ಪ್ರದೂಷ್ ರಾವ್ ಅರ್ಜಿಗೆ ವಿರೋಧ ದಾಖಲಿಸಲು ದರ್ಶನ್‌ಗೆ ಅ‌ನುಮತಿ ನಿರಾಕರಣೆ; ಸೆಷನ್ಸ್ ಕೋರ್ಟ್ ಆದೇಶ ಎತ್ತಿಹಿಡಿದ ಹೈಕೋರ್ಟ್

Update: 2026-08-13 19:46 IST

ಬೆಂಗಳೂರು : ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಕ್ಷಮಾಪಣೆ ನೀಡಿದರೆ ಮಾಫಿ ಸಾಕ್ಷಿಯಾಗಲು ಸಿದ್ಧವಿರುವುದಾಗಿ ಆರೋಪಿ ಪ್ರದೂಷ್‌ ರಾವ್‌ (ಎ14) ಸಲ್ಲಿಸಿರುವ ಅರ್ಜಿಗೆ ವಿರೋಧ ದಾಖಲಿಸಲು ಅನುಮತಿ ನಿರಾಕರಿಸಿದ್ದ ಸೆಷನ್ಸ್ ನ್ಯಾಯಾಲಯದ ಆದೇಶ ಪ್ರಶ್ನಿಸಿ ನಟ ದರ್ಶನ್ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ.

ಬೆಂಗಳೂರಿನ 58ನೇ ಹೆಚ್ಚುವರಿ ಸಿಟಿ ಸಿವಿಲ್‌ ಮತ್ತು ಸೆಷನ್ಸ್ ನ್ಯಾಯಾಲಯ ಆಗಸ್ಟ್ 10ರಂದು ಹೊರಡಿಸಿರುವ ಆದೇಶ ರದ್ದು ಕೋರಿ ಪ್ರಕರಣದ 2ನೇ ಆರೋಪಿ ದರ್ಶನ್ ಸಲ್ಲಿಸಿದ್ದ ಕ್ರಿಮಿನಲ್ ಅರ್ಜಿಯನ್ನು ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಗುರುವಾರ ವಿಚಾರಣೆ ನಡೆಸಿತು.

ಅರ್ಜಿದಾರ ದರ್ಶನ್ ಪರ ಹಿರಿಯ ವಕೀಲ ಹಷ್ಮತ್ ಪಾಷಾ ಹಾಗೂ ಪ್ರಾಸಿಕ್ಯೂಷನ್ ಪರ ವಿಶೇಷ ಸರ್ಕಾರಿ ಅಭಿಯೋಜಕ ಪಿ. ಪ್ರಸನ್ನ ಕುಮಾರ್ ಅವರ ವಾದ ಆಲಿಸಿದ ನ್ಯಾಯಪೀಠ, ಸಿಆರ್‌ಪಿಸಿ ಸೆಕ್ಷನ್ 306ರ ಅಡಿಯಲ್ಲಿ ಒಬ್ಬ ಆರೋಪಿ ಕ್ಷಮಾದಾನ ಕೋರಿ ಹಾಗೂ ಮಾಫಿ ಸಾಕ್ಷಿಯಾಗಲು ಅನುಮತಿ ಕೋರಿ ಸಲ್ಲಿಸಿದ ಅರ್ಜಿಯನ್ನು ನ್ಯಾಯಾಲಯ ಪರಿಗಣಿಸುತ್ತಿರುವ ಹಂತದಲ್ಲಿ, ಸಹ-ಆರೋಪಿಗೆ ವಾದ ಮಂಡಿಸಲು ಯಾವುದೇ ಹಕ್ಕಿಲ್ಲ ಎಂದು ಸ್ಪಷ್ಟಪಡಿಸಿ ಅರ್ಜಿ ವಜಾಗೊಳಿಸಿ ಆದೇಶಿಸಿತು.

ದರ್ಶನ್ ವಾದವೇನು?

