದಲ್ಲಿ ಸರ್ಕಾರ ಸಿಲುಕಿತ್ತು. ಪಾದಯಾತ್ರೆ ಘೋಷಣೆ ಮಾಡಿದಾಗಲೇ ಸರ್ಕಾರ ಮಣಿದಿತ್ತು. ರಾಜೀನಾಮೆ ಪಡೆದಿದೆ. ಭಾರತೀಯ ಜನತಾ ಪಕ್ಷದ ಹೊಸ ಯುಗ ಇಂದಿನಿಂದ ಆರಂಭವಾಗಲಿದೆ ಎಂದು ತಿಳಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor