ಅವಹೇಳನಕಾರಿ, ಅಗೌರವದ ಪದಗಳ ಬಳಕೆ ಹೆಚ್ಚುತ್ತಿದೆ: ನಿಂದನೀಯ ಭಾಷೆಯ ಸಾಮಾನ್ಯೀಕರಣದ ಬಗ್ಗೆ ಒಲಿಂಪಿಯನ್ ಮನು ಭಾಕರ್ ಕಳವಳ
Photo: PTI
ಹೊಸದಿಲ್ಲಿ: ಸದ್ಯ ನಡೆಯುತ್ತಿರುವ ನಿಂದನಾತ್ಮಕ ಭಾಷೆ ಕುರಿತು ಚರ್ಚೆಯಲ್ಲಿ ಒಲಿಂಪಿಕ್ ಪದಕ ವಿಜೇತೆ ಮನು ಭಾಕರ್ ಕೂಡಾ ಸೇರ್ಪಡೆಯಾಗಿದ್ದಾರೆ. “ಜನರು ಆಯ್ಕೆ ಮಾಡಿಕೊಳ್ಳುವ ಪದಗಳು ಅವರ ವ್ಯಕ್ತಿತ್ವವನ್ನು ಬಿಂಬಿಸುತ್ತವೆ. ಗೌರವಯುತ ಸಂವಹನ ಮುಖ್ಯವಾಗಿದ್ದು, ತಾಳ್ಮೆಯ ಅರ್ಥವನ್ನು ಜನರು ಮರು ವ್ಯಾಖ್ಯಾನ ಮಾಡಬೇಕಾದ ಅಗತ್ಯವಿದೆ” ಎಂದು ಅವರು ಒತ್ತಿ ಹೇಳಿದ್ದಾರೆ.
“ಕೆಟ್ಟ ಭಾಷೆಯನ್ನು ಬಳಸುವುದು ತಾಳ್ಮೆಯಲ್ಲ. ನಿಂದಿಸುವುದು ತಾಳ್ಮೆಯಲ್ಲ. ನಾವು ತಾಳ್ಮೆಯ ವ್ಯಾಖ್ಯಾನವನ್ನು ಸರಳವಾಗಿ ಮಾಡೋಣ: ಕಠಿಣ ಪರಿಶ್ರಮ, ವಿನಯ, ಇತರರೆಡೆಗೆ ಹಾಗೂ ನಿಮ್ಮೆಡೆಗೆ ಗೌರವಯುತವಾಗಿರುವುದು, ಪ್ರಾಮಾಣಿಕತೆಯ ಮೂಲಕ ಯಶಸ್ವಿಯಾಗಲು ಪರಿಶ್ರಮ ಪಡುವುದು ಹಾಗೂ ನಿಮ್ಮ ಪೋಷಕರು ಹಾಗೂ ದೇಶವನ್ನು ಹೆಮ್ಮೆ ಪಡುವಂತೆ ಮಾಡುವುದು ತಾಳ್ಮೆಯಾಗಿದೆ” ಎಂದು ಅವರು ಕಿವಿಮಾತು ಹೇಳಿದ್ದಾರೆ.
“ನಾನಿದನ್ನು ಯಾಕೆ ಹೇಳುತ್ತಿದ್ದೇನೆಂದರೆ, ಕಳೆದ ಕೆಲವು ವರ್ಷಗಳಿಂದ ನಾವು ನಿಂದನಾತ್ಮಕ ಭಾಷೆಯನ್ನು ಭಾವಿಸುವ ರೀತಿಯಲ್ಲಿ ಬದಲಾವಣೆಯಾಗಿದೆ. ಕೆಲವು ವ್ಯಕ್ತಿಗಳಿಗೆ ನಿಂದನಾತ್ಮಕ ಭಾಷೆಯನ್ನು ಬಳಸುವುದು ಎಷ್ಟು ಸಾಮಾನ್ಯವಾಗಿದೆಯೆಂದರೆ, ಅದನ್ನೂ ಕೂಡಾ ತಾಳ್ಮೆಯನ್ನಾಗಿ ಪರಿಗಣಿಸಲಾಗುತ್ತಿದೆ. ಇದನ್ನು ಅರ್ಥ ಮಾಡಿಕೊಳ್ಳದೆ ಜನರು ತಮ್ಮ ಪ್ರತಿ ದಿನದ ಮಾತುಕತೆಯಲ್ಲಿ ಕೆಳ ದರ್ಜೆಯ ಹಾಗೂ ಅಗೌರವಯುತ ಭಾಷೆಯನ್ನು ಬಳಸುತ್ತಿದ್ದಾರೆ” ಎಂದೂ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.