ವಿಚಾರಣೆ ವೇಳೆ ದರ್ಶನ್ ಪರ ಹಿರಿಯ ವಕೀಲ ಹಷ್ಮತ್ ಪಾಷಾ ವಾದ ಮಂಡಿಸಿ, ಪ್ರಕರಣದಲ್ಲಿ ದೋಷಾರೋಪಣೆ ನಿಗದಿಯಾಗಿ, ವಿಚಾರಣೆ ಪ್ರಾರಂಭವಾಗಿರುವುದರಿಂದ, ಪರಿಗಣನೆಯಲ್ಲಿರುವ ಯಾವುದೇ ವಿಷಯದಲ್ಲಿ ಎಲ್ಲ ಪಕ್ಷಗಾರರಿಗೂ ವಾದ ಮಂಡಿಸಲು ಹಕ್ಕಿದೆ ಎಂದು ವಾದಿಸಿದರಲ್ಲದೆ, ಮತ್ತೊಬ್ಬ ಆರೋಪಿಗೆ ಕ್ಷಮಾದಾನ ನೀಡುವ ಪ್ರಕ್ರಿಯೆಯಿಂದ ಸಹ-ಆರೋಪಿಯನ್ನು ಹೊರಗಿಡುವಂತಿಲ್ಲ. ಪ್ರದೂಷ್ ರಾವ್ ಅರ್ಜಿಯು ಅಪರಾಧವನ್ನು ಒಪ್ಪಿಕೊಳ್ಳುವ ಬದಲು, ತಮ್ಮನ್ನು ತಾವು ಸಮರ್ಥಿಸಿಕೊಳ್ಳುವಂಥದ್ದಾಗಿದೆ. ಆದ್ದರಿಂದ, ಕ್ಷಮಾದಾನ ಹಾಗೂ ಮಾಫಿ ಸಾಕ್ಷಿಯಾಗಿ ಪರಿಗಣಿಸುವ ಪ್ರಕ್ರಿಯೆಯು ಕಾರ್ಯವಿಧಾನದ ದೋಷದಿಂದ ಕೂಡಿದೆ ಎಂದು ನ್ಯಾಯಪೀಠಕ್ಕೆ ವಿವರಿಸಿದರು.

ಈ ವಾದವನ್ನು ತಳ್ಳಿಹಾಕಿದ ನ್ಯಾಯಪೀಠ, ಅರ್ಜಿಯಲ್ಲಿರುವ ವಿಷಯದ ಸ್ವರೂಪಕ್ಕೆ ಸಂಬಂಧಿಸಿದ ವಾದವು ಅದರ ವಿಚಾರಣಾ ಅರ್ಹತೆಗೆ (ಮೆರಿಟ್) ಸಂಬಂಧಿಸಿದೆಯೇ ಹೊರತು, ಯಾವುದೇ ಕಾರ್ಯವಿಧಾನದ ದೋಷವನ್ನು ಸಾಬೀತುಪಡಿಸುವುದಿಲ್ಲ. ನಿಮ್ಮ ವಾದವು ಕಾರ್ಯವಿಧಾನದ ದೋಷಕ್ಕೆ ಸಂಬಂಧಿಸಿದ್ದಲ್ಲ, ಅದು ವಿಚಾರಣಾ ಅರ್ಹತೆಗೆ ಸಂಬಂಧಿಸಿದ್ದು. ಮಾಫಿ ಸಾಕ್ಷಿಯಾಗಲು ಅನುಮತಿ ಕೋರಿರುವ ಅರ್ಜಿಯಲ್ಲಿ ಸಮರ್ಥನೆಯ ಅಂಶಗಳು ಕಂಡುಬಂದಿವೆ ಎನ್ನುವುದು ನಿಮ್ಮ ವಾದವಾದರೆ, ಅದು ಕಾರ್ಯವಿಧಾನದ ದೋಷವನ್ನು ತೋರಿಸುವುದಿಲ್ಲ ಎಂದು ಹೇಳಿತು.

ಕ್ಷಮಾದಾನವನ್ನು ಪರಿಗಣಿಸುವ ಹಂತದಲ್ಲಿ, ಸಹ-ಆರೋಪಿಯ ವಾದವನ್ನು ಆಲಿಸುವ ಅಗತ್ಯವಿದೆ ಎಂಬುದಕ್ಕೆ ಸಂಬಂಧಿಸಿದ ಯಾವುದಾದರೂ ಒಂದು ತೀರ್ಪನ್ನು ನಮಗೆ ತೋರಿಸಿ. ಸಹಜ ನ್ಯಾಯವನ್ನು ಎಲ್ಲ ಕಡೆಗೂ ಅನ್ವಯಿಸಲು ಅನಿಯಂತ್ರಿತ ಕುದುರೆಯಂತೆ ಎಳೆಯಲಾಗದು. ಇದೇ ನ್ಯಾಯಾಲಯ 'ವಿನಯ ಕುಲಕರ್ಣಿ' ಪ್ರಕರಣದಲ್ಲಿ ಈ ಹಿಂದೆ ನೀಡಿರುವ ತೀರ್ಪಿನಲ್ಲಿ ಈ ವಿಷಯ ಈಗಾಗಲೇ ತೀರ್ಮಾನವಾಗಿದ್ದು, ಆ ತೀರ್ಪಿನಲ್ಲಿ ಮಧ್ಯಪ್ರವೇಶಿಸಲು ಸುಪ್ರೀಂಕೋರ್ಟ್ ಸಹ ನಿರಾಕರಿಸಿದೆ ಎಂದು ನ್ಯಾಯಪೀಠ ನುಡಿಯಿತು.

