×
Ad

ಸಿಎಂ ಡಿ.ಕೆ. ಶಿವಕುಮಾರ್‌ ಗೆ ಕನಕಪುರದಲ್ಲಿ ಭವ್ಯ ಸ್ವಾಗತ

ನನಗೆ ಜಾತಿ-ಧರ್ಮ ಬೇಧವಿಲ್ಲ ಎಂದ ಸಿಎಂ

Update: 2026-06-08 00:10 IST

ಕನಕಪುರ: ಮುಖ್ಯಮಂತ್ರಿಯಾದ ನಂತರ ಮೊದಲ‌‌ ಬಾರಿಗೆ ಸ್ವಕ್ಷೇತ್ರಕ್ಕೆ ಭೇಟಿ ನೀಡಿದ ಡಿ.ಕೆ.ಶಿವಕುಮಾರ್ ಅವರಿಗೆ ಅಭಿಮಾನಿಗಳಿಂದ ಅಭೂತಪೂರ್ವ ಸ್ವಾಗತ ದೊರೆಯಿತು. 

"ನಿಮ್ಮ ಪ್ರೀತಿಗೆ ಆಭಾರಿ. ನಿಮ್ಮಿಂದ ನಾನು ವಿಧಾನಸೌಧದ ಮೂರನೇ ಮಹಡಿಯಲ್ಲಿದ್ದೇನೆ. ಈ ರಾಜ್ಯದ ಮುಖ್ಯಮಂತ್ರಿಯಾಗಿದ್ದೇನೆ.‌ ನಿಮಗೆಲ್ಲರಿಗೂ ಕೋಟಿ, ಕೋಟಿ ವಂದನೆಗಳು" ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಹೇಳಿದರು.

"ನಿಮ್ಮ ಪಾಲಿಗೆ ನಾನು ಸಿಎಂ ಅಲ್ಲ, ಸೇವಕ. ನನ್ನ ಕೊನೆಯುಸಿರು ಇರುವವರೆಗೂ ನಿಮ್ಮ ಮನೆ ಮಗನಾಗಿ ಸೇವೆ ಮಾಡುವೆ. ಸ್ವಂತ ಮಗನಂತೆ ನನ್ನನ್ನು ಬೆಳೆಸಿದ್ದೀರಿ. ನನ್ನ ಕ್ಷೇತ್ರದ ಪ್ರತಿಯೊಬ್ಬರಿಗೂ ಸಾಷ್ಟಾಂಗ ನಮಸ್ಕಾರಗಳು. ನಾನು ಈ ಕ್ಷೇತ್ರ ದಾಟಿ ಹೋದಾಗ ಮಾತ್ರ ಮುಖ್ಯಮಂತ್ರಿ. ‌ಇಲ್ಲಿಗೆ ಬಂದಾಗ ನಿಮ್ಮ ಮನೆ ಸೇವಕ" ಎನ್ನುವ ಮಾತನ್ನು ಭೇಟಿ ಕೊಟ್ಟ ಪ್ರತಿ ಊರಿನಲ್ಲೂ ಒತ್ತಿ, ಒತ್ತಿ ಹೇಳಿದರು.

"ನನ್ನ ಶಕ್ತಿ ನೀವೇ, ಬದುಕು ನೀವೇ, ಉಸಿರು ನೀವೇ. ನನ್ನ ಬದುಕಿನ ಕಷ್ಟ ಕಾಲದಲ್ಲಿ ನೀವು ನನಗೆ ನೆರಳಾಗಿದ್ದೀರಿ. ನಿಮ್ಮ ಸೇವಕನಾಗಿ ಮುಂದುವರಿದು, ಋಣ ತೀರಿಸುತ್ತೇನೆ" ಎಂದರು.

ಕನಕಪುರ ರಸ್ತೆಯ ರೇಷ್ಮೆ ಸಂಸ್ಥೆ ಮೆಟ್ರೋ ನಿಲ್ದಾಣದಿಂದಲೇ ರಸ್ತೆಯ ಇಕ್ಕೆಲಗಳಲ್ಲಿ ಕಿಕ್ಕಿರಿದು ನಿಂತಿದ್ದ ಸಾರ್ವಜನಿಕರು ಡಿ.ಕೆ. ಶಿವಕುಮಾರ್ ಅವರಿಗೆ ಜೈಕಾರ ಹಾಕಿದರು. ಪಟಾಕಿ ಸಿಡಿಸಿ ಸಂಭ್ರಮಿಸಿದರು. ದಾರಿಯುದ್ದಕ್ಕೂ ಶುಭಾಶಯ ಕೋರುವ ಬ್ಯಾನರ್ ಗಳು,‌ ಫ್ಲೆಕ್ಸ್ ಗಳು ಕಾಂಗ್ರೆಸ್ ಪಕ್ಷದ ಬಾವುಟಗಳು ರಾರಾಜಿಸಿದವು.

ಕಗ್ಗಲೀಪುರ, ತುಂಗಣಿ, ನಾರಾಯಣಪುರಗಳಲ್ಲಿ ಅಭಿಮಾನಿಗಳು ಸುಮಾರು 500 ಕೆಜಿಗೂ ಹೆಚ್ಚು ಸೇಬು ಬಳಸಿ ಬೃಹತ್ ಹಾರಗಳನ್ನು ಮಾಡಿಸಿ ಡಿ.ಕೆ. ಶಿವಕುಮಾರ್ ಅವರ ಮೇಲಿನ ಅಭಿಮಾನ ಮೆರೆದರು. 

