ನಮ್ಮ ಪಕ್ಷದಲ್ಲಿ ಹೈಕಮಾಂಡ್ ಸುಪ್ರೀಂ; ಸಚಿವ ಸಂಪುಟದ ಬಗ್ಗೆ ನಮ್ಮ ನಾಯಕರು ತೀರ್ಮಾನ ಮಾಡುತ್ತಾರೆ : ಸಿಎಂ ಡಿ.ಕೆ.ಶಿವಕುಮಾರ್

"ಮಂಗಳವಾರ ನಿಗದಿಯಾಗಿದ್ದ ಸಭೆ ನಡೆಯಲಿಲ್ಲ"

Update: 2026-07-22 12:33 IST

ಹೊಸದಿಲ್ಲಿ: "ನಮ್ಮ ಪಕ್ಷದಲ್ಲಿ ಹೈಕಮಾಂಡ್ ಸುಪ್ರೀಂ. ನಮ್ಮ ಅಭಿಪ್ರಾಯ ಪಡೆದು ತೀರ್ಮಾನ ಮಾಡುತ್ತಾರೆ. ಹೊಸ ಮುಖ, ಜಿಲ್ಲೆ ಹಾಗೂ ಪ್ರಾಂತ್ಯವಾರು ಲೆಕ್ಕಾಚಾರ ಮಾಡಿ ತೀರ್ಮಾನ ಮಾಡುತ್ತಾರೆ" ಎಂದು ಸಿಎಂ ಡಿ.ಕೆ.ಶಿವಕುಮಾರ್ ಅವರು ತಿಳಿಸಿದರು.

ಹೊಸದಿಲ್ಲಿಯ ಕರ್ನಾಟಕ ಭವನದಲ್ಲಿ ಸಿಎಂ ಶಿವಕುಮಾರ್ ಅವರು ಮಾಧ್ಯಮಗಳ ಜೊತೆ ಮಾತನಾಡಿದರು.

"ಸಚಿವ ಸಂಪುಟ ವಿಸ್ತರಣೆ ಮಾಡಿ, ಬುಧವಾರ ನೂತನ ಸಚಿವರ ಪ್ರಮಾಣವಚನ ಕಾರ್ಯಕ್ರಮ ಮಾಡಲು ರಾಜ್ಯಪಾಲರ ಅನುಮತಿ ಪಡೆಯಲಾಗಿತ್ತು. ಆದರೆ ಮಂಗಳವಾರ ನಿಗದಿಯಾಗಿದ್ದ ಸಭೆ ಕಾರಣಾಂತರಗಳಿಂದ ನಡೆಯಲಿಲ್ಲ. ಇಂದು ನಮ್ಮ ನಾಯಕರು ಪ್ರತಿಭಟನೆ ಮಾಡುತ್ತಿರುವಾಗ ಅವರನ್ನು ಬಂಧಿಸಿದ್ದಾರೆ. ನನ್ನನ್ನು ಪೋಲೀಸರು ಎಳೆದಾಡಲು ಮುಂದಾದಾಗ ರಾಹುಲ್ ಗಾಂಧಿ ಅವರು, ಅವರು ಮುಖ್ಯಮಂತ್ರಿ ಅವರನ್ನು ಮುಟ್ಟಬಾರದು ಎಂದು ತಾಕೀತು ಮಾಡಿದರು. ನಂತರ ನನಗೆ ಮನವಿ ಮಾಡಿದರು, ನಾನು ಪಕ್ಕಕ್ಕೆ ಬಂದೆ" ಎಂದು ವಿವರಿಸಿದರು.

ರಾಹುಲ್ ಗಾಂಧಿ ಅವರು ಸಚಿವ ಸಂಪುಟಕ್ಕೆ ಮಾನದಂಡ ವಿಧಿಸಿರುವ ಬಗ್ಗೆ ಹಾಗೂ ಹೊಸ ಪ್ರಯೋಗದ ಬಗ್ಗೆ ಕೇಳಿದಾಗ, "ಸಚಿವ ಸಂಪುಟ ವಿಸ್ತರಣೆ ಬಗ್ಗೆ ಯಾರಾದರೂ ಮಾಧ್ಯಮಗಳ ಮುಂದೆ ಚರ್ಚೆ ಮಾಡುತ್ತಾರಾ? ಬೋಸರಾಜು ಶಾಸಕರಾಗದಿದ್ದರೂ ಮಂತ್ರಿ ಮಾಡಿಕೊಳ್ಳಲಿಲ್ಲವೇ? ಕೃಷ್ಣ ಅವರ ಸರ್ಕಾರದಲ್ಲಿ ಚಂದ್ರಶೇಖರ್ ಅವರನ್ನು ಆಯ್ಕೆ ಮಾಡಲಿಲ್ಲವೇ? ಮಾಧ್ಯಮದವರನ್ನು ಎಂಎಲ್ಸಿ, ಎಂಪಿ ಮಾಡಿಕೊಂಡಿಲ್ಲವೇ?" ಎಂದು ತಿಳಿಸಿದರು.