ಪ್ರಕರಣದ ಸಹ-ಆರೋಪಿ ಅಪ್ರೂವರ್ ಆಗುತ್ತಿರುವುದನ್ನು ಪ್ರಶ್ನಿಸಲು ಹಾಗೂ ಅದಕ್ಕಾಗಿ ಸಲ್ಲಿಸಿರುವ ಅರ್ಜಿಗೆ ಇತರ ಆರೋಪಿಯ ಅನುಮೋದನೆಯನ್ನು ಪಡೆಯಬೇಕು, ಇಲ್ಲದಿದ್ದರೆ ಆ ಅರ್ಜಿಯು ಮಾನ್ಯವಾಗುವುದಿಲ್ಲ ಎಂದು ಹೇಳಲು ಆರೋಪಿಗೆ ಯಾವುದೇ ಹಕ್ಕಿಲ್ಲ ಎಂದು ಮೌಖಿಕವಾಗಿ ಅಭಿಪ್ರಾಯಪಟ್ಟ ನ್ಯಾಯಾಲಯ, ವಿಚಾರಣಾ ನ್ಯಾಯಾಲಯ ಕ್ಷಮಾದಾನದ ಅರ್ಜಿ ಮೇಲೆ ಆದೇಶ ಹೊರಡಿಸಿದ ನಂತರ ಸೂಕ್ತ ಹಂತದಲ್ಲಿ ಅರ್ಜಿದಾರರು ತಮ್ಮ ಆಕ್ಷೇಪಣೆಗಳನ್ನು ಎತ್ತಬಹುದು. ಒಮ್ಮೆ ಕ್ಷಮಾದಾನ ನೀಡಿದ ನಂತರ, ನೀವು ಇವೆಲ್ಲವನ್ನೂ ಪ್ರಶ್ನಿಸಬಹುದು. ಆ ಹಂತ ಇನ್ನೂ ಬರಬೇಕಿದೆ ಎಂದು ಹೇಳಿತು.

ಹೈಕೋರ್ಟ್ ಆದೇಶ:

ರೇಣುಕಾಸ್ವಾಮಿ ಕೊಲೆ ಪ್ರಕರಣದ 14ನೇ ಆರೋಪಿ (ಪ್ರದೂಷ್ ರಾವ್) ಮಾಫಿ ಸಾಕ್ಷಿಯಾಗಲು ಬಯಸಿ ಅರ್ಜಿ ಸಲ್ಲಿಸಿರುವ ಹಂತದಲ್ಲಿ ತಮಗೂ ವಾದ ಮಂಡಿಸಲು ಅವಕಾಶ ನೀಡಬೇಕೆಂಬ ಅರ್ಜಿದಾರರ ಮನವಿಯನ್ನು ತಿರಸ್ಕರಿಸಿ ವಿಚಾರಣಾ ನ್ಯಾಯಾಲಯ ಹೊರಡಿಸಿರುವ ಆದೇಶವನ್ನು ಈ ಅರ್ಜಿಯಲ್ಲಿ ಪ್ರಶ್ನಿಸಲಾಗಿದೆ. 14ನೇ ಆರೋಪಿಯು ಮಾಫಿ ಸಾಕ್ಷಿಯಾಗಲು ಸಲ್ಲಿಸಿರುವ ಅರ್ಜಿಯನ್ನು ಪರಿಗಣಿಸಿ ಸಂಬಂಧಪಟ್ಟ ನ್ಯಾಯಾಲಯ ಆದೇಶ ಹೊರಡಿಸುವ ಮುನ್ನ ತಮ್ಮ ವಾದ ಮಂಡಿಸುವ ಹಕ್ಕು ತಮಗಿದೆ ಎಂಬ ಆಧಾರದಲ್ಲಿ ಅರ್ಜಿದಾರ ದರ್ಶನ್ ಈ ನ್ಯಾಯಾಲಯದ ಮೆಟ್ಟಿಲೇರಿದ್ದಾರೆ. ಆದರೆ, ಈ ವಿಚಾರವು ಈ ಹಿಂದೆಯೇ 'ವಿನಯ ಕುಲಕರ್ಣಿ' ಪ್ರಕರಣದಲ್ಲಿ ಈ ನ್ಯಾಯಾಲಯ ನೀಡಿದ್ದ ತೀರ್ಪಿನಲ್ಲಿ ಸಂಪೂರ್ಣವಾಗಿ ಒಳಗೊಂಡಿದೆ ಎಂದು ಹೈಕೋರ್ಟ್ ಆದೇಶದಲ್ಲಿ ಉಲ್ಲೇಖಿಸಿದೆ.