"ನನಗೆ ಜಾತಿ ಧರ್ಮ ಬೇಧವಿಲ್ಲ, ಎಲ್ಲರ ಮನೆ‌ ಮಗ ನಾನು"

"2028 ಕ್ಕೆ ಮತ್ತೆ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಲು ಕ್ಷೇತ್ರದ ಜನ ಪ್ರಾರ್ಥನೆ ಮಾಡಬೇಕು. ಕರ್ನಾಟಕ ಸರ್ವ ಜನಾಂಗದ ಶಾಂತಿಯ ತೋಟ. ನನಗೆ ಆ ಧರ್ಮ ಈ ಧರ್ಮ, ಆ ಜಾತಿ ಈ ಜಾತಿ ಎನ್ನುವ ಬೇದವಿಲ್ಲ. ಹಾರೋಹಳ್ಳಿಯ ಮುದ್ದೆಗೌಡರು, ಅಲಿಸಾಬ್, ಪುಟ್ಟೇಗೌಡರು, ಸತ್ತಾರ್ ಸಾಹೇಬರು ಹೀಗೆ ಅನೇಕರು ನನ್ನನ್ನು ಮನೆ ಮಗನಾಗಿ ಬೆಳೆಸಿದರು. ಪಿಜಿಆರ್ ಸಿಂಧ್ಯಾ ಅವರು ನನ್ನ ಜೊತೆಯಾಗಿ ನಿಂತಿದ್ದಾರೆ. ‌ನನ್ನ ವಿರುದ್ದ ಸ್ಪರ್ಧಿಸಿದ್ದ ನಾರಾಯಣ ಗೌಡರು ಇಂದೂ ನನಗೆ ಬೆಂಬಲವಾಗಿದ್ದಾರೆ" ಎಂದರು.

ಟಿ.ಬೇಕುಪ್ಪೆಯಲ್ಲಿ ಮಾತನಾಡಿದ ಅವರು, "ಮನುಷ್ಯ ಹುಟ್ಟುವಾಗ ನಾಲ್ಕು ಋಣದಲ್ಲಿ ಹುಟ್ಟುತ್ತಾನೆ. ತಂದೆ ತಾಯಿ, ಗುರು, ದೇವರ ಹಾಗೂ ಸಮಾಜ. ನಾನು ನಿಮ್ಮ ಋಣದಲ್ಲಿದ್ದೇನೆ. ನಿಮ್ಮ ಋಣ ತೀರಿಸುವ ಕೆಲಸ ಮಾಡುತ್ತೇನೆ. ನಿಮ್ಮ ತಾಲ್ಲೂಕಿನ ಮಗ, ನಿಮ್ಮ ಸೇವಕ. ಈಗ 136 ಸ್ಥಾನಗಳನ್ನು ಗೆಲ್ಲಿಸಿ 2028 ಕ್ಕೆ ಪಕ್ಷವು ಮತ್ತೊಮ್ಮೆ ಅಧಿಕಾರಕ್ಕೆ ಏರುವಂತೆ ಮಾಡುವ ಜವಾಬ್ದಾರಿ ನಿಮ್ಮ ಬಳಿಯಿದೆ. ರಾಮನಗರ ಹಾಗೂ ಹಾರೊಹಳ್ಳಿಯ ಪ್ರತಿ ಬಡವರ ತಲೆಯ ಮೇಲೂ ಸ್ವಂತ ಸೂರು ಇರಬೇಕು ಎಂಬುದು ನನ್ನ ಆಸೆ. ಈ ಆಸೆಯನ್ನು ಆದಷ್ಟು ಬೇಗ ಸಾಕಾರಗೊಳಿಸಲಾಗುವುದು" ಎಂದು ಹೇಳಿದರು.

"ನಾರಾಯಣಪುರ, ಸಂತೆ ಕೋಡಿಹಳ್ಳಿ, ಹೆರಿಂದ್ಯಾಪನಹಳ್ಳಿಯಲ್ಲಿ ಮಾತನಾಡಿದ ಡಿ.ಕೆ.ಶಿವಕುಮಾರ್ ಅವರು, "ತಿಹಾರ್ ಜೈಲಿನಲ್ಲಿ ಇದ್ದಾಗ ನನ್ನ ಕ್ಷೇತ್ರದ ಜನರು ಕಣ್ಣೀರು ಸುರಿಸಿ ಪ್ರಾರ್ಥನೆ ಮಾಡಿದರು. ಆ ಪ್ರಾರ್ಥನೆ ನನ್ನನ್ನು ಕಾಪಾಡಿದೆ. ನೀವು ನನ್ನ ಪರವಾಗಿ ಕೊರಗಿದ್ದು ನನ್ನ ರಕ್ಷಿಸಿದೆ. ನನಗೆ ಹಣದ, ಅಧಿಕಾರದ ಅವಶ್ಯಕತೆ ಬೇಕಾಗಿಲ್ಲ. ನಿಮ್ಮ ಜೀವನದಲ್ಲಿ ಬದಲಾವಣೆ ಉಂಟಾಗಬೇಕು ಎಂಬುದೇ ನನ್ನ ಧ್ಯೇಯ" ಎಂದರು.


Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News