ಅಚ್ಚರಿ ಅಂಶ ಇದೆಯೇ ಎಂದು ಕೇಳಿದಾಗ, "ಕಾಂಗ್ರೆಸ್ ಪಕ್ಷಕ್ಕೆ ಒಳ್ಳೆಯದಾಗುವುದಾದರೆ ಏನು ಬೇಕಾದರೂ ಮಾಡಬೇಕಾಗುತ್ತದೆ" ಎಂದು ತಿಳಿಸಿದರು.

ಸಚಿವ ಸಂಪುಟ ವಿಚಾರಕ್ಕೆ ನೀವು ಮತ್ತೆ ದೆಹಲಿಗೆ ಬರುತ್ತೀರಾ ಎಂದು ಕೇಳಿದಾಗ, "ನಮ್ಮ ನಾಯಕರು ನಮ್ಮ ಜೊತೆ ಚರ್ಚೆ ಮಾಡುತ್ತಾರೆ. ಅಭಿಪ್ರಾಯ ಪಡೆಯುತ್ತಾರೆ. ಸಿದ್ದರಾಮಯ್ಯ ಅವರ ಸರಕಾರ ಇದ್ದಾಗಲೂ ಇದೇ ರೀತಿ ಮಾಡಿದ್ದರು. ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ, ಸಿದ್ದರಾಮಯ್ಯ, ಹರಿಪ್ರಸಾದ್ ಅವರು ಸೇರಿ ಚರ್ಚೆ ಮಾಡಿದ್ದೇವೆ" ಎಂದರು.

ಸಚಿವ ಸ್ಥಾನ ಖಾಲಿ ಬಿಡಲು ಇಷ್ಟವಿಲ್ಲ

ಬಾಕಿ ಇರುವ ಎಲ್ಲಾ 20 ಸ್ಥಾನ ತುಂಬುತ್ತೀರಾ ಎಂದು ಕೇಳಿದಾಗ, "ನನಗೆ ಗೊತ್ತಿಲ್ಲ. ಎಲ್ಲಾ ಸ್ಥಾನ ತುಂಬಲು ನಾನು ಬಯಸುತ್ತೇನೆ. ಖಾಲಿ ಇಟ್ಟುಕೊಳ್ಳುವುದರಲ್ಲಿ ಅರ್ಥ ಇಲ್ಲ. ಚೀಫ್ ವಿಪ್, ವಿಧಾನ ಪರಿಷತ್ ಸಭಾಪತಿ, ಸ್ಪೀಕರ್ ಸ್ಥಾನಗಳನ್ನೂ ತುಂಬಬೇಕು" ಎಂದರು.

"ನನಗೆ ಇಂದೇ ಅವಕಾಶ ನೀಡಿದರೆ ಇಂದೇ ಪಟ್ಟಿ ಅಂತಿಮಗೊಳಿಸಲು ಸಿದ್ಧ. ಈ ವಿಚಾರ ಮುಂದೂಡಲು ನನಗೂ ಇಷ್ಟವಿಲ್ಲ. ನಾನು ಸೋಮವಾರವೇ ಬರಬೇಕಾಗಿತ್ತು. ಹಾಸನದಲ್ಲಿ ನನ್ನ ಕರ್ತವ್ಯ ಮಾಡಬೇಕಾಗಿತ್ತು. ಹೀಗಾಗಿ ನಾನು ಮಂಗಳವಾರ ದೆಹಲಿಗೆ ಬಂದಿರುವೆ. ಮಂಗಳವಾರ ರಾತ್ರಿ ಸಭೆ ಸೇರುವ ನಿರ್ಧಾರ ಆಗಿತ್ತು. ಆದರೆ ನಮ್ಮ ನಾಯಕರನ್ನು ಬಂಧಿಸಿದ್ದಾರೆ. ಅವರು ಬಂದ ಬಳಿಕ ಚರ್ಚೆ ಮಾಡಲಾಗುವುದು" ಎಂದು ತಿಳಿಸಿದರು.