ವಿನಯ ಕುಲಕರ್ಣಿ ಪ್ರಕರಣದ ಆದೇಶದ ವಿರುದ್ಧ ಸಲ್ಲಿಸಲಾಗಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್ ಸಹ ತಿರಸ್ಕರಿಸಿದೆ. ಅಪರಾಧ ಪ್ರಕ್ರಿಯಾ ಸಂಹಿತೆ (ಸಿಆರ್‌ಪಿಸಿ) ಸೆಕ್ಷನ್ 306ರ ಅನ್ವಯ ಒಬ್ಬ ಸಹ-ಆರೋಪಿ ಮಾಫಿ ಸಾಕ್ಷಿಯಾಗಲು ಅರ್ಜಿ ಸಲ್ಲಿಸಿದಾಗ, ಮತ್ತೊಬ್ಬ ಸಹ-ಆರೋಪಿಗೆ ಇರುವ ಹಕ್ಕುಗಳಿಗೆ ಸಂಬಂಧಿಸಿದಂತೆ ಈ ನ್ಯಾಯಾಲಯ ಈಗಾಗಲೇ ಸಂಕ್ಷಿಪ್ತವಾಗಿ ವಿವರಿಸಿದೆ. ಆ ಪ್ರಕರರಣದಲ್ಲಿ ಈ ನ್ಯಾಯಾಲಯ ನೀಡಿರುವ ತೀರ್ಮಾನಗಳಿಗೆ ಅನುಗುಣವಾಗಿ ಹಾಲಿ ಅರ್ಜಿದಾರರ ಹಕ್ಕನ್ನು ಸೀಮಿತಗೊಳಿಸಲಾಗಿದೆ. ಈ ಹಿನ್ನೆಲೆಯಲ್ಲಿ, ಮಾಫಿ ಸಾಕ್ಷಿಗೆ ಅನುಮೋದನೆ ನೀಡುವುದು ಹಾಗೂ ಅದರ ನಂತರದ ಪ್ರಕ್ರಿಯೆಗಳಿಗೆ ಸಂಬಂಧಿಸಿದಂತೆ ವಿನಯ ಕುಲಕರ್ಣಿ ಪ್ರಕರಣದಲ್ಲಿ ಈ ನ್ಯಾಯಾಲಯ ಹೊರಡಿಸಿದ ಆದೇಶವೇ ಈ ಪ್ರಕರಣಕ್ಕೂ ಅನ್ವಯಿಸುತ್ತದೆ ಎಂದು ಸ್ಪಷ್ಟಪಡಿಸಿದ ನ್ಯಾಯಪೀಠ, ಮಾಫಿ ಸಾಕ್ಷಿಯಾಗುವ ಪ್ರದೂಶ್ ರಾವ್ ಅರ್ಜಿಯನ್ನು ಪರಿಗಣಿಸುವ ಹಂತದಲ್ಲಿ ದರ್ಶನ್‌ಗೆ ಆಕ್ಷೇಪಣೆಗಳನ್ನು ಸಲ್ಲಿಸಲು ಅಥವಾ ವಾದ ಮಂಡಿಸಲು ಅನುಮತಿ ನಿರಾಕರಿಸಿದ ವಿಚಾರಣಾ ನ್ಯಾಯಾಲಯದ ಕ್ರಮವನ್ನು ಎತ್ತಿಹಿಡಿದು, ಅರ್ಜಿ ವಜಾಗೊಳಿಸಿತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News