ಸಭಾಪತಿ ಸ್ಥಾನಕ್ಕೆ ಕಾಂಗ್ರೆಸ್ನ ಸಲೀಂ ಅಹ್ಮದ್, ಬಿಜೆಪಿಯ ಪಿ.ಎಚ್.ಪೂಜಾರ್ ನಾಮಪತ್ರ: ನಾಳೆ ಚುನಾವಣೆ
ಬೆಂಗಳೂರು : ಹೊರಟ್ಟಿ ರಾಜೀನಾಮೆಯಿಂದಾಗಿ ತೆರವಾಗಿರುವ ಪರಿಷತ್ತಿನ ಸಭಾಪತಿ ಸ್ಥಾನಕ್ಕೆ ಅಭ್ಯರ್ಥಿಯಾಗಿ ಕಾಂಗ್ರೆಸ್ನ ಹಿರಿಯ ಸದಸ್ಯ ಸಲೀಂ ಅಹ್ಮದ್ ಹಾಗೂ ಬಿಜೆಪಿ ಸದಸ್ಯ ಪಿ.ಎಚ್. ಪೂಜಾರ್ ಗುರುವಾರ ವಿಧಾನ ಪರಿಷತ್ನ ಕಾರ್ಯದರ್ಶಿ ಜ್ಯೋತಿ ಅವರಿಗೆ ತಮ್ಮ ಉಮೇದುವಾರಿಕೆಯನ್ನು ಸಲ್ಲಿಸಿದರು.
ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಪರಿಷತ್ ಸಭಾನಾಯಕ ಡಾ.ಯತೀಂದ್ರ ಹಾಗೂ ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಸಮ್ಮುಖದಲ್ಲಿ ಕಾಂಗ್ರೆಸ್ನ ಅಭ್ಯರ್ಥಿ ಸಲೀಂ ಅಹ್ಮದ್ ನಾಮಪತ್ರ ಸಲ್ಲಿಸಿದರೆ, ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ಬಿಜೆಪಿಯ ಸಿ.ಟಿ.ರವಿ, ಎನ್.ರವಿಕುಮಾರ್, ಜೆಡಿಎಸ್ನ ಭೋಜೇಗೌಡ, ಶರವಣ ಸಹಿತ ಮೈತ್ರಿಕೂಟದ ನಿಯೋಗದೊಂದಿಗೆ ಪಿ.ಎಚ್.ಪೂಜಾರ್, ಪರಿಷತ್ ಕಾರ್ಯದರ್ಶಿ ಕಚೇರಿಯಲ್ಲಿ ತಮ್ಮ ನಾಮಪತ್ರವನ್ನು ಸಲ್ಲಿಸಿದರು.
ನಾಳೆ(ಆ.14) ಬೆಳಗ್ಗೆ ಸಭಾಪತಿ ಸ್ಥಾನಕ್ಕೆ ಚುನಾವಣೆ ನಡೆಯಲಿದ್ದು, ಆಡಳಿತಾರೂಢ ಕಾಂಗ್ರೆಸ್ಗೆ ಬಹುಮತ ಇರುವುದರಿಂದ ಸಲೀಂ ಅಹ್ಮದ್ ಅವರು ಸಭಾಪತಿಯಾಗಿ ಅವಿರೋಧ ಆಯ್ಕೆಯಾಗುವುದು ಬಹುತೇಕ ಖಚಿತವಾಗಿದೆ. ಸಭಾಪತಿ ಬಸವರಾಜ ಹೊರಟ್ಟಿ ಹಾಗೂ ಉಪಸಭಾಪತಿ ಎಂ.ಕೆ.ಪ್ರಾಣೇಶ್ ರಾಜೀನಾಮೆಯಿಂದ ಸಭಾಪತಿ ಮತ್ತು ಉಪಸಭಾಪತಿಗಳು ಎರಡೂ ಸ್ಥಾನಗಳು ತೆರವಾಗಿವೆ.
‘ಸಭಾಪತಿ ಸ್ಥಾನಕ್ಕೆ ಬಿಜೆಪಿಯವರು ನಾಮಪತ್ರ ಸಲ್ಲಿಸಿರುವುದು ಅವರಿಗೆ ಬಿಟ್ಟ ವಿಚಾರ. ಆದರೆ, ಸರ್ವಾನುಮತದಿಂದ ಆಯ್ಕೆಯಾದರೆ ಒಳ್ಳೆಯದಿತ್ತು. ಚುನಾವಣೆಯಲ್ಲಿ ಗೆಲ್ಲುವ ವಿಶ್ವಾಸವಿದೆ’
-ಸಲೀಂ ಅಹ್ಮದ್, ಪರಿಷತ್ ಸಭಾಪತಿ ಸ್ಥಾನದ ಅಭ್ಯರ್ಥಿ.
‘ಆಡಳಿತ ಪಕ್ಷದ ಸಂವಿಧಾನದ ಬಾಹಿರ ನಡೆಯಿಂದ ಪರಿಷತ್ ಸಭಾಪತಿ ಹುದ್ದೆಗೆ ಚುನಾವಣೆ ನಡೆಯುವಂತಾಗಿದೆ. ಸಂಖ್ಯಾಬಲ ಇರಲಿ, ಇಲ್ಲದಿರಲಿ ಚುನಾವಣೆಯಲ್ಲಿ ಸ್ಪರ್ಧಿಸುವುದು ನಮ್ಮ ಪಕ್ಷದ ನಿಲುವು. ಎಲ್ಲರ ಸಹಮತದಿಂದ ನನ್ನನ್ನು ಈ ಸ್ಥಾನಕ್ಕೆ ಅಭ್ಯರ್ಥಿಯಾಗಲು ಸೂಚಿಸಿದ್ದಾರೆ. ಸೋಲು-ಗೆಲುವು ಸಹಜ, ಸ್ಪರ್ಧೆ ಅಷ್ಟೇ ಮುಖ್ಯ’
-ಪಿ.ಎಚ್.ಪೂಜಾರ್, ಪರಿಷತ್ ಸಭಾಪತಿ ಸ್ಥಾನದ ಅಭ್ಯರ್ಥಿ.