 

ವಿದ್ಯಾರ್ಥಿಗಳ ಭಾವನೆಗೆ ಕಾಂಗ್ರೆಸ್ ಸ್ಪಂದಿಸಿದೆ

"ಭಾರತದ ಭವಿಷ್ಯ ಯುವ ವಿದ್ಯಾರ್ಥಿಗಳ ಮೇಲೆ ನಿಂತಿದೆ. 25 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಕಷ್ಟಪಟ್ಟು ತಯಾರಿ ಮಾಡಿಕೊಂಡಿರುವಾಗ, ಪ್ರರೀಕ್ಷೆ ಪ್ರಶ್ನೆ ಪತ್ರಿಕೆ ಸೋರಿಕೆ ಅವರ ಕನಸನ್ನು ನಾಶ ಮಾಡಿದೆ. ಹೀಗಾಗಿ ತಮ್ಮ ನೋವನ್ನು ವ್ಯಕ್ತಪಡಿಸಲು ವಿದ್ಯಾರ್ಥಿಗಳು ಪ್ರತಿಭಟನೆ ಮಾಡುತ್ತಾರೆ. ಆದರೆ ಪ್ರತಿಭಟನೆ ಮಾಡುವವರನ್ನು ಯಾವ ದೃಷ್ಟಿಯಲ್ಲಿ ನೋಡಲಾಗುತ್ತಿದೆ ಎಂಬುದು ಮುಖ್ಯ. ಕಾಂಗ್ರೆಸ್ ನಾಯಕರು ವಿದ್ಯಾರ್ಥಿಗಳ ಭಾವನೆಗೆ ಸ್ಪಂದಿಸಿದೆ" ಎಂದು ತಿಳಿಸಿದರು.

ಕೇಂದ್ರ ಸಚಿವರು ರಾಜೀನಾಮೆ ನೀಡಬೇಕು; ವಿದ್ಯಾರ್ಥಿಗಳಿಗೆ ನ್ಯಾಯ ಕೊಡಬೇಕು

"ದೇಶದಾದ್ಯಂತ ಯುವಕರು ಸ್ವಯಂ ಪ್ರೇರಿತರಾಗಿ ಶಾಂತಿಯುತವಾಗಿ ಪ್ರತಿಭಟನೆ ಮಾಡುತ್ತಿದ್ದರು. ದೇಶದ ಮುಂದಿನ ಭವಿಷ್ಯದ ಮೇಲೆ ನೀವು ಮಾಡುತ್ತಿರುವ ಹಲ್ಲೆ, ನಿಮ್ಮ ಮಕ್ಕಳ ಮೇಲೆ ಮಾಡುವ ಹಲ್ಲೆಯಲ್ಲವೇ? ಕಾಂಗ್ರೆಸ್ ಪಕ್ಷ ಇದರ ವಿರುದ್ಧ ಧ್ವನಿ ಎತ್ತಿದೆ. ಇದು ಭಾರತದ ಯುವಕರ ಬದುಕಿನ ಪ್ರಶ್ನೆ. ಯುವಕರು, ವಿದ್ಯಾರ್ಥಿಗಳು, ಪೋಷಕರು ಈಗ ಹೋರಾಟ ಮಾಡುತ್ತಿದ್ದಾರೆ. ಮಕ್ಕಳ ಭವಿಷ್ಯ ಉತ್ತಮವಾಗಿರಬೇಕು ಎಂಬುದು ಎಲ್ಲರ ಆಸೆಯಲ್ಲವೇ? ನೀವೆಲ್ಲರೂ ಹೋರಾಟದ ಸ್ವರೂಪ ನೋಡಿದ್ದೀರಿ. ವಿದ್ಯಾರ್ಥಿಗಳಿಗೆ ನ್ಯಾಯ ಒದಗಿಸಲು ರಾಹುಲ್ ಗಾಂಧಿ ಅವರು ಹೋರಾಟ ಮಾಡುತ್ತಿದ್ದಾರೆ. ಪ್ರಿಯಾಂಕಾ ಗಾಂಧಿ ಅವರು ಕೂಡ ಹೋರಾಟದಲ್ಲಿ ಭಾಗಿಯಾಗಿದ್ದಾರೆ. ಇದೇ ಈ ದೇಶದಲ್ಲಿ ಗಾಂಧಿ ಕುಟುಂಬದ ಶಕ್ತಿ. ನಮ್ಮ ಸಂಸತ್ ಸದಸ್ಯರನ್ನು ಬಂಧಿಸಿರುವುದನ್ನು ಕರ್ನಾಟಕ ರಾಜ್ಯ ಸೇರಿದಂತೆ ಇಡೀ ದೇಶ ಖಂಡಿಸುತ್ತದೆ" ಎಂದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News