ನೂತನ ‘ಪ್ರಜಾಸೇವೆ’ ಇಲಾಖೆ ರಚನೆಗೆ ಸಂಪುಟ ನಿರ್ಧಾರ: ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಘೋಷಣೆ
ಬೆಂಗಳೂರು : ಜನರ ಸಮಸ್ಯೆಗಳನ್ನು ಆಲಿಸಿ, ಕಾನೂನು ಚೌಕಟ್ಟಿನಲ್ಲಿ ಶೀಘ್ರದಲ್ಲಿಯೇ ಪರಿಹಾರ ಒದಗಿಸುವ ನಿಟ್ಟಿನಲ್ಲಿ ರಾಜ್ಯದಲ್ಲಿ ನೂತನವಾಗಿ ‘ಪ್ರಜಾಸೇವೆ’ ಇಲಾಖೆ ರಚನೆ ಮಾಡಲು ಸಚಿವ ಸಂಪುಟದಲ್ಲಿ ನಿರ್ಧರಿಸಲಾಗಿದೆ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.
ಗುರುವಾರ ವಿಧಾನಸೌಧದಲ್ಲಿ ತಮ್ಮ ಅಧ್ಯಕ್ಷತೆಯಲ್ಲಿ ನಡೆದ ಸಂಪುಟ ಸಭೆಯ ಬಳಿಕ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಡಿ.ಕೆ.ಶಿವಕುಮಾರ್, ರಾಜ್ಯದಲ್ಲಿ ಮೊದಲ ಬಾರಿಗೆ ‘ಪ್ರಜಾ ಸೇವೆ’ ಇಲಾಖೆ ಚಾಲ್ತಿಗೆ ಬರುತ್ತಿದ್ದು, ಇದಕ್ಕೆ ಓರ್ವ ಮಂತ್ರಿ ಸಂಪೂರ್ಣ ಜವಾಬ್ದಾರಿಯನ್ನು ವಹಿಸಲಿದ್ದಾರೆ. ಜತೆಗೆ, ಕಾರ್ಯದರ್ಶಿಯಾಗಿ ಐಎಎಸ್ ಅಧಿಕಾರಿಯೊಬ್ಬರು ಒಳಗೊಂಡಂತೆ ವಿವಿಧ ದರ್ಜೆಯ ಅಧಿಕಾರಿಗಳನ್ನು ನೇಮಿಸಲಾಗುವುದು. ಅದರಲ್ಲೂ ಪ್ರಮುಖವಾಗಿ ಪ್ರತಿ ಜಿಲ್ಲೆಗೆ ಆಯಾ ಉಸ್ತುವಾರಿ ಸಚಿವರು ತಿಂಗಳಿನ ಮೊದಲನೆ ಮತ್ತು ಮೂರನೆ ಶನಿವಾರ ಕಡ್ಡಾಯವಾಗಿ ‘ಪ್ರಜಾ ಸೇವೆ’ ಇಲಾಖೆ ಕಾರ್ಯ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಲಿದ್ದಾರೆ ಎಂದು ಹೇಳಿದರು.
ಪ್ರತಿ ವಿಧಾನಸಭಾ ಕ್ಷೇತ್ರದ ಶಾಸಕರ ತಂಡದೊಂದಿಗೆ ಜಿಲ್ಲಾ ಉಸ್ತುವಾರಿ ಸಚಿವರು ‘ಪ್ರಜಾ ಸೇವೆ’ ಇಲಾಖೆಯ ಅಭಿಯಾನದಲ್ಲಿ ಭಾಗಿಯಾಗಬೇಕು. ಜನರು ತಮ್ಮ ಸಮಸ್ಯೆಗಳನ್ನು ನೇರವಾಗಿ ‘ಪ್ರಜಾ ಸೇವೆ’ ಇಲಾಖೆಗೆ ಅರ್ಜಿ ಮೂಲಕ ಸಲ್ಲಿಸಬಹುದು. ಆನಂತರ ಪರಿಶೀಲನೆ ನಡೆಸಿ ಕಾನೂನು ರೀತ್ಯಾ ಸರಕಾರ ಪರಿಹಾರ ಹಾಗೂ ಸಮಸ್ಯೆ ಬಗೆಹರಿಸಲಿದೆ. ಇದೊಂದು ಜವಾಬ್ದಾರಿಯುತ ಇಲಾಖೆ ಆಗಿದ್ದು, ಪ್ರತಿಭಟನೆಗಳು, ಸಮಸ್ಯೆ, ದೂರುಗಳನ್ನು ನೇರವಾಗಿ ಸರಕಾರಕ್ಕೆ ಮುಟ್ಟಿಸಬಹುದಾಗಿದೆ ಎಂದು ಅವರು ವಿವರಿಸಿದರು.
ಪ್ರತಿ ತಿಂಗಳು ನಾನು ಸಹ ‘ಪ್ರಜಾ ಸೇವೆ’ ಅಭಿಯಾನದಲ್ಲಿ ಪಾಲ್ಗೊಳ್ಳುತ್ತೇನೆ ಎಂದ ಡಿ.ಕೆ.ಶಿವಕುಮಾರ್ ಅವರು, ಜನರು ಸಮಸ್ಯೆಗಳ ಅರ್ಜಿ ಸಲ್ಲಿಸಲು ಸಂಬಂಧಪಟ್ಟ ಇಲಾಖೆಗಳ ಶಾಖೆಗಳನ್ನು ಆರಂಭಿಸುತ್ತೇವೆ. ಅಲ್ಲಿ ಅರ್ಜಿಗಳ ಪ್ರಕ್ರಿಯೆ ನಡೆಯಲಿದೆ. ಒಟ್ಟಿನಲ್ಲಿ ಸರಕಾರವೇ ಜನರ ಮನೆಯ ಬಾಗಿಲಿಗೆ ಬರಲಿದೆ. ಇಲಾಖೆ ಸಚಿವರು, ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲಾಧಿಕಾರಿಗಳೇ ನಿಮ್ಮ ದೂರು ಸ್ವೀಕಾರ ಮಾಡಿ ಪರಿಹಾರ ನೀಡಲಿದ್ದಾರೆ ಎಂದು ತಿಳಿಸಿದರು.