×
Ad

ವಿದ್ಯುತ್ ಸರಬರಾಜು ಖಾಸಗೀಕರಣ ವಿಚಾರ: ಸರಕಾರದ ಸಮ್ಮತಿ ಇಲ್ಲ, ಆಕ್ಷೇಪಣೆ ಸಲ್ಲಿಸಲು ಸಿಎಂ ಸೂಚನೆ

Update: 2026-07-02 20:39 IST

ಬೆಂಗಳೂರು : ವಿದ್ಯುತ್ ಸರಬರಾಜು ಖಾಸಗೀಕರಣಕ್ಕೆ ರಾಜ್ಯ ಸರಕಾರ ಸಮ್ಮತಿ ಸೂಚಿಸಿಲ್ಲ. ಹಾಗಾಗಿ, ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗಕ್ಕೆ ಎಲ್ಲ ಎಸ್ಕಾಂಗಳು ಆಕ್ಷೇಪಣೆ ಸಲ್ಲಿಸಲು ಸೂಚಿಸಲಾಗಿದೆ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.

ಗುರುವಾರ ವಿಧಾನಸೌಧದಲ್ಲಿ ತಮ್ಮ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯ ಬಳಿಕ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ವಿದ್ಯುತ್ ವಿತರಣೆಯನ್ನು ಖಾಸಗಿಯವರಿಗೆ ನೀಡುವ ವಿಚಾರವಾಗಿ ಎಲ್ಲ ಎಸ್ಕಾಂಗಳು ತಮ್ಮ ಆಕ್ಷೇಪಣೆಯನ್ನು ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗಕ್ಕೆ ಸಲ್ಲಿಸಬೇಕು ಎಂದು ತಿಳಿಸಿದ್ದೇನೆ ಎಂದರು.

ಈ ಹಿಂದೆ ಬಿಜೆಪಿ ಸರಕಾರ ವಿದ್ಯುತ್ ವಿಚಾರದಲ್ಲಿ ಖಾಸಗಿಯವರಿಗೆ ಪರವಾನಿಗೆ ಪಡೆಯಲು ಅವಕಾಶ ನೀಡಿತ್ತು. ಅದರ ಆಧಾರದ ಮೇಲೆ ಟಾಟಾ ಸಂಸ್ಥೆಯವರು ಅರ್ಜಿ ಹಾಕಿದ್ದಾರೆ. ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ ಈ ಬಗ್ಗೆ ತೀರ್ಮಾನ ಮಾಡಲಿದೆ. ನಮ್ಮ ಸರಕಾರದ ತೀರ್ಮಾನವನ್ನು ಎಸ್ಕಾಂಗಳಿಗೆ ತಿಳಿಸಲಾಗಿದೆ. ಖಾಸಗಿಯವರು ಸರಕಾರಕ್ಕೆ ಅರ್ಜಿ ಹಾಕಿಲ್ಲ. ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗಕ್ಕೆ ಅರ್ಜಿ ಹಾಕಿದ್ದಾರೆ. ಹೀಗಾಗಿ, ಆಯೋಗ ಎಸ್ಕಾಂಗಳಿಗೆ ತಿಳಿಸಿದ್ದು, ಎಸ್ಕಾಂಗಳು ನಮ್ಮ ಬಳಿ ಚರ್ಚೆ ಮಾಡಿರುವ ಹಿನ್ನೆಲೆಯಲ್ಲಿ ಇದಕ್ಕೆ ನಮ್ಮ ಸಹಮತವಿಲ್ಲ ಎಂದು ತಿಳಿಸಿ ಎಂದು ಎಸ್ಕಾಂಗಳಿಗೆ ಸೂಚಿಸಿದ್ದೇನೆ ಎಂದು ಅವರು ತಿಳಿಸಿದರು.

ಆ.15ರವರೆಗೆ ಅವಕಾಶ: ಒಸಿ ಸಿಸಿ ಸಂಬಂಧಿಸಿದಂತೆ ವಿನಾಯಿತಿ ನೀಡಬೇಕು ಎಂದು ರಾಜ್ಯದ ಎಲ್ಲ ಕಡೆಗಳಿಂದ ಮನವಿ ಬಂದಿತ್ತು. ಇದಕ್ಕೆ ನಾವು ಅವಕಾಶ ಕಲ್ಪಿಸಿದ್ದೆವು. ಆದರೆ ಕೆಲವರು ನಾವು ಕಟ್ಟಡ ನಿರ್ಮಾಣ ಮಾಡಿದ್ದು, ವಿದ್ಯುತ್ ಸಂಪರ್ಕಕ್ಕೆ ಅರ್ಜಿ ಹಾಕಿಲ್ಲ ಎಂದು ಮನವಿ ಮಾಡಿಕೊಂಡಿರುವ ಹಿನ್ನೆಲೆಯಲ್ಲಿ, ಯಾರೆಲ್ಲಾ ವಸತಿ ಕಟ್ಟಡ ನಿರ್ಮಾಣ ಮಾಡಿದ್ದಾರೆ, ಅವರ ದಾಖಲೆ, ಫೋಟೋಗಳೊಂದಿಗೆ ವಿದ್ಯುತ್ ಸಂಪರ್ಕಕ್ಕಾಗಿ ಅರ್ಜಿ ಹಾಕಲು ಆಗಸ್ಟ್ 15ರವರೆಗೆ ಅವಕಾಶ ಕಲ್ಪಿಸಿದ್ದೇವೆ ಎಂದು ಅವರು ಹೇಳಿದರು.

ವಾಣಿಜ್ಯ ಕಟ್ಟಡಗಳಿಗೂ ವಿನಾಯಿತಿ ನೀಡಿ ಎಂಬ ಬೇಡಿಕೆ ಬಗ್ಗೆ ಪ್ರತಿಕ್ರಿಯಿಸಿದ ಅವರು, ಬೇಕಾದಷ್ಟು ಬೇಡಿಕೆಗಳು ಇರುತ್ತವೆ. ಆದರೆ ನಾನು ಸುಪ್ರೀಂ ಕೋರ್ಟ್ ಆದೇಶವನ್ನು ಗಮನದಲ್ಲಿಟ್ಟುಕೊಂಡು ಕೆಲಸ ಮಾಡಬೇಕಲ್ಲವೇ ಎಂದು ತಿಳಿಸಿದರು.

 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News